Saturday, July 20, 2013

Shrimad BhAgavata in Kannada -Skandha-01-Ch-16(7)

೧೧. ಸಾಮ್ಯಂ: ಎಲ್ಲಿಯೂ ಯಾವ ರೀತಿಯ ವೈಷಮ್ಯ ಮಾಡದಿರುವುದು ‘ಸಮತೆ’ ಅಥವಾ ಸಾಮ್ಯ. ಅವರವರ ಯೋಗ್ಯತೆಗೆ ತಕ್ಕಂತೆ  ಫಲ ಕೊಡುವ ಸ್ವಭಾವ ಭಗವಂತನದ್ದು. ಆತನ ರೂಪಗಳಲ್ಲಿ, ಗುಣ-ಕ್ರಿಯೆಗಳಲ್ಲಿ ಕೂಡಾ ತಾರತಮ್ಯ ಇಲ್ಲ. ಹಾಗಾಗಿ ಭಗವಂತನನ್ನು “ನಿರ್ದೋಷಂ ಹಿ ಸಮಂ ಬ್ರಹ್ಮ”- ಎನ್ನುತ್ತಾರೆ.
ಎಲ್ಲರನ್ನು ಸಮನಾಗಿ ನೋಡುವುದು ಎಂದರೆ ಅವರವರ ಯೋಗ್ಯತೆಗೆ ತಕ್ಕಂತೆ ನೋಡುವ ಸ್ವಭಾವ ಹೊರತು, ಎಲ್ಲಾ ಯೋಗ್ಯತೆಯನ್ನು ಒಂದೇ  ಸಮನಾಗಿ ನೋಡುವುದಲ್ಲ. ನಾವೂ ಕೂಡಾ ಈ ಗುಣವನ್ನು ಬೆಳೆಸಿಕೊಳ್ಳಬೇಕು.
೧೨. ತಿತಿಕ್ಷಾ : ಕೋಪಿಸಿಕೊಳ್ಳಲು ಕಾರಣ ಇದ್ದಾಗಿಯೂ ಕೋಪಿಸಿಕೊಳ್ಳದೇ ಇರುವ ಸಮಚಿತ್ತತೆ ತಿತಿಕ್ಷಾ. ಸಾಮಾನ್ಯವಾಗಿ ನಾವು ಬಯಸಿದಂತೆ ಆಗದೇ ಇದ್ದಾಗ ನಮಗೆ ಕೋಪ ಬರುತ್ತದೆ. ಕೋಪ ಬರುವುದು ಅಸಾಯಕತೆ ಅಥವಾ ದೌರ್ಬಲ್ಯದ ಲಕ್ಷಣವೂ ಹೌದು. ಭಗವಂತ ಸರ್ವಸಮರ್ಥ. ಆತ ಬಯಸಿದಂತೆಯೇ ಎಲ್ಲವೂ ನಡೆಯುತ್ತದೆ. ಹೀಗಾಗಿ ಆತ ಎಂದೂ ಕೋಪಿಸಿಕೊಳ್ಳುವುದಿಲ್ಲ. ತನ್ನ ಅವತಾರದಲ್ಲಿ ಕೆಲವೊಮ್ಮೆ ನಮ್ಮ ಉದ್ಧಾರಕ್ಕಾಗಿ ಭಗವಂತ ಕೋಪಿಸಿಕೊಂಡಂತೆ ಲೀಲೆ ತೋರಿದರೂ ಕೂಡಾ, ಆತ ನಿಜವಾಗಿ ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಭಗವಂತನ ಸಮಚಿತ್ತತೆಗೆ ಒಂದು ಉತ್ತಮ ಉದಾಹರಣೆ ಗಾಂಧಾರಿ ಶ್ರೀಕೃಷ್ಣನಿಗೆ  “ನಿನ್ನ ವಂಶ ನಿರ್ವಂಶವಾಗಲಿ” ಎಂದು ಶಾಪ ಕೊಟ್ಟಾಗ ಆತ ನಡೆದುಕೊಂಡ ರೀತಿ. ಆ ಸಂದರ್ಭದಲ್ಲಿ ಶ್ರೀಕೃಷ್ಣ ಕೋಪಿಸಿಕೊಳ್ಳದೆ, “ಇದು ಪತಿವೃತೆಯ ಬಾಯಿಯಲ್ಲಿ ಬಂದ ವರ” ಎಂದು ನಿರ್ವೀಕಾರವಾಗಿ ವಿಷಯ ಗ್ರಹಣ ಮಾಡಿದ. ನಾವೂ ಕೂಡಾ ನಮ್ಮ ಜೀವನದಲ್ಲಿ ಕೋಪವನ್ನು ಗೆಲ್ಲಬೇಕು.      
೧೩: ಉಪರತಿ : ಪ್ರಾಪಂಚಿಕ ಭೋಗದಲ್ಲಿ ಅನಾಸಕ್ತಿ ಮತ್ತು ಉತ್ಕೃಷ್ಟವಾದ ಸ್ವರೂಪದಲ್ಲಿ ಸದಾ ಆನಂದವಾಗಿರುವುದು ‘ಉಪರತಿ’. ಇದು ಮೋಕ್ಷ ಸಾಧನೆಯಲ್ಲಿ ನಮ್ಮಲ್ಲಿರಬೇಕಾದ ಗುಣ. ನಾವು ಹೊರಗಿನ ಕ್ಷುದ್ರವಾದ ವಸ್ತುವಿನಿಂದ ಮನಸ್ಸನ್ನು ತಿರುಗಿಸಿ ಎಲ್ಲಕ್ಕಿಂತ ಹಿರಿದಾದ ವಸ್ತುವಿನಮೇಲೆ ಮನಸ್ಸನ್ನು ನೆಲೆಗೊಳಿಸಬೇಕು.
೧೪. ಶ್ರುತಮ್ : ‘ಶ್ರುತಮ್’ ಎಂದರೆ ಸರ್ವ ಶ್ರುತಿಗಳ ಅರಿವು.  ಸಮಸ್ತ ಶಾಸ್ತ್ರವನ್ನು ಚತುರ್ಮುಖನಿಗೆ ಉಪದೇಶ ಮಾಡಿದವ ಭಗವಂತ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಹೇಳುವಂತೆ: “ಅಸ್ಯ ಮಹತೋ ಭೂತಸ್ಯ ನಿಃಶ್ವಸಿತಮೇತದ್ಯದೃಗ್ವೇದೋ ಯಜುರ್ವೇದಃ ಸಾಮವೇದೋSಥರ್ವಾಂಗಿರಸ ಇತಿಹಾಸಃ ಪುರಾಣಂ ವಿದ್ಯಾ ಉಪನಿಷದಃ ಶ್ಲೋಕಾಃ ಸೂತ್ರಾಣ್ಯನುವ್ಯಾಖ್ಯಾನಾನಿ ವ್ಯಾಖ್ಯಾನಾನೀಷ್ಟಂ ಹುತಮಾಶಿತಂ ಪಾಯಿತಮ್, ಅಯಂ ಚ ಲೋಕಃ, ಪರಶ್ಚ ಲೋಕಃ, ಸರ್ವಾಣಿ ಚ ಭೂತಾನಿ, ಅಸೈವೈತಾನಿ ಸರ್ವಾಣಿ ನಿಃಶ್ವಸಿತಾನಿ” (ಬೃಹದಾರಣ್ಯಕ-೪-೫-೧೧). ಅಂದರೆ: ಸಮಸ್ತ ಶಾಸ್ತ್ರಗಳೂ ಭಗವಂತನ ಉಸಿರು. ಅವನು ಸರ್ವಶಾಸ್ತ್ರಜ್ಞ. ವೇದ ಎನ್ನುವುದು ಭಗವಂತನ ಉದ್ಗಾರ. ಇಂತಹ ಭಗವಂತನನ್ನು ಸೇರಲು ಪ್ರಯತ್ನಿಸುವ ಸಾಧಕ, ಶ್ರವಣ-ಮನನ-ನಿಧಿಧ್ಯಾಸನದಿಂದ ಶ್ರುತಿಯನ್ನು ಅರಿಯುವ ಪ್ರಯತ್ನ ಮಾಡಬೇಕು.
೧೫). ಜ್ಞಾನಂ: ಭಗವಂತ ಸರ್ವಜ್ಞ. ಅಂತಹ ಭಗವಂತನನ್ನು ಅರಿಯುವ ಪ್ರಯತ್ನವನ್ನು ಪ್ರತಿಯೊಬ್ಬ ಸಾಧಕ ಕೂಡಾ ಮಾಡಬೇಕು.
೧೬). ವಿರಕ್ತಿಃ: ಭಗವಂತ ಸರ್ವವಿರಕ್ತ. ಆತ ಎಲ್ಲವುದರ ಜೊತೆಗೂ ಇರುತ್ತಾನೆ, ಆದರೆ ಯಾವುದೇ ಒಂದರ ಅಭಿಮಾನ ಆತನಿಗಿಲ್ಲ. ಶ್ರೀಕೃಷ್ಣನನ್ನು ನೋಡಿದರೆ ಆತ ೧೬,೧೦೮ ಸ್ತ್ರೀಯರ ಗಂಡ. ಆದರೆ ಆತ ಆಜನ್ಮ ಬ್ರಹ್ಮಚಾರಿ! ಸಾಧಕ ಎಲ್ಲರೊಂದಿಗಿದ್ದರೂ ಕೂಡಾ, ತನ್ನತನವನ್ನು ಕಳೆದುಕೊಳ್ಳದೆ ಭಿನ್ನವಾಗಿರುತ್ತಾನೆ. ಯಾವುದರ ಸ್ಪರ್ಶವೂ ಇಲ್ಲದೆ ಎಲ್ಲರ ಜೊತೆಗೂ ಇರುವುದು ವಿರಕ್ತಿ. ಹೀಗೆ ಎಲ್ಲವನ್ನೂ ಮಾಡುತ್ತಾ ಯಾವುದನ್ನೂ ಅಂಟಿಸಿಕೊಳ್ಳದೆ ಬದುಕುವುದನ್ನು ನಾವು ಕಲಿಯಬೇಕು.

No comments:

Post a Comment