Sunday, June 1, 2014

Shrimad BhAgavata in Kannada -Skandha-02-Ch-05(05)

ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ
ವಾಸುದೇವಾತ್ ಪರೋ ಬ್ರಹ್ಮನ್  ನ ಚಾನ್ಯೋSರ್ಥೋSಸ್ತಿ ತಾತ್ತ್ವತಃ ೧೪

ಮೊದಲ ಸ್ಕಂಧದಲ್ಲಿ ವಿಶ್ಲೇಶಿಸಿದಂತೆ  ಭಾಗವತದ ಹಲವು ಶ್ಲೋಕಗಳಲ್ಲಿ ನಾವು ವೇದಮಂತ್ರದ ಭಾಗವನ್ನು  ಕಾಣಬಹುದು.  ಈ ಮೇಲಿನ ಶ್ಲೋಕವೂ ಕೂಡಾ ವೇದ ಮಂತ್ರದ ಭಾಗವಾಗಿದೆ. ವೇದದಲ್ಲಿ ಹೀಗೆ ಹೇಳಿದ್ದಾರೆ: ದ್ರವ್ಯಂ ಕರ್ಮಚ ಕಾಲಶ್ಚ ಸ್ವಭಾವೋ  ಜೀವ ಏವ ಚ   ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯ  ಈ ವೇದ ಮಂತ್ರದ ಪೂರ್ವಾರ್ಧವೇ ಮೇಲಿನ ಶ್ಲೋಕದ ಪೂರ್ವಾರ್ಧವಾಗಿರುವುದನ್ನು ಇಲ್ಲಿ ನಾವು ಕಾಣುತ್ತೇವೆ.
ದ್ರವ್ಯ, ಕರ್ಮ, ಕಾಲ, ಸ್ವಭಾವ ಮತ್ತು ಜೀವ ಈ ಐದರ  ಸಮಷ್ಟಿ  ಈ ಪ್ರಪಂಚ. ಸೃಷ್ಟಿಗೂ ಮೊದಲು ಜೀವನಿದ್ದ, ಅವನಿಗೆ ಅವನದೇ ಆದ ಸ್ವಭಾವವಿತ್ತು. ಆದರೆ ಅದರ ಅಭಿವ್ಯಕ್ತಿ ಆತನಿಗಿರಲಿಲ್ಲ. ಹೇಗೆ ಒಂದು ಬೀಜದಲ್ಲಿ ಮರವಾಗಿ ಬೆಳೆಯುವ ಶಕ್ತಿ ಹುದುಗಿರೋತ್ತದೋ ಹಾಗೇ ಜೀವನಲ್ಲಿ ಅವನದೇ ಆದ ಜೀವಸ್ವಭಾವ ಅನಾದಿನಿತ್ಯವಾಗಿ ಹುದುಗಿರುತ್ತದೆ. ಹೇಗೆ ಬೀಜವನ್ನು ಬಿತ್ತದೇ ಇದ್ದರೆ ಆ ಬೀಜದೊಳಗಿನ ಶಕ್ತಿ ಅಭಿವ್ಯಕ್ತಿ ಸಾಧ್ಯವಿಲ್ಲವೋ ಹಾಗೇ ಭಗವಂತ ಸೃಷ್ಟಿ ಮಾಡದೇ ಇದ್ದರೆ ಜೀವಸ್ವಭಾವದ ಅಭಿವ್ಯಕ್ತಿ ಸಾಧ್ಯವಿಲ್ಲ. ಹೇಗೆ ಪ್ರತಿಯೊಂದು ವಿಧದ ಬೀಜ ಬಿತ್ತನೆಗೆ ಬೇರೆ ಬೇರೆ ಕಾಲವಿದೆಯೋ ಹಾಗೇ ಪ್ರತಿಯೊಂದು ಜೀವದ ಅಭಿವ್ಯಕ್ತಿಗೆ ಒಂದು ಕಾಲವಿದೆ. ಸೃಷ್ಟಿಯಲ್ಲಿ ಯಾವ-ಯಾವ ಸ್ವಭಾವ ಯಾವ-ಯಾವ ಕಾಲದಲ್ಲಿ ಸೃಷ್ಟಿಯಾಗಬೇಕು ಎನ್ನುವುದು ಭಗವಂತನ ನಿಯಮ ಮತ್ತು ಅದರಂತೆ ಎಲ್ಲವೂ ಸೃಷ್ಟಿಯಾಗುತ್ತದೆ.   ಸ್ವಭಾವದ ಅಭಿವ್ಯಕ್ತಿಯಾಗುವ ಕಾಲ ಬಂದಾಗ ಭಗವಂತ ಜೀವನಿಗೆ ಮಣ್ಣು-ನೀರು-ಬೆಂಕಿಯ ಸಮಷ್ಟಿಯಿಂದಾದ(ದ್ರವ್ಯ) ದೇಹ ಕೊಡುತ್ತಾನೆ. ಹೀಗೆ ಜನ್ಮತಳೆದ ಜೀವ ತನ್ನ ಸ್ವಭಾವಕ್ಕನುಗುಣವಾಗಿ ಕರ್ಮವನ್ನು ಮಾಡುತ್ತಾನೆ. ಈ ಎಲ್ಲಾ ಕ್ರಿಯೆಗಳು ಭಗವಂತನ ಅಧೀನವಾಗಿ ಅವನ ಇಚ್ಛೆಯಂತೆ ನಡೆಯುತ್ತದೆ.
ಇಲ್ಲಿ ಹೇಳಿರುವ ‘ಜೀವರಲ್ಲಿ’ ಚತುರ್ಮುಖನೂ ಒಬ್ಬ. ಹೀಗಾಗಿ ಚತುರ್ಮುಖನನ್ನು ಸೃಷ್ಟಿ ಮಾಡಿದ ಭಗವಂತನಿಗಿಂತ ಮಿಗಿಲಾದ ಅಥವಾ ಅದಕ್ಕೆ ಸಮನಾದ(ತದ್ವತ್/ತಾತ್ತ್ವತಃ) ಇನ್ನೊಂದು ಶಕ್ತಿ ಇಲ್ಲ. ಈ ಶ್ಲೋಕದಲ್ಲಿ  ಚತುರ್ಮುಖ ನಾರದರನ್ನು ‘ಬ್ರಹ್ಮನ್’ ಎಂದು ಸಂಬೋಧಿಸಿರುವುದನ್ನು ಕಾಣುತ್ತೇವೆ.  ‘ಬ್ರಹ್ಮನ್’ ಎಂದರೆ ಭಗವಂತನನ್ನು ತಿಳಿದ ಜ್ಞಾನಿ ಎಂದರ್ಥ. “ಭಗವಂತನನ್ನು ತಿಳಿದ ನಿನಗೆ ಎಲ್ಲವೂ ತಿಳಿದಿದೆ, ಆದರೂ ಪ್ರಪಂಚದ ಜನರ ಸಂದೇಹ ನಿವಾರಣೆಗಾಗಿ, ಅವರ ಮೇಲಿನ ಕಾರುಣ್ಯದಿಂದ ಈ ರೀತಿ ನೀನು ಪ್ರಶ್ನೆ ಮಾಡಿದ್ದೀಯ” ಎನ್ನುವ ಧ್ವನಿ ಆ ಸಂಬೋಧನೆಯ ಹಿಂದಿದೆ.
ಒಟ್ಟಿನಲ್ಲಿ ಹೇಳಬೇಕೆಂದರೆ- “ಆ ಭಗವಂತನೇ ಎಲ್ಲರ ಜಗದ್ಗುರು, ಆತನೇ ಎಲ್ಲವುದರ ಸೂತ್ರದಾರ, ಆತ ಕುಣಿಸಿದಂತೆ ನಾವು ಕುಣಿಯುತ್ತೇವೆ. ಅಂಥಹ ಭಗವಂತನಿಗೆ ನಮ್ಮ ನಮಸ್ಕಾರ. ಆತನನ್ನು ಬಿಟ್ಟು ಜಗತ್ತಿನಲ್ಲಿ ಯಾವುದೇ ಅಸ್ತಿತ್ತ್ವವಿಲ್ಲ” ಎಂದಿದ್ದಾನೆ ಚತುರ್ಮುಖ. ಚತುರ್ಮುಖನ ಈ ಮಾತನ್ನು ಕೇಳಿದಾಗ ನಮಗೊಂದು ಸಂಶಯ ಬರುತ್ತದೆ. ವೇದ ಪುರಾಣಗಳಲ್ಲಿ ಹಲವು ಕಡೆ ಚತುರ್ಮುಖನೇ ಸೃಷ್ಟಿ ಮಾಡಿದ ಎನ್ನುವಂತೆ ಹೇಳಿದ್ದಾರೆ. ಉದಾಹರಣೆಗೆ ಋಗ್ವೇದದಲ್ಲಿ ಹೇಳುವಂತೆ: ಪ್ರಜಾಪತೇ ನ ತ್ವದೇತಾನ್ಯನ್ಯೋ ವಿಶ್ವಾ ಜಾತಾನಿ ಪರಿ ತಾ ಬಭೂವ (೧೦.೧೨೧.೧೦). ಪ್ರಜಾಪತಿ ಎನ್ನುವ ಹೆಸರು ಚತುರ್ಮುಖನಿಗೂ ಇರುವುದರಿಂದ ಇಲ್ಲಿ ಮೇಲ್ನೋಟಕ್ಕೆ ಚತುರ್ಮುಖನೇ ಆದಿಪುರುಷ ಎನ್ನುವ ಅರ್ಥ ಮೇಲ್ನೋಟಕ್ಕೆ ಕಾಣುತ್ತದೆ. ಈ ರೀತಿಯ ಸಮಸ್ಯೆಗೆ  ಸ್ವಯಂ ಚತುರ್ಮುಖನೇ ಉತ್ತರ ಹೇಳಿರುವುದನ್ನು ಮುಂದಿನ ಶ್ಲೋಕದಲ್ಲಿ ಕಾಣಬಹುದು.

ನಾರಾಯಣಪರಾ ವೇದಾ ದೇವಾ ನಾರಾಯಣಾಂಗಜಾಃ
ನಾರಾಯಣಪರಾ ಲೋಕಾ ನಾರಾಯಣಪರಾ ಮಖಾಃ ೧೫

ನಾರಾಯಣಪರೋ ಯೋಗೋ ನಾರಾಯಣಪರಂ ತಪಃ
ನಾರಾಯಣಪರಂ ಜ್ಞಾನಂ ನಾರಾಯಣಪರಾ ಗತಿಃ ೧೬

ಈ ಮಂತ್ರ ನಾರಾಯಣ ಉಪನಿಷತ್ತಿನ ಅರ್ಥಾನುರೂಪವಾಗಿದೆ. [ಈ ಕುರಿತು ಈಗಾಗಲೇ ಒಂದನೇ ಸ್ಕಂಧದಲ್ಲಿ ಸ್ವಲ್ಪ ಮಟ್ಟಿಗೆ ವಿಶ್ಲೇಶಿಸಿದ್ದೇವೆ. ಉಲ್ಲೇಖಿತ: ೦೧.೦೨.೨೯] ಮಹಾನಾರಾಯಣ ಉಪನಿಷತ್ತಿನಲ್ಲಿ ಹೇಳಿರುವ ಮಾತನ್ನೇ ಇಲ್ಲಿ ಚತುರ್ಮುಖನ ಅನುಸಂಧಾನವಾಗಿ ಭಾಗವತ ನಮ್ಮ ಮುಂದಿಡುತ್ತದೆ. ಇಲ್ಲಿ ‘ನಾರಾಯಣ ಪರಾಃ ವೇದಾಃ’ ಎಂದಿದ್ದಾರೆ.  ನಮಗೆ ತಿಳಿದಂತೆ ವೇದದಲ್ಲಿ ಅನೇಕ ದೇವತೆಗಳ ಉಲ್ಲೇಖ ಬರುತ್ತದೆ ಮತ್ತು ಆ ದೇವತೆಯೇ ಪರಶಕ್ತಿ  ಎಂದು ವೇದ ಹೇಳುವಂತೆ ಕಾಣುತ್ತದೆ. ಆದರೆ  ಮುಖ್ಯಾರ್ಥವಾಗಿ ವೇದದ ಯಾವ ಮಂತ್ರ ತೆಗೆದುಕೊಂಡರೂ ಕೂಡಾ ಅದು ಹೇಳುವುದು ನಾರಾಯಣನನ್ನೇ ಹೊರತು ಇನ್ಯಾರನ್ನೋ ಅಲ್ಲ. [ಈ ಕುರಿತು ಇನ್ನೂ ಹೆಚ್ಚಿನ ವಿವರಣೆಯನ್ನು ಓದುಗರು ಮೊದಲ ಸ್ಕಂಧದ  ಭಾಗವತದ ಮಂಗಲ ಪದ್ಯದಲ್ಲಿ ಕಾಣಬಹುದು. ಉಲ್ಲೇಖಿತ: ೦೧.೦೧.೦೧].   ‘ನಾರಾಯಣ’ ಎನ್ನುವ ಭಗವಂತನ ನಾಮದ ಶಬ್ದನಿಷ್ಪತ್ತಿ ಕೂಡಾ ಇದನ್ನೇ ಹೇಳುತ್ತದೆ. ‘ನಾರ’ ಎಂದರೆ ಅರ(ದೋಷ) ಇಲ್ಲದ್ದು. ಅಂದರೆ ವೇದ. ಅಯನ ಎಂದರೆ ತಿಳಿಯಲ್ಪಡುವವನು.  ಆದ್ದರಿಂದ ನಾರಾಯಣ ಎಂದರೆ ವೇದಗಳಿಂದ ತಿಳಿಯಲ್ಪಡುವ, ಸರ್ವವೇದ ಪ್ರತಿಪಾದ್ಯ ವಾಸುದೇವ.
 ‘ದೇವಾ ನಾರಾಯಣಾಂಗಜಾಃ’. ದೇವತೆಗಳು ಭಗವಂತನ ಅಂಗಭೂತರು.  ವೇದದಲ್ಲಿ ಹೇಳುವಂತೆ: ಅನ್ಗಾನ್ಯನ್ಯಾ ಸಾತ್ಮಾನ್ಗಾನ್ಯನ್ಯಾ ದೇವತಾಃ.  ಹೇಗೆ ಒಬ್ಬ ರಾಜನಿಗೆ ಸಾವಿರಾರು ಮಂದಿ ಪರಿವಾರದವರಿರುತ್ತಾರೋ ಹಾಗೇ ದೇವತೆಗಳು ಭಗವಂತನ ಪರಿವಾರ. ಹೀಗಾಗಿ ವೇದದಲ್ಲಿ ದೇವತೆಗಳ ವರ್ಣನೆ ಬಂದರೆ ಅದು ಮುಖ್ಯಾರ್ಥದಲ್ಲಿ ಭಗವಂತನ ವರ್ಣನೆ, ಆತನ ಪರಿವಾರದ ವರ್ಣನೆ. ದೇವತೆಗಳು ಭಗವಂತನ ಪರಿವಾರಭೂತರೇ ಹೊರತು ಅವರೇ ಸರ್ವಶಕ್ತರಲ್ಲ.  ನಾರಾಯಣನ ಮಹಿಮೆಯನ್ನು ತೋರಿಸುವುದಕ್ಕಾಗಿ ಇತರ ವಿಷಯಗಳನ್ನು ವೇದ ಹೇಳುತ್ತದೆಯೇ ಹೊರತು ಅದೇ ಮುಖ್ಯಾರ್ಥವಲ್ಲ. ಹಾಗೆ ಹೇಳುವುದರ ಮುಖ್ಯ ಉದ್ದೇಶ ಭಗವಂತನ ಪಾರಮ್ಯವನ್ನು ತಿಳಿಸಿ ಹೇಳುವುದು. ಹೀಗಾಗಿ ನಾವು ವೇದದ ಯಾವುದೇ ಸೂಕ್ತವನ್ನು ತೆಗೆದು ನೋಡಿದರೂ ಕೂಡಾ,  ಅಲ್ಲಿರುವ ಶಬ್ದ ಯಾವುದೇ ಆಗಿದ್ದರೂ ಕೂಡಾ, ಅದು ನಾರಾಯಣನನ್ನು ಹೇಳುವ ಪದವಾಗಿರುತ್ತದೆ ಎನ್ನುವುದನ್ನು ತಿಳಿದಿರಬೇಕು.  ವೇದದಲ್ಲಿನ ಪ್ರತಿಯೊಂದು ಪದಕ್ಕೂ ಯೋಗಾರ್ಥವಿದೆ. ಅದನ್ನು ರೂಢಾರ್ಥದಲ್ಲಿ ಅಲ್ಲಿ ಬಳಸಿರುವುದಿಲ್ಲ. ಹೀಗಾಗಿ ವೇದಾಧ್ಯಯನ ಮಾಡುವಾಗ ಪ್ರತೀ ಶಬ್ದವನ್ನೂ ಅದರ ನಿರ್ವಚನದಿಂದ ತಿಳಿದು ಗ್ರಹಣ ಮಾಡಿಕೊಳ್ಳಬೇಕಾಗುತ್ತದೆ. ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ  ಋಗ್ವೇದ- ೧೦.೦೮೨.೦೩ ಎಲ್ಲಾ ಶಬ್ದಗಳೂ ಪೂರ್ಣ ಅನ್ವಯವಾಗುವುದು ಆ ಭಗವಂತನಲ್ಲಿ. ಅಂಥಹ ಭಗವಂತ ತನ್ನ ನಾಮವನ್ನೇ ಇನ್ನೊಬ್ಬರಿಗೆ ಕೊಟ್ಟ. ಈ ರೀತಿ ವೈದಿಕವಾದ ಪ್ರಕ್ರಿಯೆಯಿಂದ ಪ್ರತಿಯೊಂದ ಶಬ್ದದ ಅರ್ಥ ನಿರ್ವಚನ ಮಾಡುತ್ತಾ, ಅದರ ಪೂರ್ಣಾರ್ಥದಲ್ಲಿ ನಾವು ಆ ಶಬ್ದವನ್ನು ಅನುಸಂಧಾನ ಮಾಡಿದಾಗ ಸಮಸ್ತ ವೇದಗಳೂ ನಾರಾಯಣ ಪರವಾಗಿರುವುದು ಕಾಣುತ್ತದೆ.  ಹೀಗೆ ಸಮಸ್ತ ವೇದಗಳೂ ಅಂತತಃ ಹೇಳುವುದು ನಾರಾಯಣನನ್ನೇ. [ಈ ಕುರಿತು ಇನ್ನೂ ಹೆಚ್ಚಿನ ವಿವರಣೆಯನ್ನು ಓದುಗರು ಮೊದಲ ಸ್ಕಂಧದ  ಎರಡನೇ ಅಧ್ಯಾಯದಲ್ಲಿ ಕಾಣಬಹುದು. ಉಲ್ಲೇಖಿತ: ೦೧.೦೨.೨೯].
ನಾರಾಯಣಪರಾ ಮಖಾಃ ಎನ್ನುವಲ್ಲಿ ಮಖಾಃ ಎಂದರೆ ಯಜ್ಞ. “ಯಜ್ಞಗಳಿಂದ ಆರಾಧಿಸಬೇಕಾದ ಸಂಗತಿಗಳೆಲ್ಲವೂ ನಾರಾಯಣ ಪರ” ಎಂದಿದ್ದಾನೆ ಚತುರ್ಮುಖ. ಯಜ್ಞದ ಮೂಲ ಉದ್ದೇಶ  ಭಗವಂತನ ಅನುಗ್ರಹ ಹೊರತು ಲೌಕಿಕ ಫಲಗಳಲ್ಲ. ಇದೇ ರೀತಿ ನಾರಾಯಣಪರಾ ಲೋಕಾಃ  ಎನ್ನುವಲ್ಲಿ ಲೋಕಾಃ ಎಂದರೆ ತಿಳುವಳಿಕೆ ಇರುವ ಜನರು ಎಂದರ್ಥ.  ತಿಳಿದವರಿಗೆ(ಜ್ಞಾನಿಗಳಿಗೆ) ತಿಳಿದಿದೆ ನಾರಾಯಣನೊಬ್ಬನೇ ಹಿರಿಯ ವಸ್ತು ಎನ್ನುವುದು. [ಈ ಎಲ್ಲಾ ವಿಷಯಗಳನ್ನು ಶಾಸ್ತ್ರ ಸ್ಪಷ್ಟವಾಗಿ ಹೇಳಿದರೂ ಕೂಡಾ ಇಂದು ಇವೆಲ್ಲವೂ ಕೇವಲ ಪೂಜಾ ಸಂಕಲ್ಪದಲ್ಲಿ ಮಾತ್ರ ಉಳಿದುಕೊಂಡು ಬಿಟ್ಟಿದೆ. ಭಗವದ್ ಪ್ರೇರಣಾಯಾ ಭಗವದ್ ಪ್ರೀತ್ಯರ್ಥಂ ಎನ್ನುವ ಸಂಕಲ್ಪ  ಸ್ಪಷ್ಟವಾಗಿ ಮೇಲಿನ ಮಾತನ್ನು ಹೇಳುತ್ತದೆ. ಪೂಜೆಯ ಕೊನೆಯಲ್ಲಿ ಕೃಷ್ಣಾರ್ಪಣಮಸ್ತು ಎಂದು ಅರ್ಪಿಸುವ ಉದ್ದೇಶವೂ ಇದೇ. ಆದರೆ ಇಂದು ಸಂಕಲ್ಪದ ಮೂಲ ಉದ್ದೇಶ ತಿಳಿಯದೇ ಏನೇನೋ ಐಹಿಕ ಕಾಮನೆಗಳನ್ನು ಜನ ತಮ್ಮ ಸಂಕಲ್ಪದಲ್ಲಿ   ಸೇರಿಸಿಕೊಂಡು ಬಿಟ್ಟಿದ್ದಾರೆ].
“ಯೋಗ, ತಪಸ್ಸು ಎಲ್ಲವೂ ನಾರಾಯಣ ಪರ”  ಎಂದಿದ್ದಾನೆ ಚತುರ್ಮುಖ. ಯಮ-ನಿಯಮ-ಪ್ರಾಣಾಯಾಮ ಇತ್ಯಾದಿ ಎಲ್ಲವೂ ಮನಸ್ಸನ್ನು ಏಕಾಗ್ರಗೊಳಿಸುವ ಸಾಧನ. ಏಕಾಗ್ರ ಮನಸ್ಸಿನಿಂದ ಭಗವಂತನ ಚಿಂತನೆ ಮಾಡುವುದಕ್ಕಾಗಿ ಈ ಎಲ್ಲಾ ಸಾಧನಗಳಿರುವುದು. ಎಲ್ಲಾ ಯೋಗಗಳ ಕೊನೆಯ ಗುರಿ ಆ ಭಗವಂತ. ತಪಸ್ಸು ಎಂದರೆ  ನಿರಂತರವಾಗಿ ಆಳವಾದ ಚಿಂತನೆ ಮಾಡಿ ಸತ್ಯವನ್ನು(ಸತ್ಯ ನಾಮಕನಾದ ನಾರಾಯಣನನ್ನು) ತಿಳಿಯುವುದೇ ಆಗಿದೆ.
ಜಗತ್ತಿನ ಮೂಲಸತ್ಯ ಆ ನಾರಾಯಣ ಎಂದು ತಿಳಿಯುವುದೇ ನಿಜವಾದ ಜ್ಞಾನ. ಅರಿವಿನ ಕೊನೆ ಆ ಭಗವಂತ. ನಾವು ಈ ಪ್ರಪಂಚವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಪ್ರತಿಯೊಂದನ್ನೂ ಪರಮಾಣುವಿನ ತನಕ ತಿಳಿಯುವ ಪ್ರಯತ್ನ ಮಾಡಬಹುದು. ಆದರೆ ಹಾಗೆ ಮಾಡುವುದರಿಂದ ಅದು ಏಕೆ ಆ ರೀತಿ ಇದೆ ಎನ್ನುವುದು ತಿಳಿಯುವುದಿಲ್ಲ. ಆದ್ದರಿಂದ ಎಲ್ಲಾ ಮುಖಗಳಿಂದ ಸತ್ಯ ತಿಳಿಯಬೇಕಾದರೆ  ಎಲ್ಲವುದಕ್ಕೂ ಕಾರಣೀಭೂತವಾಗಿರುವ ಮೂಲಶಕ್ತಿಯನ್ನು ಅರಿಯಬೇಕು. ಆ ಮೂಲಶಕ್ತಿ ಭಗವಂತನೇ ನಮ್ಮ ಜ್ಞಾನದ ಕೊನೆ. ನಮ್ಮ ಸಾಧನೆಯ ಕೊನೇ ಗುರಿ ಆ ಭಗವಂತ. ಹಾಗಾಗಿ ನಮ್ಮ ಎಲ್ಲಾ  ನಡೆಯೂ ಆ ಭಗವಂತನನ್ನು ಸೇರುವುದಕ್ಕೆ ಪೋಷಕವಾಗಿರಬೇಕು.

ಮೇಲಿನ ಎರಡು ಶ್ಲೋಕಗಳಲ್ಲಿ ಚತುರ್ಮುಖ ಬ್ರಹ್ಮ  ವೇದ-ಶಾಸ್ತ್ರಗಳ ಸಮಷ್ಟಿ  ಚಿತ್ರಣವನ್ನು ನಮ್ಮ ಮುಂದಿರಿಸಿರುವುದನ್ನು ನಾವು ನೋಡಿದೆವು. “ತಿಳಿದುಕೊಳ್ಳಬೇಕಾಗಿರುವುದರ ಕೊನೆ ಆ ನಾರಾಯಣ; ಹೋಗಿ ಸೇರಬೇಕಾದ, ಮತ್ತೆ ಮರಳಿ ಬಾರದ ತಾಣ ಆ ನಾರಾಯಣ. ಇಂಥಹ ಭಗವಂತ  ನನ್ನನ್ನು ಸೃಷ್ಟಿ ನಿರ್ಮಾಣಕ್ಕೆ ಸಾಧನವಾಗಿ(instrument) ಬಳಸುತ್ತಾನೆ.  ಹೀಗಿರುವಾಗ ನಾನೆಲ್ಲಿಯ ಜಗದ್ಗುರು” ಎಂದು ನಾರದರನ್ನು ಪ್ರಶ್ನಿಸುತ್ತಾನೆ ಚತುರ್ಮುಖ.

No comments:

Post a Comment