Sunday, July 28, 2013

Shrimad BhAgavata in Kannada -Skandha-01-Ch-17(1)

ಸಪ್ತದಶೋSಧ್ಯಾಯಃ

ಸೂತ ಉವಾಚ--
ತತ್ರ ಗೋಮಿಥುನಂ ರಾಜಾ ಹನ್ಯಮಾನಮನಾಥವತ್
ದಂಡಹಸ್ತಂ ಚ ವೃಷಳಂ ದದೃಶೇ ನೃಪಲಾಂಛನಮ್

ವೃಷಂ ಮೃಣಾಲಧವಳಂ ಮೇಹಂತಮಿವ ಬಿಭ್ಯತಮ್
ವೇಪಮಾನಂ ಪದೈಕೇನ ಸೀದಂತಂ ಶೂದ್ರಪೀಡಿತಮ್

ರಾಜನ ವೇಷತೊಟ್ಟ ಕರಾಳ ವ್ಯಕ್ತಿ ಹಸು ಮತ್ತು ಎತ್ತನ್ನು ಹೊಡೆಯುತ್ತಿರುವಂತೆ; ಕಮಲದ ನಾಳದಂತೆ ಶುಭ್ರ ಬಿಳಿ ಬಣ್ಣದ, ಮೂರು ಕಾಲುಗಳನ್ನು ಕಳೆದುಕೊಂಡು ಒಂದೇ ಕಾಲಲ್ಲಿ ನಿಂತಿರುವ ಎತ್ತು ಆ ವ್ಯಕ್ತಿಯನ್ನು ಕಂಡು ಹೆದರಿ ಸೆಗಣಿ ಹಾಕುತ್ತಿರುವಂತೆ; ಹೊಡೆತಕ್ಕೆ ಹೆದರಿ ಹಸು ಕಣ್ಣೀರು ಸುರಿಸುತ್ತಿರುವಂತೆ ಪರೀಕ್ಷಿತನಿಗೆ ದರ್ಶನವಾಗುತ್ತದೆ(Vison).
ಪೌರಾಣಿಕ ಸಾಹಿತ್ಯದಲ್ಲಿ ಕೆಲವು ಸಂಕೇತಗಳಿರುತ್ತವೆ. ಉದಾಹರಣೆಗೆ ಅಧ್ಯಾತ್ಮದಲ್ಲಿ ‘ಹಾವು’ ಕುಂಡಲಿನಿ ಸಂಕೇತ. ಅದೇ ರೀತಿ ಇಲ್ಲಿ ಹಸು ಭೂದೇವಿ ಸಂಕೇತ; ಎತ್ತು ಧರ್ಮದ ಸಂಕೇತ ಮತ್ತು ಬಿಳಿ ಬಣ್ಣ ಸಾತ್ವಿಕತೆಯ ಸಂಕೇತ. ಇಲ್ಲಿ  ‘ಶೂದ್ರ’ ಎನ್ನುವ ಪದವನ್ನು ಕ್ರೌರ್ಯದ ಸಂಕೇತವಾಗಿ ಬಳಸಲಾಗಿದೆ. ಕ್ಷತ್ರಿಯ ವೇಷವಿದೆ ಆದರೆ ಪಾಲಕತ್ವವಿಲ್ಲ. ನಿರಂತರ ಪೀಡಿಸುತ್ತಿದ್ದಾನೆ ಆ ವ್ಯಕ್ತಿ.
ಇಂತಹ ವಿಚಿತ್ರ ದೃಶ್ಯವನ್ನು ಕಂಡ ಪರೀಕ್ಷಿತ ತಕ್ಷಣ ಕೇಳುತ್ತಾನೆ: “ಯಾರು ನೀವು? ನಿನ್ನ ಮೂರು ಕಾಲುಗಳಿಗೆ ಏನಾಗಿದೆ? ನೀನೇಕೆ ತತ್ತರಿಸುತ್ತಿರುವೆ? ನಿಮ್ಮನ್ನು ಹೊಡೆಯುತ್ತಿರುವ ಈ ವ್ಯಕ್ತಿ ಯಾರು? ನನ್ನ ಅಜ್ಜಂದಿರರಾದ ಪಾಂಡವರು ಮತ್ತು ಅವರಿಗೆ ರಕ್ಷಕನಾಗಿದ್ದ ಶ್ರೀಕೃಷ್ಣ ಭೂಮಿಯಿಂದ ಹೊರಟುಹೋದ ಮೇಲೆ, ದೂರ್ತರಿಗೆ ಇಷ್ಟೊಂದು ಸ್ವಾತಂತ್ರ್ಯ ಬಂದು ಹೋಯಿತೇ? ಪಾಂಡವರ ಮೊಮ್ಮಗನಾದ ನಾನು ಶ್ರೀಕೃಷ್ಣನ ಆಶ್ರಯದಿಂದ ನಿಂತವನು. ನಾನಿರುವಾಗ ಇಲ್ಲಿ ಇಂತಹ ಅನ್ಯಾಯಕ್ಕೆ ಅವಕಾಶವಿಲ್ಲ” ಎಂದು ಗರ್ಜಿಸುತ್ತಾನೆ ಪರೀಕ್ಷಿತ.

ಕೋSವೃಶ್ಚತ್ತವ ಪಾದಾಂಸ್ತ್ರೀನ್ ಸೌರಭೇಯ ಚತುಷ್ಪದಃ
ಮಾ ಭೂವಂಸ್ತ್ವಾದೃಶಾ ರಾಷ್ಟ್ರೇ ರಾಜ್ಞಾಂ ಕೃಷ್ಣಾನುವರ್ತಿನಾಮ್ ೧೨

ತಾನು ಕಾಣುತ್ತಿರುವುದು ಕೇವಲ ಹಸು-ಗೂಳಿಯನ್ನಲ್ಲ. ಯಾವುದೋ ದೇವತಾ ಶಕ್ತಿ ಇಂತಹ ದರ್ಶನ(Vision) ಕೊಡುತ್ತಿದೆ ಎನ್ನುವುದನ್ನು ಮನಗೊಂಡ ಪರೀಕ್ಷಿತ ಕೇಳುತ್ತಾನೆ : “ನಿನಗೆ ನಾಲ್ಕು ಕಾಲುಗಳಿರಬೇಕು. ನಿನ್ನ ಮೂರು ಕಾಲುಗಳನ್ನು ಕತ್ತರಿಸಿದವರು ಯಾರು? ಶ್ರೀಕೃಷ್ಣ ಮತ್ತು ಪಾಂಡವರ ಆಶೀರ್ವಾದ ಇರತಕ್ಕಂತಹ ನನ್ನ ಕರ್ಮಭೂಮಿಯಲ್ಲಿ ಇಂತಹ ಒಂದು ಘಟನೆ ನಡೆಯಿತು ಎಂದರೆ ಅದು ನಮ್ಮ ಹಿರಿಯರಿಗೆ ಅವಮಾನ” ಎಂದು.  


ಅನಾಗಃಸ್ವಿಹ ಭೂತೇಷು ಯ ಆಗಸ್ಕೃನ್ನಿರಂಕುಶಃ
ಆಹರ್ತಾಸ್ಮಿ ಭುಜಂ ಸಾಕ್ಷಾದಮರ್ತ್ಯಸ್ಯಾಪಿ ಸಾಂಗದಮ್ ೧೪

 “ಯಾರು ನಿನ್ನ ಕಾಲನ್ನು ಮುರಿದವರು ? ನಿನ್ನ ಕಾಲನ್ನು ಮುರಿದವರು ಯಾರೇ ಇರಲಿ, ಅವರು ನಿನಗೆ ಅನ್ಯಾಯ ಮಾಡಿದ್ದರೆ, ಅವರ ತೋಳನ್ನು ಕತ್ತರಿಸುತ್ತೇನೆ. ಅವರು ದೇವಲೋಕದಿಂದ ಬಂದವರೇ ಆಗಿರಲಿ, ನನ್ನ ರಾಜ್ಯದಲ್ಲಿ ಇಂತಹ ಅನ್ಯಾಯವನ್ನು ನಾನು ಸಹಿಸಲಾರೆ” ಎಂದು ಆವೇಶದಿಂದ ನುಡಿಯುತ್ತಾನೆ ಪರೀಕ್ಷಿತ.

ಧರ್ಮ ಉವಾಚ--
ಏತದ್ವಃ ಪಾಂಡವೇಯಾನಾಂ ಯುಕ್ತಮಾರ್ತಾಭಯಂ ವಚಃ
ಯೇಷಾಂ ಗುಣಗಣೈಃ ಕೃಷ್ಣೋ ದೌತ್ಯಾದೌ ಭಗವಾನ್ ವೃತಃ ೧೬

ಪರೀಕ್ಷಿತನ ಮಾತಿಗೆ ವೃಷಭ(ಧರ್ಮ) ಉತ್ತರಿಸುತ್ತಾನೆ. “ನೀನು ಆಡಬೇಕಾದ ಮಾತನ್ನೇ ಆಡಿದ್ದೀಯ. ಪಾಂಡವರ ವಂಶದಲ್ಲಿ ಹುಟ್ಟಿದವರ ಬಾಯಿಯಲ್ಲಿ ಬರಬೇಕಾದ ಮಾತಿದು. ಕಷ್ಟಕ್ಕೆ ಒಳಗಾದವರಿಗೆ ಅಭಯರಕ್ಷೆ ನೀಡುವುದನ್ನು ಪಾಂಡವರು ನಿರಂತರ ಮಾಡಿದರು. ಯಾರ ಗುಣಕ್ಕೆ ಮರುಳಾಗಿ ಭಗವಂತ ಅವರ ಧೂತನಾಗಿ ನಡೆದುಕೊಂಡನೋ, ಅಂತಹ ಪಾಂಡವರ ಮೊಮ್ಮಗನಾದ ನಿನ್ನ ಬಾಯಿಯಲ್ಲಿ ಬರಬೇಕಾದ ನ್ಯಾಯವಾದ ಮಾತಿದು. ಇಂತಹ ಮಾತನ್ನು ನಿನ್ನಿಂದ ಕೇಳಿ ಬಹಳ ಸಂತೋಷವಾಯಿತು” ಎನ್ನುತ್ತಾನೆ.

ನ ವಯಂ ಕ್ಲೇಶಬೀಜಾನಿ ಯತಃ ಸ್ಯುಃ ಪುರುಷರ್ಷಭ
ಪುರುಷಂ ತಂ ವಿಜಾನೀಮೋ ವಾಕ್ಯಭೇದವಿಮೋಹಿತಾಃ ೧೭

ಪರೀಕ್ಷಿತನ ಪ್ರಶ್ನೆಗೆ ಒಗಟಿನಂತೆ ಉತ್ತರಿಸುತ್ತಾ ವೃಷಭ ಹೇಳುತ್ತಾನೆ: ಯಾರು ನನ್ನ ಕಾಲನ್ನು ಮುರಿದರು ಎನ್ನುವುದು ನನಗೆ ತಿಳಿದಿಲ್ಲ. ಜೀವನದಲ್ಲಿ ಅನೇಕ ಆಪತ್ತುಗಳು ಬರುತ್ತವೆ. ಅದು ಯಾರಿಂದ ಯಾಕಾಗಿ ಬರುತ್ತವೆ ಯಾರಿಗೆ ಗೊತ್ತು? ಯಾರಿಂದಾಗಿ ಈ ರೀತಿಯ ದುರಂತಗಳು ಜೀವನದಲ್ಲಿ ನಡೆಯುತ್ತವೆ, ಆ ಪುರುಷ ಯಾರು ಎನ್ನುವುದೇ ನನಗೆ ತಿಳಿದಿಲ್ಲ. ಶಾಸ್ತ್ರಗಳಲ್ಲೂ ಕೂಡಾ ವಾಕ್ಯ ಭೇದವಿರುವುದರಿಂದ ಅದರ ಅರ್ಥ ತಿಳಿಯದಾಗಿದೆ.

ಕೇಚಿದ್ ವೈಕಲ್ಪವಚಸ ಆಹುರಾತ್ಮಾನಮಾತ್ಮನಃ
ದೈವಮನ್ಯೇ ಪರೇ ಕರ್ಮ ಸ್ವಭಾವಮಪರೇ ಪ್ರಭುಮ್ ೧೮

ಅಪ್ರತರ್ಕ್ಯಾದನಿರ್ವಾಚ್ಯಾದಿತಿ ಕೇಷ್ವಪಿ ನಿಶ್ಚಯಃ
ಅತ್ರಾನುರೂಪಂ ರಾಜರ್ಷೇ ವಿಮೃಶ ಸ್ವಮನೀಷಯಾ ೧೯

ಕೆಲವರು “ನಿನ್ನ ಸುಖ-ದುಃಖಗಳಿಗೆ ನೀನೇ ಕಾರಣ” ಎನ್ನುತ್ತಾರೆ; ಕೆಲವರು  ಅದೃಷ್ಟ ಕಾರಣ ಎನ್ನುತ್ತಾರೆ; ಕೆಲವರು ಜೀವನದಲ್ಲಿ ನಡೆಯುವ ದುರಂತಗಳಿಗೆ ನಮ್ಮ ಕರ್ಮ ಕಾರಣ ಎನ್ನುತ್ತಾರೆ; ಕೆಲವರು ಮನಸ್ಸು ಕಾರಣ ಎಂದರೆ, ಇನ್ನು ಕೆಲವರು ಎಲ್ಲವುದಕ್ಕೂ ಕೊನೆಯ ನಿರ್ಣಾಯಕ ನಮ್ಮ ಜೀವ ಸ್ವಭಾವ ಎನ್ನುತ್ತಾರೆ.
ನಮ್ಮ ಸ್ವಭಾವವನ್ನು ನಿಯಂತ್ರಿಸತಕ್ಕಂತಹ ಸ್ವತಂತ್ರವಾದ ಭಾವ ಭಗವಂತ. ಅವನು ನಮ್ಮ ಸ್ವಭಾವಕ್ಕನುಸಾರವಾಗಿ ಎಲ್ಲವನ್ನೂ ಮಾಡಿಸುತ್ತಾನೆ. ಭಗವಂತನ ನಿಯಂತ್ರಣ ತರ್ಕಕ್ಕೆ ಮೀರಿದ ವಿಚಾರ. ಅದನ್ನು ವಿವರಿಸಲು ಯಾರಿಂದಲೂ ಸಾಧ್ಯವಿಲ್ಲ. ಹೀಗೆ ನಮ್ಮ ಮಾತಿಗೆ, ಮನಸ್ಸಿಗೆ, ಚಿಂತನೆಗೆ ಮೀರಿದ ಭಗವಂತನೇ ಎಲ್ಲವನ್ನೂ ನಿಯಂತ್ರಿಸುತ್ತಾನೆ ಎನ್ನುತ್ತಾರೆ ಕೆಲವರು. “ಈ ಎಲ್ಲಾ ಕಾರಣದಿಂದ ನನ್ನ ಈ ಸ್ಥಿತಿಗೆ ಕಾರಣ ಏನೆಂಬುದು ನನಗೆ ತಿಳಿಯುತ್ತಿಲ್ಲ. ರಾಜರ್ಶಿಯಾದ ನಿನಗೆ ಭಗವಂತ ಚಿಂತನಾಶಕ್ತಿ ಕೊಟ್ಟಿದ್ದಾನೆ. ನೀನೇ ವಿಮರ್ಶೆಮಾಡಿ ನನ್ನ ಈ ಸ್ಥಿತಿಗೆ ಕಾರಣವನ್ನು ತಿಳಿದುಕೋ” ಎಂದು ರೋಚಕವಾದ ಉತ್ತರ ಕೊಡುತ್ತಾನೆ ಧರ್ಮ.

ಸೂತ ಉವಾಚ--
ಏವಂ ಧರ್ಮೇ ಪ್ರವದತಿ ಸ ಸಮ್ರಾಟ್ ದ್ವಿಜಸತ್ತಮಾಃ
ಸಮಾಹಿತೇನ ಮನಸಾ ವಿದಿತ್ವಾ ಪ್ರತ್ಯಚಷ್ಟ ತಮ್ ೨೦


ಶೌನಕಾದಿಗಳಿಗೆ ಭಾಗವತದ ಹಿನ್ನೆಲೆಯನ್ನು ವಿವರಿಸುತ್ತಿರುವ ಉಗ್ರಶ್ರವಸ್ಸರು ಹೇಳುತ್ತಾರೆ: “ವೃಷಭ ಇಷ್ಟೊಂದು ಆಳವಾಗಿ, ಆಧ್ಯಾತ್ಮಿಕವಾಗಿ ಮಾತನಾಡಿದ್ದನ್ನು ಕೇಳಿಸಿಕೊಂಡ ಪರೀಕ್ಷಿತ, ಅಲ್ಲೇ ಕಣ್ಮುಚ್ಚಿ ಕುಳಿತು(Meditation), ತನ್ನ ಮನಸ್ಸನ್ನು ವಿಷಯಕ್ಕೆ ಶ್ರುತಿಗೂಡಿಸಿ(Tuning)ವಿಷಯ ಗ್ರಹಣ ಮಾಡಿದ” ಎಂದು.

No comments:

Post a Comment