Sunday, June 8, 2014

Shrimad BhAgavata in Kannada -Skandha-02-Ch-05(06)

ಸತ್ತ್ವಂ ರಜಸ್ತಮ ಇತಿ ನಿರ್ಗುಣಸ್ಯ ಗುಣಾಸ್ತ್ರಯಃ
ಸ್ಥಿತಿಸರ್ಗನಿರೋಧೇಷು ಗೃಹೀತಾ ಮಾಯಯಾ ವಿಭೋಃ ೧೮

ಭಗವಂತನ  ಸೃಷ್ಟಿ-ಪಾಲನೆ-ಸಂಹಾರದ ಕುರಿತು ಇಲ್ಲಿ ಚತುರ್ಮುಖ ಬ್ರಹ್ಮ ವಿವರಿಸುವುದನ್ನು  ಕಾಣುತ್ತೇವೆ. ಸ್ವಯಂ ತ್ರಿಗುಣಾತೀತನಾದುದರಿಂದ ಭಗವಂತನ ಮೇಲೆ ತ್ರಿಗುಣಗಳ ಪ್ರಭಾವವಿಲ್ಲ. ಆದರೆ ತ್ರಿಗುಣಗಳನ್ನು ಬಳಸಿಕೊಂಡು ಭಗವಂತ ಸೃಷ್ಟಿ-ಸ್ಥಿತಿ-ಸಂಹಾರವನ್ನು ಮಾಡುತ್ತಾನೆ.  ಪಾಲನೆ(ಸ್ಥಿತಿ)ಗೆ  ಸತ್ವಗುಣ, ಸೃಷ್ಟಿಗೆ ರಜೋಗುಣ  ಮತ್ತು ಸಂಹಾರಕ್ಕೆ ತಮೋಗುಣವನ್ನು ಭಗವಂತ ಬಳಸುತ್ತಾನೆ. ಈ ಮೂರು ಕ್ರಿಯೆ ಒಂದಕ್ಕೊಂದು ಪರಸ್ಪರ ಸಂಬಂಧವಿರುವ ಕ್ರಿಯೆ. ಉದಾಹರಣೆಗೆ ಅಜ್ಞಾನ ತಮೋಗುಣ. ಅದನ್ನು ನಾಶ ಮಾಡಿದರೆ ಜ್ಞಾನ ಬರುತ್ತದೆ. ಹಾಗಾಗಿ ಅಜ್ಞಾನದ ಸಂಹಾರ ಎಂದರೆ ಅದು ಜ್ಞಾನದ ಸೃಷ್ಟಿ. ಹೀಗೆ  ಸೃಷ್ಟಿಯ ಮೊಟ್ಟೆಯಲ್ಲೇ ಸಂಹಾರದ ಬೀಜವಿರುತ್ತದೆ. ತ್ರಿಗುಣಗಳು ಎಲ್ಲಾ ಕಾಲದಲ್ಲೂ ಭಗವಂತನ ಅಧೀನ. ಸರ್ವಸಮರ್ಥನಾದ ಭಗವಂತ ತನ್ನ ಇಚ್ಛೆಯಂತೆ ಗುಣತ್ರಯಗಳನ್ನು ಬಳಸಿ ಸೃಷ್ಟಿ-ಸ್ಥಿತಿ-ಸಂಹಾರ ಮಾಡುತ್ತಾನೆ. ಪಾಲನೆಯಲ್ಲಿ ಯಾರನ್ನೂ ಬಳಸಿಕೊಳ್ಳದ ಭಗವಂತ, ಸೃಷ್ಟಿ ಕಾರ್ಯದಲ್ಲಿ ಚತುರ್ಮುಖನನ್ನು, ಸಂಹಾರ ಕಾರ್ಯದಲ್ಲಿ ಶಿವನನ್ನು ಉಪಕರಣವಾಗಿ ಬಳಸುತ್ತಾನೆ.
ತ್ರಿಗುಣಗಳ ಸಮಷ್ಟಿಯಿಂದ ನಮ್ಮ ದೇಹ ರಚನೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವೂ ತ್ರಿಗುಣಾತ್ಮಕವಾಗಿರುತ್ತದೆ. ಇಷ್ಟೇ ಅಲ್ಲದೇ ಹೊರಗಿನಿಂದ ತ್ರಿಗುಣಗಳು ವ್ಯಕ್ತಿಯಮೇಲೆ ನಿರಂತರ ಪ್ರಭಾವಬೀರುತ್ತಿರುತ್ತವೆ.

ಕಾರ್ಯಕಾರಣಕರ್ತೃತ್ವೇ ದ್ರವ್ಯಜ್ಞಾನಕ್ರಿಯಾಶ್ರಯಾಃ
ಬಧ್ನಂತಿ ನಿತ್ಯದಾ ಮುಕ್ತಂ ಮಾಯಿನಂ ಪುರುಷಂ ಗುಣಾಃ ೧೯

ವಾಸ್ತವಿಕವಾದ ಆದರೆ ನಾವು ಮರೆತಿರುವ ಒಂದು ವಿಚಾರವನ್ನು ಚತುರ್ಮುಖ ಇಲ್ಲಿ ನೆನಪಿಸುವುದನ್ನು ಕಾಣುತ್ತೇವೆ.  ಚತುರ್ಮುಖ ಹೇಳುತ್ತಾನೆ: “ಈ ದೇಹದಲ್ಲಿರುವ ಜೀವ ವಸ್ತುತಃ ಮಾಯಿ” ಎಂದು. ಮಾಯಿ ಎಂದರೆ ಅಜ್ಞಾನದ ಬಂಧನವಿಲ್ಲದ   ಜ್ಞಾನಸ್ವರೂಪ ಎಂದರ್ಥ. ಜೀವ ಈ ದೇಹ ಇಂದ್ರಿಯ ಇವೆಲ್ಲವುದಕ್ಕಿಂತ ಭಿನ್ನ. ಅದು ಸದಾ ಜ್ಞಾನರೂಪ ಮತ್ತು ಅದಕ್ಕೆ ಅಂಟುವಿಕೆ ಎನ್ನುವುದು ಇಲ್ಲವೇ ಇಲ್ಲ. ಆದರೆ ಜೀವನನ್ನು ತ್ರಿಗುಣಗಳು ದೇಹದಲ್ಲಿ ಕಟ್ಟಿಹಾಕಿ ತಮ್ಮ ಪ್ರಭಾವವನ್ನು ಬೀರುತ್ತಿರುತ್ತವೆ. ಮಣ್ಣು-ನೀರು-ಬೆಂಕಿಯಿಂದಾದ ಶರೀರ, ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಈ ಮೂರು ತ್ರಿಗುಣಗಳ ಕಾರ್ಯಕ್ಷೇತ್ರ. ಅವು ಇಲ್ಲಿ  ಕುಳಿತು  ಏಕಕಾಲದಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಿರುತ್ತವೆ. ಶರೀರದಲ್ಲಿ ತಮೋಗುಣ, ಕರ್ಮೇಂದ್ರಿಯದಲ್ಲಿ  ರಜೋಗುಣ  ಮತ್ತು ಜ್ಞಾನೇಂದ್ರಿಯದಲ್ಲಿ ಸತ್ವಗುಣ ಕುಳಿತು ಜೀವನನ್ನು ಬಂಧನಕ್ಕೆ ತಳ್ಳುತ್ತವೆ. ಏಕಕಾಲದಲ್ಲಿ ತ್ರಿಗುಣಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ.
ನಮ್ಮ ದೇಹ ಪ್ರತಿಕ್ಷಣ ವಿಕಾರಕ್ಕೆ ಒಳಗಾಗುತ್ತದೆ ಮತ್ತು ಅದರ ಮುಖೇನ ತಮೋಗುಣ ಕೆಲಸ ಮಾಡುತ್ತದೆ. ಹೀಗಾಗಿ ನಾನಾ ವಿಧವಾದ ಕಾರ್ಯಗಳನ್ನು ದೇಹದ ಮೂಲಕ ಮಾಡಿ ನಾನಾ ವಿಧದ ದುಃಖವನ್ನು ನಾವು ಅನುಭವಿಸುತ್ತೇವೆ.
ರಜೋಗುಣದ ಕಾರ್ಯಕ್ಷೇತ್ರ ಕರ್ಮೇಂದ್ರಿಯಗಳು. ಈ ಕರ್ಮೇಂದ್ರಿಯಗಳಿಂದ ನಾವು ಅನೇಕ ಚಟುವಟಿಕೆಗಳನ್ನು ಮಾಡುತ್ತೇವೆ. ಕರ್ಮಗಳನ್ನು ಮಾಡಿ ಕೊನೆಗೆ ‘ನಾನು ಮಾಡಿದೆ’ ಎನ್ನುವ ಅಹಂಕಾರ-ಮಮಕಾರಕ್ಕೆ ಬಲಿಯಾಗಿ ರಜೋಗುಣದ ಬಂಧಿಯಾಗುತ್ತೇವೆ.   

ಸತ್ವಗುಣ ನಮ್ಮ ಜ್ಞಾನೇಂದ್ರಿಯದ ಮೇಲೆ ಕೆಲಸ ಮಾಡುತ್ತದೆ. ನಮ್ಮ ಜ್ಞಾನೇಂದ್ರಿಯಗಳು ನಮಗೆ ಅಂತರಂಗದ ಆನಂದದ ಭೋಕ್ತೃತ್ವವನ್ನು ಕೊಡುತ್ತವೆ. ಆದರೆ  ಅದೇ ಭೋಕ್ತೃತ್ವ ಕೊನೆಗೆ ಭಾದಕವಾಗಿ  ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇದಕ್ಕೆ ಉದಾಹರಣೆ  ಕಣ್ಣು.  ಸಂಜೆಯ ಹೊತ್ತು ಸಮುದ್ರ ತಟಿಯಲ್ಲಿ ಕುಳಿತು ಸೂರ್ಯಾಸ್ತ ನೋಡುವುದರಲ್ಲಿ ಸಿಗುವ ಆನಂದ ಅಪರಿಮಿತ. ನಾವು ಎಲ್ಲವನ್ನೂ ಮರೆತು ಆ ಆನಂದವನ್ನು ಅನುಭವಿಸುತ್ತೇವೆ. ಆದರೆ ಶಾಸ್ತ್ರಗಳಲ್ಲಿ ಹೇಳುವಂತೆ:  ನೇಕ್ಷೇತ ಉದ್ಯಂತಮಾದಿತ್ಯಂ ನಾಸ್ತಂ ಯನ್ತಂ ಕದಾಚನ ನೋಪರಕ್ತಂ ನ ವಾರಿಸ್ಥಂ ನ ಮಧ್ಯಂ ನಭಾಸೋ ಗತಮ್. ಸೂರ್ಯನ ಸಂಜೆಯ ಕೆಂಪಾದ ಈ ಕಿರಣಗಳಲ್ಲಿ ಮಂದೇಹ ಎನ್ನುವ ದುಷ್ಟಶಕ್ತಿ ಕೆಲಸ ಮಾಡುತ್ತಿರುತ್ತದೆ ಮತ್ತು ಅದು ಕ್ರಮೇಣ ನಮ್ಮ ಚಟುವಟಿಕೆಗಳನ್ನು ಕುಂಠಿತಗೊಳಿಸುತ್ತದೆ.  ಇದಕ್ಕಾಗಿ ಪ್ರಾಚೀನರು ಸೂರ್ಯೋದಯ ಮತ್ತು ಸೂರ್ಯಾಸ್ತ ಕಾಲದಲ್ಲಿ ಅರ್ಗ್ಯ ಕೊಟ್ಟು ದೇವರನ್ನು ಪ್ರಾರ್ಥನೆ ಮಾಡುವ ಸಂಪ್ರದಾಯವನ್ನು ಚಾಲ್ತಿಗೆ ತಂದರು. ಶಾಸ್ತ್ರ ನೀರಿನಿಂದ ಪ್ರತಿಫಲಿಸುವ ಸೂರ್ಯ ಮತ್ತು ಗ್ರಹಣಕಾಲದ ಸೂರ್ಯನನ್ನು ಬರಿಗಣ್ಣಿನಿಂದ ಕಾಣುವುದನ್ನು ನಿಷೇಧಿಸುತ್ತದೆ. [ಹಿಂದೆ ಸೂರ್ಯಗ್ರಹಣವನ್ನು ನೀರಿಗೆ ಗೋಮಯ ಬೆರೆಸಿ ಅದರ ಮುಖೇನ ನೋಡುತ್ತಿದ್ದರು ಮತ್ತು ಗ್ರಹಣದ ಸಮಯವನ್ನಾಧರಿಸಿ ಗಣಿತಬದ್ಧವಾಗಿ ಪಂಚಾಂಗ ಸಿದ್ಧಪಡಿಸುತ್ತಿದ್ದರು]. ಒಟ್ಟಿನಲ್ಲಿ ಹೇಳಬೇಕೆಂದರೆ ಸತ್ವಗುಣ ಜ್ಞಾನವನ್ನು-ಸಂತೋಷವನ್ನು ಕೊಟ್ಟರೂ, ಕೊನೆಗೆ ಅದರಿಂದ ಬರುವ ಅಹಂಕಾರ ಮಮಕಾರ ನಮ್ಮನ್ನು ಬಂಧಿಯನ್ನಾಗಿಸುತ್ತದೆ.  

No comments:

Post a Comment