Tuesday, April 16, 2024

Shrimad BhAgavata in Kannada -Skandha-03-Ch-04_02

 

ನೋದ್ಧವೋSಣ್ವಪಿ ಮನ್ನ್ಯೂನೋ ಯದ್ಗುಣೈರ್ನಿರ್ಜಿತಃ[1] ಪ್ರಭುಃ ।

 ಅತೋ ಮದ್ವತ್ ಪುನರ್ಲೋಕಂ ಗ್ರಾಹಯನ್ನಿಹ ತಿಷ್ಠತು ॥೩೨॥

 

ಶ್ರೀಕೃಷ್ಣ ಉದ್ಧವನ ಬಗ್ಗೆ  ಯಾವ ನಿಲುವು ಹೊಂದಿದ್ದ ಎನ್ನುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ಶ್ಲೋಕ ಮೇಲ್ನೋಟದಲ್ಲಿ ಒಂದು ಅರ್ಥವನ್ನು ನೀಡಿದರೆ ಇದರ ಅಂತರಂಗದ ಅರ್ಥ ಭಿನ್ನವಾಗಿದೆ. ಮೇಲ್ನೋಟದಲ್ಲಿ ನೋಡಿದರೆ: “ಉದ್ಧವ ಜ್ಞಾನದಲ್ಲಿ ನನಗಿಂತ ಯಾವ ನಿಟ್ಟಿನಲ್ಲೂ ಕಡಿಮೆ ಇಲ್ಲ; ಆತ ತನ್ನ ಗುಣಗಳಿಂದ ನನ್ನನ್ನು ಸೋಲಿಸಿದವನು.  ಹೀಗಾಗಿ ಆತ ನಾನು ಅವತಾರ ಸಮಾಪ್ತಿ ಮಾಡಿದ ಮೇಲೆ ಲೋಕದ ಜನರಿಗೆ ಜ್ಞಾನೋಪದೇಶ ಮಾಡುತ್ತಾ ಇಲ್ಲೇ ಇರಲಿ” ಎಂದು ಶ್ರೀಕೃಷ್ಣ ಸಂಕಲ್ಪ ಮಾಡಿದ. ಆದ್ದರಿಂದ ಪ್ರಭಾಸ ಕ್ಷೇತ್ರದಲ್ಲಿ ಉಳಿದವರಂತೆ ಉದ್ಧವ ಹೊಡೆದಾಡಿಕೊಂಡು ಸಾಯಲಿಲ್ಲ ಎಂದು ಹೇಳಿದಂತಿದೆ. ಆದರೆ ನಮಗೆ ತಿಳಿದಂತೆ: ಉದ್ಧವ ಶ್ರೀಕೃಷ್ಣನ ಪರಮ ಭಕ್ತ. ಹೀಗಾಗಿ ಶ್ರೀಕೃಷ್ಣ ಆತನಿಗೆ ಎರಡು ಬಾರಿ ಉಪದೇಶ ಮಾಡಿ, ಆ ಜ್ಞಾನ ಸಂದೇಶವನ್ನು ಲೋಕಕ್ಕೆ ನೀಡುವಂತೆ ಹೇಳಿದ್ದ. ಹೀಗಿರುವಾಗ ಜ್ಞಾನದಲ್ಲಿ ಸಮಾನ ಮತ್ತು  ನನ್ನನ್ನು ಗೆದ್ದವನು ಇತ್ಯಾದಿಯಾಗಿ ಇಲ್ಲಿ ಹೇಳಿರುವ ಮಾತಿನ ಅರ್ಥವೇನು ಎನ್ನುವುದನ್ನು ನಾವು ನೋಡಬೇಕು.

 

ಆಚಾರ್ಯ ಮಧ್ವರು ‘ಈ ಶ್ಲೋಕವನ್ನು ನಾವು ಬೇರೆಬೇರೆ ನಿಟ್ಟಿನಲ್ಲಿ ನೋಡಿ ಅರ್ಥ ಮಾಡಿಕೊಳ್ಳಬೇಕು’ ಎನ್ನುವುದನ್ನು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ವಿವರಿಸಿ ಹೇಳಿದ್ದಾರೆ. ಬ್ರಹ್ಮತರ್ಕದಲ್ಲಿ ಹೇಳುವಂತೆ: ಉತ್ತಮೈರಧಿಕತ್ವಂ ವಾ ಸಾಮ್ಯಂ ವಾ ವಿಜಯೋSಪಿ ವಾ ಉಚ್ಯತೇSಪಿತು ನೀಚಾನಾಂ ಮೋಹನಾರ್ಥೇ ವ್ಯಪೇಕ್ಷಯಾ[2]   ಮೂಢದೃಷ್ಟ್ಯನುಸಾರಾದ್ ವಾ ಕಿಞ್ಚಿತ್ಸಾಮ್ಯೇನ ವಾ ಕ್ವಚಿತ್  ಅಂದರೆ: ಒಂದು ಗ್ರಂಥದಲ್ಲಿ  ಒಬ್ಬ ವ್ಯಕ್ತಿಗಿಂತ ಕೆಳಗಿರುವವನನ್ನು ಆ ವ್ಯಕ್ತಿಗಿಂತ ಎತ್ತರದವನು ಎಂದು ಬಿಂಬಿಸಲು ನಾಲ್ಕು ಕಾರಣಗಳಿರುತ್ತವೆ. (೧). ತಾಮಸರನ್ನು ಮೋಹಗೊಳಿಸುವುದಕ್ಕಾಗಿ ಹೇಳುವುದು, (೨). ಒಬ್ಬ ವ್ಯಕ್ತಿಯಲ್ಲಿರುವ ಒಳ್ಳೆಯ ಗುಣವನ್ನು ಅತಿಶಯೋಕ್ತಿಯಿಂದ ಪ್ರಶಂಸಿಸುವುದಕ್ಕಾಗಿ ಹೇಳುವುದು, (೩). ದರ್ಶನ ಭಾಷೆಯಲ್ಲಿ ಹೇಳುವುದು. ಅಂದರೆ: ಒಬ್ಬ ಸಾಮಾನ್ಯ ವ್ಯಕ್ತಿಗೆ ಹೇಗೆ ಕಂಡಿತೋ ಹಾಗೆ ಹೇಳುವುದು (ಒಬ್ಬ ಅಜ್ಞಾನಿಗೆ ಉದ್ಧವ ಶ್ರೀಕೃಷ್ಣನಿಗಿಂತ ದೊಡ್ಡ ಜ್ಞಾನಿ ಎಂದು ಕಾಣಿಸಿರಬಹುದು) ಮತ್ತು (೪) ಸ್ವಲ್ಪ ಮಟ್ಟಿನ ಸಾಮ್ಯವಿರುವಲ್ಲಿ  ಸಾಮ್ಯವಿವಕ್ಷೆಯಿಂದ ಹೇಳುವುದು[ಉದ್ಧವ ಜ್ಞಾನಿಗಳ ಸಾಲಿನಲ್ಲಿ ಅತ್ಯಂತ ಶ್ರೇಷ್ಠ ಸ್ಥಾನದಲ್ಲಿ ನಿಂತಿರುವುದರಿಂದ).

 

ಒಟ್ಟಿನಲ್ಲಿ ಹೇಳಬೇಕೆಂದರೆ: ಒಬ್ಬ ವ್ಯಕ್ತಿ ನಾಶವಾಗುವಾಗ ಆತನ ಜೊತೆಗೆ ಅವನಲ್ಲಿರುವ ಜ್ಞಾನ ನಾಶವಾಗಬಾರದು ಎನ್ನುವುದು ಶ್ರೀಕೃಷ್ಣನ ಸಂಕಲ್ಪ. ಈ ತತ್ತ್ವವನ್ನು ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿಯಲ್ಲೂ  ಜಗತ್ತಿಗೆ ತೋರಿಸಿಕೊಟ್ಟ. ತಾನು ಅವತಾರ ಸಮಾಪ್ತಿ ಮಾಡುವ ಮುನ್ನ ಜ್ಞಾನಿಯಾದ ಉದ್ಧವನಿಗೆ ಅಪೂರ್ವವಾದ ತತ್ತ್ವಜ್ಞಾನವನ್ನು ಶ್ರೀಕೃಷ್ಣ ಭೋದಿಸಿದ. ಅದನ್ನು ಬದರಿ ಕ್ಷೇತ್ರದಲ್ಲಿರುವ  ಸಮಸ್ತ ಋಷಿಗಳಿಗೆ ಉದ್ಧವನ ಮುಖೇನ ತಲುಪುವಂತೆ ಮಾಡಿದ. ಇದರಿಂದಾಗಿ ಆ ಜ್ಞಾನ ಪರಂಪರೆ  ಅಲ್ಲಿನ ಎಲ್ಲಾ ಋಷಿಗಳ ಮುಖೇನ ಗಂಗಾ ನದಿಯಂತೆ ಈ ದೇಶದಲ್ಲಿ ಹರಿದು ಬಂತು.

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ಚತುರ್ಥೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು

*********



[1] “ಗುಣೈರ್ನಿರ್ದಿತಃ” – ಪ್ರಚಲಿತ ಪಾಠ

[2] “ಮೋಹಾರ್ಥಂ ವಾSಪ್ಯುಪೇಕ್ಷಯಾ” – ಪ್ರಚಲಿತ ಪಾಠ

Thursday, April 4, 2024

Shrimad BhAgavata in Kannada -Skandha-03-Ch-04_01

 

ಚತುರ್ಥೋSಧ್ಯಾಯಃ

 

ಉದ್ಧವ ವಿದುರ ಸಂವಾದ- ಭಗವಂತನ ಅವತಾರ ಸಮಾಪ್ತಿ ಸಂಕಲ್ಪ

 

ಉದ್ಧವ ಉವಾಚ

ಭಗವಾನಾತ್ಮಮಾಯಾಯಾ[1] ಗತಿಂ ತಾಮವಲೋಕ್ಯ ಸಃ ।

 ಸರಸ್ವತೀಮುಪಸ್ಪೃಶ್ಯ ವೃಕ್ಷಮೂಲ ಉಪಾವಿಶತ್[2] ॥೦೩॥

 

 ಅಹಂ ಚೋಕ್ತೋ ಭಗವತಾ ಪ್ರಪನ್ನಾರ್ತಿಹರೇಣ ಹ ।

 ಬದರೀಂ ತ್ವಂ ಪ್ರಯಾಹೀತಿ ಸ್ವಕುಲಂ ಸಞ್ಜಿಹೀರ್ಷುಣಾ ॥೦೪॥

 

ವಿದುರನಿಗೆ ಕೃಷ್ಣಕಥೆಯನ್ನು ವಿವರಿಸುತ್ತಿರುವ ಉದ್ಧವ, ಮುಂದೆ ಇಪ್ಪತ್ತಾರು ವರ್ಷಗಳ ನಂತರ ನಡೆಯುವ ಕಥೆಯನ್ನು ಇಲ್ಲಿ ವಿವರಿಸಿದ್ದಾನೆ. ಮುಂದೆ ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯಬೇಕು ಎನ್ನುವುದು ಭಗವಂತನ ಇಚ್ಛೆಯಾಗಿತ್ತು.  ಇದರ ಹಿಂದೆ ಋಷಿ ಶಾಪ ಮತ್ತು ಗಾಂಧಾರಿಯ ಶಾಪವಿರುವ ವಿಷಯ ನಮಗೆ ತಿಳಿದಿದೆ. ಗಾಂಧಾರಿ ತನ್ನ ಜೀವಮಾನದಲ್ಲಿ ಸಂಯಮ ಕಳೆದುಕೊಂಡು ಮಾತನಾಡಿದ ಏಕಮಾತ್ರ ಘಟನೆ ಅದಾಗಿದೆ. ಎಂದೂ ತನ್ನ ಮಕ್ಕಳ ಮೇಲೆ ಮೋಹಪಟ್ಟು ಮಾತನಾಡದ ಆಕೆ,  ಯುದ್ಧದ ನಂತರ, ತನಗೆ ನಮಸ್ಕರಿಸಲು ಬಂದ ಶ್ರೀಕೃಷ್ಣನಿಗೆ ಸಂಯಮ ಕಳೆದುಕೊಂಡು: “ಹೇಗೆ ನನ್ನ ವಂಶ ನಿರ್ವಂಶವಾಯಿತೋ ಹಾಗೇ  ನಿನ್ನ ವಂಶವೂ ನಿರ್ವಂಶವಾಗಲಿ” ಎಂದು ಶಾಪ ನೀಡುತ್ತಾಳೆ.  ಈ ಶಾಪವನ್ನು ಸಂತೋಷವಾಗಿ ಸ್ವೀಕರಿಸಿದ ಶ್ರೀಕೃಷ್ಣ : “ಪತಿವೃತೆಯ ಆಶೀರ್ವಾದ” ಎಂದು ನಗುತ್ತಾ ಹೇಳಿ ಹೊರಟು ಹೋಗುತ್ತಾನೆ. “ಅಂತಹ ಪತಿವೃತೆ ಗಾಂಧಾರಿಯ ಮಾತನ್ನು ಉಳಿಸುವುದಕ್ಕಾಗಿ: ‘ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯಬೇಕು’ ಎಂದು  ಶ್ರೀಕೃಷ್ಣ ಸಂಕಲ್ಪಿಸಿದ” ಎನ್ನುತ್ತಾನೆ ಉದ್ಧವ.

ಹೇಗೆ ಮಹಾಭಾರತ ಯುದ್ಧದಲ್ಲಿ ಭಗವಂತ ಯಾವುದೇ ಆಯುಧ ಹಿಡಿಯದೆ ಇಡೀ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ತನ್ನ ಕಣ್ಣಿನಿಂದ ಹೀರಿದನೋ, ಅದೇ ರೀತಿ, ತನ್ನ ಸಾಮರ್ಥ್ಯದಿಂದ, ತಾನು ಯಾರನ್ನೂ ಕೊಲ್ಲದೆ, ಸಮಸ್ತ ಯಾದವ ಕುಲವನ್ನು ಸಂಹಾರ ಮಾಡುವ ಸಂಕಲ್ಪವನ್ನು ಭಗವಂತ ಮಾಡುತ್ತಾನೆ.

ಪ್ರಭಾಸ ಕ್ಷೇತ್ರಕ್ಕೆ ಬಂದ ಯಾದವರು ದಾನ ಧರ್ಮಾದಿ ಪುಣ್ಯಕರ್ಮಗಳನ್ನು ಮಾಡಿ ಮುಗಿಸಿದ ಮೇಲೆ,  ಶ್ರೀಕೃಷ್ಣನ ಅನುಮತಿಯಂತೆ ಎಲ್ಲರೂ ಮಧ್ಯಪಾನ ಮಾಡುತ್ತಾರೆ. [ಕ್ಷತ್ರಿಯರಿಗೆ ಮಧ್ಯಪಾನ, ಮಾಂಸ ಭಕ್ಷಣೆ ನಿಷಿದ್ಧವಲ್ಲ].  ಮಧ್ಯಪಾನ ಮಾಡಿ ಮೈಮರೆತ ಎಲ್ಲರೂ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ಶ್ರೀಕೃಷ್ಣ ಸರಸ್ವತೀ ನದಿ ನೀರನ್ನು ಆಚಮನ ಮಾಡಿ, ದೂರದಲ್ಲಿನ ಒಂದು ವೃಕ್ಷದ ಕೆಳಗೆ ನಗುತ್ತಾ ಕುಳಿತಿದ್ದ. ತನಗೆ ಶರಣಾದವರ ಸಮಸ್ತ ದುಃಖವನ್ನು ಪರಿಹರಿಸುವ, ಯಾವ ದೋಷದ ಸ್ಪರ್ಶವೂ ಇಲ್ಲದ ನಿರ್ದುಷ್ಟ ಸ್ವರೂಪಿ ಭಗವಂತ, ಯಾದವರ ಸಂಸಾರ ದುಃಖವನ್ನು ಈ ರೀತಿ ಪರಿಹರಿಸಿದ.   ಯಾದವರೆಲ್ಲರೂ ಹೊಡೆದಾಡಿಕೊಂಡು ಸಾಯುತ್ತಿದ್ದಂತೆ ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡುತ್ತಾನೆ.

ಮುಂದೆ ನಡೆಯಲಿರುವ ಈ ಎಲ್ಲಾ ಘಟನೆಗಳನ್ನು ಶ್ರೀಕೃಷ್ಣ ಇಪ್ಪತ್ತಾರು ವರ್ಷಗಳ ಹಿಂದೆ ಸಂಕಲ್ಪ ಮಾಡಿ ಉದ್ಧವನಿಗೆ ವಿವರಿಸಿ, ಆತನಿಗೆ ಸಮಸ್ತ ಧರ್ಮೋಪದೇಶ ಮಾಡಿ ಹೇಳುತ್ತಾನೆ: “ಇದು ನನ್ನ ಸಂದೇಶ. ಇದನ್ನು ನೀನು ಬದರಿಗೆ ಹೋಗಿ ಅಲ್ಲಿರುವ ಋಷಿಗಳಿಗೆ ನೀಡು” ಎಂದು. ಶ್ರೀಕೃಷ್ಣನಿಂದ ಉಪದೇಶ ಪಡೆದು ಬದರಿಗೆ ಹೋಗತ್ತಿರುವ ಉದ್ಧವನಿಗೆ  ದಾರಿ ಮಧ್ಯೆ ವಿದುರ ಸಿಕ್ಕಿದ್ದಾನೆ. ಅಲ್ಲಿ ಉದ್ಧವ ಈ ಎಲ್ಲಾ ವಿವರಗಳನ್ನು ವಿದುರನಿಗೆ ವಿವರಿಸಿದ್ದಾನೆ.

ಈ ಮೇಲಿನ ಶ್ಲೋಕದಲ್ಲಿ ‘ಸ್ವಕುಲಂ ಸಂಜಿಹೀರ್ಷುಣಾ’ ಎನ್ನುವಲ್ಲಿ ‘ಮುಂದೆ(ಇಪ್ಪತ್ತಾರು ವರ್ಷಗಳ ನಂತರ) ಯದುಕುಲ ನಾಶ ಮಾಡುವ ಸಂಕಲ್ಪವನ್ನು ಶ್ರೀಕೃಷ್ಣ ಮಾಡಿದ’ ಎಂದು ಹೇಳಲಾಗಿದೆ. ಆದರೆ ‘ಯದುಕುಲ ನಾಶವಾಗುವ ಕಾಲದಲ್ಲಿ ಶ್ರೀಕೃಷ್ಣ ಉದ್ಧವನಿಗೆ ಉಪದೇಶ ಮಾಡಿದ’ ಎನ್ನುವ ವಿಷಯವೂ ಈ ಅಧ್ಯಾಯದಲ್ಲಿ ಬರುತ್ತದೆ. ಇದು ನಮಗೆ ಸ್ವಲ್ಪ ಗೊಂದಲವನ್ನುಂಟು ಮಾಡುತ್ತದೆ. ಈ ಗೊಂದಲವನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಪರಿಹರಿಸಿದ್ದಾರೆ. ‘ಆತ್ಮಮಾಯಾಯಾಃ ಆತ್ಮಸಾಮರ್ಥ್ಯಸ್ಯ ಗತಿಂ ಪೂರ್ವಮೇವಾವಲೋಕ್ಯ[3] ಅಂದರೆ: ಯದುಕುಲ ನಾಶದ ತನ್ನ ಸಾಮರ್ಥ್ಯದ ಮುಂದಿನ ಕಾರ್ಯತಂತ್ರವನ್ನು ಭಗವಂತ ಮೊದಲೇ ನಿರ್ಧರಿಸಿದ್ದ.

ಗರುಡ ಪುರಾಣದಲ್ಲಿ ಹೇಳುವಂತೆ: ಜ್ಞಾತ್ವಾ ಕತಿಪಯೈರ್ವಷ್ಯೈಃ ಪೂರ್ವಮೇವ ಜನಾರ್ದನಃ ಮೌಸಲಂ ಜ್ಞಾನಸನ್ತತ್ಯಾ[4] ಉದ್ಧವಂ ಬದರೀಂ ನಯತ್[5] ಸ ಜ್ಞಾನಂ[6] ತತ್ರ ವಿಸ್ತೀರ್ಯ ಪುನರ್ದ್ವಾರವತೀಂ ಯಯೌ  ಪೂರ್ವಮೇವೋಪದಿಷ್ಟೋSಪಿ ಹರಿಣಾ ಜ್ಞಾನಮುದ್ಧವಃ | ಸ್ವರ್ಗಾರೋಹಣಕಾಲೇ ತು ಪುನಃ ಪಪ್ರಚ್ಛ ಕೇಶವಮ್ ಪುನಃ ಶ್ರುತ್ವಾ ಬದರ್ಯೇ ತು[7] ವಷತ್ರಯಮುವಾಸ ಹ ಜ್ಞಾನಂ ಸಂಸ್ಥಾಪ್ಯ ಪಶ್ಚಾಚ್ಚ ಸ್ವೇಚ್ಛಯಾ ಸ್ವರ್ಗತಃ ಪ್ರಭುಃ” ಇತಿ ಗಾರುಡೇ[8] ಮುಂದೆ ಇಪ್ಪತ್ತಾರು ವರ್ಷಗಳ ನಂತರ ನಡೆಯಲಿರುವ ಯದುಕುಲ ನಾಶದ ವಿಷಯವನ್ನು ಉದ್ಧವನಿಗೆ ಹೇಳಿ ಆಗಲೇ ಆತನಿಗೆ ತತ್ವೋಪದೇಶ ನೀಡಿದ ಶ್ರೀಕೃಷ್ಣ,  ಆತನಲ್ಲಿ ಆ ಜ್ಞಾನವನ್ನು ಬದರಿಗೆ ತೆರಳಿ ಅಲ್ಲಿನ ಋಷಿಗಳಿಗೆ ನೀಡುವಂತೆ ಹೇಳಿದ್ದ.  ಬದರಿಗೆ ತೆರಳಿದ ಉದ್ಧವ ಶ್ರೀಕೃಷ್ಣನಿಂದ ಪಡೆದ ಜ್ಞಾನವನ್ನು ಅಲ್ಲಿನ ಋಷಿಗಳಿಗೆ ನೀಡಿ ಮತ್ತೆ ಮರಳಿ ದ್ವಾರಕೆಗೆ ಬಂದಿದ್ದ.  ಮುಂದೆ ಯಾದವ ಸಂಹಾರ ಕಾಲದಲ್ಲಿ ಮರಳಿ ಶ್ರೀಕೃಷ್ಣ ಉದ್ಧವನಿಗೆ ಉಪದೇಶ ನೀಡಿ ಮತ್ತೆ ಬದರಿಗೆ ಕಳುಹಿಸಿಕೊಡುತ್ತಾನೆ. ಈ ರೀತಿ ಮತ್ತೆ ಬದರಿಗೆ ಬಂದ ಉದ್ಧವ ಅಲ್ಲಿ ಮೂರುವರ್ಷಗಳ ಕಾಲ ವಾಸವಿದ್ದು, ತಾನು ಶ್ರೀಕೃಷ್ಣನಿಂದ ಪಡೆದ ಜ್ಞಾನವನ್ನು ಅಲ್ಲಿನ ಋಷಿಗಳಿಗೆ ನೀಡಿ, ಆನಂತರ ಸ್ವಇಚ್ಛೆಯಿಂದ ದೇಹತ್ಯಾಗ ಮಾಡುತ್ತಾನೆ.  ಈ ಹಿನ್ನೆಲೆ ತಿಳಿದಾಗ ಮೇಲಿನ ಮಾತಿನಲ್ಲಿನ ಗೊಂದಲ ಪರಿಹಾರವಾಗುತ್ತದೆ.

ಹೀಗೆ ಉದ್ಧವ ಶ್ರೀಕೃಷ್ಣನ ಅವತಾರ ಸಮಾಪ್ತಿಯ ಸಂಕಲ್ಪದ ವಿವರಣೆಯನ್ನು ವಿದುರನಿಗೆ ನೀಡಿ, “ಗಂಗಾನದಿ ತೀರದಲ್ಲಿರುವ ಮೈತ್ರೇಯರು ನಿನಗೆ ಶ್ರೀಕೃಷ್ಣ ನೀಡಿರುವ ಜ್ಞಾನೋಪದೇಶವನ್ನು ನೀಡಲಿದ್ದಾರೆ” ಎಂದು ಹೇಳಿ ಬದರಿಗೆ ಹೊರಟು ಹೋಗುತ್ತಾನೆ.

 

 ರಾಜೋವಾಚ

 ನಿಧನಮುಪಗತೇಷು ವೃಷ್ಣಿಭೋಜೇಷ್ವಧಿರಥಯೂಥಪಯೂಥಪೇಷು ಮುಖ್ಯಃ ।

 ಸ ತು ಕಥಮವಶಿಷ್ಟ ಉದ್ಧವೋ ಯತ್[9] ಪ್ರಭುರಪಿ ತತ್ಯಜ ಆಕೃತಿಂ ತ್ರ್ಯಧೀಶಃ ॥೨೮॥

 

ಈ ಹಂತದಲ್ಲಿ  ಶುಕಾಚಾರ್ಯರಿಂದ ಭಾಗವತ ಶ್ರವಣ ಮಾಡುತ್ತಿರುವ ಪರೀಕ್ಷಿತನಿಗೊಂದು ಪ್ರಶ್ನೆ ಬರುತ್ತದೆ.  ಋಷಿ ಶಾಪ ಮತ್ತು ಗಾಂಧಾರಿಯ ಶಾಪದಿಂದಾಗಿ ಇಡೀ ಯಾದವ ಕುಲ ನಾಶವಾಯಿತು. ಮಹಾರಥಿಗಳ ಸಮುದಾಯ ಮತ್ತು ಅಂತಹ ಮಹಾರಥಿಗಳ ಮುಖಂಡರೆಲ್ಲರೂ ಹೊಡೆದಾಡಿಕೊಂಡು ಸತ್ತರು. ಮೂರು ಲೋಕದ ಒಡೆಯನಾದ(ತ್ರ್ಯಧೀಶಃ) ಸ್ವಯಂ ಶ್ರೀಕೃಷ್ಣನೇ ಆಕೃತಿಯನ್ನು ತೊರೆದ (ಅವತಾರ ಸಮಾಪ್ತಿ ಮಾಡಿದ). ಹೀಗಿರುವಾಗ ಯಾದವರಲ್ಲಿ ಮುಖ್ಯನಾದ, ಮಹಾಜ್ಞಾನಿ ಉದ್ಧವ ಹೇಗೆ ಬದುಕುಳಿದ? ಇದು ಪರೀಕ್ಷಿತನ ಪ್ರಶ್ನೆ.

ಈ ಮೇಲಿನ ಶ್ಲೋಕದಲ್ಲಿ  ಆಕೃತಿಂ ತತ್ಯಜೇ’ ಎನ್ನುವ ಮಾತು ಬಳಕೆಯಾಗಿದೆ. ಈ ಮಾತನ್ನು ಮೇಲ್ನೋಟದಲ್ಲಿ ನೋಡಿದರೆ ‘ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ’ ಎಂದು ಹೇಳಿದಂತೆ ಕಾಣುತ್ತದೆ.  ಜ್ಞಾನಾನಂದಸ್ವರೂಪನಾದ ಭಗವಂತನಿಗೆ ಅದೆಲ್ಲಿಯ ದೇಹ? ಅಂತಹ ಭಗವಂತ ದೇಹ ತೊರೆಯುವುದು ಎಂದರೇನು? ಈ ಎಲ್ಲಾ ಗೊಂದಲಗಳನ್ನು ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಬಗೆಹರಿಸಿದ್ದಾರೆ: ಆಕೃತಿಂ  ಪೃಥಿವೀಮ್ -  ಶರೀರಮಾಕೃತಿರ್ದೇಹಃ ಕುಃ ಪೃಥ್ವೀ ಚ ಮಹೀ ತಥಾ”  ಹ್ಯಭಿಧಾನೇ[10] ಇಲ್ಲಿ ಹೇಳುವಂತೆ:  ‘ಆಕೃತಿ, ದೇಹ, ಕಂ, ಪೃಥ್ವಿ ಮತ್ತು  ಮಹೀ’  ಈ ಎಲ್ಲಾ ಶಬ್ದಗಳು ಸಮನಾರ್ಥಕ ಪದಗಳು.  ಈ ಅರ್ಥದಂತೆ ನೋಡಿದಾಗ: ಮೇಲಿನ ಮಾತು “ಭಗವಂತ ಭೂಮಿಯನ್ನು ತ್ಯೆಜಿಸಿದ” ಎಂದು ಹೇಳಿದಂತಾಗುತ್ತದೆ. ಆದರೆ ಸರ್ವಾಂತರ್ಯಾಮಿ, ಸರ್ವವ್ಯಾಪ್ತ ಭಗವಂತ ಭೂಮಿಯನ್ನು ತ್ಯಜಿಸಿದ ಎನ್ನುವುದು ಇಲ್ಲಿ  ಕೂಡುವುದಿಲ್ಲ. ಈ ಸಮಸ್ಯೆಗೆ  ಸ್ಕಾಂಧ ಪುರಾಣದಲ್ಲಿ ಉತ್ತರವಿದೆ. ಅಲ್ಲಿ ಹೇಳುವಂತೆ: ಪೃಥಿವೀಲೋಕಸನ್ತ್ಯಾಗೋ ದೇಹತ್ಯಾಗೋ ಹರೇಃ ಸ್ಮೃತಃ ನಿತ್ಯಾನನ್ದಸ್ವರೂಪತ್ವಾದನ್ಯನ್ನೈವೋಣ್ಪದ್ಯತೇ[11] ದರ್ಶಯೇಜ್ಜನಮೋಹಾಯ ಸದೃಶೀಂ ಮೃತಕಾಕೃತಿಮ್ ನಟವದ್ ಭಗವಾನ್ ವಿಷ್ಣುಃ ಪರಜ್ಞಾನಾತ್ಮಕೋ ವಿಭುಃ[12]ಇತಿ ಸ್ಕಾನ್ದೇ  ಮಾನವ ರೂಪಿಯಾಗಿ ನಮ್ಮ ಕಣ್ಣಿಗೆ ಕಂಡ ಭಗವಂತ,  ಅವತಾರ ಸಮಾಪ್ತಿ ಮಾಡಿದಾಗ, ನಮ್ಮ ಕಣ್ಣಿಗೆ ಕಾಣುತ್ತಿದ್ದ ಆತನ ಶರೀರ ಅದೃಶ್ಯವಾಗುತ್ತದೆ. ಉಳಿದಂತೆ ಅಲ್ಲಿ  ಮೃತ ದೇಹ ಕಾಣುವಂತೆ ಮಾಡಿ ಜನರಿಗೆ ಭ್ರಮೆ ಬರಿಸಿರುವುದು ಭಗವಂತನ ಲೀಲಾ ನಾಟಕದ ಒಂದು ಭಾಗವಷ್ಟೇ. ಮುಂದೆ ಭಾಗವತದಲ್ಲೇ ಹೇಳುವಂತೆ(೧೧.೩೧): ರಾಜನ್ ಪರಸ್ಯ ತನುಭೃಜ್ಜನನಾಪ್ಯಯೇಹಾ[13] ಮಾಯಾವಿಡಮ್ಬನಮವೈಹಿ ಯಥಾ ನಟಸ್ಯ’ ಇತಿ ಚ  : ನಮಗೆ ಕಾಣುವ ಭಗವಂತನ ಜನನ-ಮರಣ  ಇತ್ಯಾದಿ ವ್ಯಾಪಾರಗಳು ಕೇವಲ ಆತನ ಲೀಲಾ ನಾಟಕವಷ್ಟೇ. ಹೀಗಾಗಿ ಶ್ರೀಕೃಷ್ಣ ಶರೀರ ತ್ಯಾಗ  ಮಾಡಿದ ಎಂದರೆ : ನಮ್ಮ ಪಾಲಿಗೆ ಅದೃಶ್ಯನಾದ ಎಂದರ್ಥ.

 

[ಯದುಕುಲ ನಾಶಕ್ಕೆ ಕೇವಲ ಗಾಂಧಾರಿಯ ಶಾಪವೊಂದೇ ಕಾರಣವಲ್ಲ. ಜೊತೆಗೆ ಋಷಿ ಶಾಪವೂ ಕಾರಣವಾಗಿದೆ. ಶ್ರೀಕೃಷ್ಣನ ಮಗ ಸಾಂಬ ಯದುಕುಲದಲ್ಲಿ ಅತ್ಯಂತ ಸುಂದರ ವ್ಯಕ್ತಿಯಾಗಿದ್ದ. ಒಮ್ಮೆ ಯಾದವರು ಸಾಂಬನಿಗೆ ಗರ್ಭಿಣಿ ವೇಷ ತೊಡಿಸಿ, ಆತನನ್ನು ದೂರ್ವಾಸ ಮುನಿ ತಪಸ್ಸಿಗೆ ಕುಳಿತಿದ್ದ ಸ್ಥಳಕ್ಕೆ ಕರೆತಂದು, ಅವರಲ್ಲಿ: “ಈಕೆಗೆ ಗಂಡು ಮಗುವಾಗುತ್ತದೋ ಅಥವಾ ಹೆಣ್ಣು ಮಗುವಾಗುತ್ತದೋ” ಎಂದು ಕೇಳುತ್ತಾರೆ. ಜ್ಞಾನ ದೃಷ್ಟಿಯಲ್ಲಿ ಎಲ್ಲವನ್ನೂ ಕಂಡ ದುರ್ವಾಸರು: “ಈತನ ಹೊಟ್ಟೆಯಲ್ಲಿ ಕಬ್ಬಿಣದ ಸಲಾಖೆ ಹುಟ್ಟುತ್ತದೆ ಮತ್ತು ಅದರಿಂದ ನಿಮ್ಮ ವಂಶ ನಾಶವಾಗುತ್ತದೆ” ಎಂದು ಶಾಪ ನೀಡುತ್ತಾರೆ. ಇದರಿಂದಾಗಿ ಸಾಂಬ ಕಬ್ಬಿಣದ ಸಲಾಖೆಗೆ ಜನ್ಮ ನೀಡುತ್ತಾನೆ. ಈ ಘಟನೆಯಿಂದ ಬೆದರಿದ ಯಾದವರು  ಆ ಸಲಾಖೆಯನ್ನು ಗಂಧದಂತೆ ತೇಯ್ದು ಸಮುದ್ರಕ್ಕೆ ಎಸೆಯುತ್ತಾರೆ. ಈ ಗಂಧ ಸಮುದ್ರದ ತಡಿಯಲ್ಲಿ ಬೆಳೆಯುವ ಮುಳ್ಳಿನ ಗಿಡಕ್ಕೆ ಗೊಬ್ಬರವಾಗುತ್ತದೆ. ಮುಂದೆ ಇದೇ ಮುಳ್ಳಿನ ಗಿಡಗಳಿಂದ ಯಾದವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು  ಸಾಯುವಂತಾಗುತ್ತದೆ. ಭಗವಂತ ಎಂದೂ ಜ್ಞಾನಿಗಳ ಮಾತನ್ನು ಸುಳ್ಳಾಗಿಸುವುದಿಲ್ಲ. ಸಮುದ್ರದ ತಡಿಯಲ್ಲಿ ಸಿಕ್ಕ ಆ ಕಬ್ಬಿಣದ ಸಲಾಖೆಯ ಒಂದು ಚಿಕ್ಕ ಭಾಗವನ್ನು ಬೇಡನೊಬ್ಬ ತನ್ನ ಬಾಣದ ತುದಿಯಲ್ಲಿ ಬಳಸುತ್ತಾನೆ. ಈ ಬಾಣವೇ ಶ್ರೀಕೃಷ್ಣನ ಅವತಾರ ಸಮಾಪ್ತಿಗೆ ಕಾರಣವಾಗುತ್ತದೆ.  ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಪರೀಕ್ಷತ ಮೇಲಿನ ಪ್ರಶ್ನೆ ಹಾಕಿದ್ದಾನೆ. ಪತಿವೃತೆ ಮತ್ತು ಋಷಿ ಶಾಪವನ್ನು ನಿಜವಾಗಿಸುವುದಕ್ಕೆ ಸ್ವಯಂ ಭಗವಂತನೇ ಸಾಕ್ಷಿಯಾಗಿ ನಿಂತು ತನ್ನ ಅವತಾರ ಸಮಾಪ್ತಿ ಮಾಡಿದ. ಆದರೆ ಯಾದವರಲ್ಲೇ ಒಬ್ಬನಾದ ಉದ್ಧವ ಹೇಗೆ  ಈ ಘಟನೆಯಿಂದ ಪಾರಾದ ಎನ್ನುವುದು ಆತನ ಪ್ರಶ್ನೆ].



[1] “ಭಗವಾನ್ ಸ್ವಾತ್ಮಮಾಯಾಯಾಃ” -ಪ್ರಚಲಿತ ಪಾಠ, “ಭಗವಾಂಸ್ತ್ವಾತ್ಮಮಾಯಾಯಾ” – ಎಂದು ಕೆಲವರು.

[2] “ವೃಕ್ಷಮೂಲಮುಪಾವಿಶತ್” – ಪ್ರಚಲಿತ ಪಾಠ

[3]“ಪೂರ್ವಮೇವಾsಲೋಚ್ಯ”-ಪಾಠಾನ್ತರ

[4] “ಜ್ಞಾನಸಮ್ಪತ್ತ್ಯೈ” – ಎಂದು ಕೆಲವರು

[5] “ನಯನ್” – ಪಾಠಾನ್ತರ

[6] “ತಜ್ಞಾನಂ” – ಎಂದು ಕೆಲವರು

[7] “ಬದರ್ಯಾಂ ಚ” – ಎಂದು ಕೆಲವರು

[8] “ಇತಿ ಚ ಗಾರುಡೇ” – ಎಂದು ಕೆಲವರು

[9] ಉದ್ಧವೋsಯಮ್ - ಪಾಠಾನ್ತರ

[10] “ಇತ್ಯಾಭಿಧಾನಮ್”- ಪ್ರಚಲಿತ ಪಾಠ

[11] “ನೈವೋಪಲಭ್ಯತೇ” – ಪ್ರಚಲಿತ ಪಾಠ, “ಅನ್ಯೋ ನೈವೋಪಲಭ್ಯತೇ” – ಎಂದು ಕೆಲವರು.

[12] “ಪರಜ್ಞಾನಾಕೃತಿಃ ಸ್ವಯಮ್” – ಪ್ರಚಲಿತ ಪಾಠ, ““ಪರಜ್ಞಾನಾಕೃತಿಃ ಸದಾ”, “ಪರಂ ಪರಜ್ಞಾನಾಕೃತಿಃ ಸದಾ” ಎಂದೂ ಹೇಳುತ್ತಾರೆ.

[13] “-ಪ್ಯಯೇಹಾಂ ಮಾಯಾವಿಡಮ್ಬನ-“ , [13] “-ಪ್ಯಯೇಹಾಂ ಮಾಯಾಂ ವಿಡಮ್ಬನ-“ ಎಂದು ಕೆಲವರು.