Sunday, April 26, 2015

Shrimad BhAgavata in Kannada -Skandha-02-Ch-07(02)

ಬ್ರಹ್ಮೋವಾಚ--
ಯತ್ರೋದ್ಯತಃ ಕ್ಷಿತಿತಲೋದ್ಧರಣಾಯ ಬಿಭ್ರತ್ ಕ್ರೌಡೀಂ ತನುಂ ಸಕಲಯಜ್ಞಮಯೀಮನಂತಃ
ಅಂತರ್ಮಹಾರ್ಣವ ಉಪಾಗತಮಾದಿದೈತ್ಯಂತಂ ದಂಷ್ಟ್ರಯಾSದ್ರಿಮಿವ ವಜ್ರಧರೋ ದದಾರ ೦೧

ಸ್ವಾಯಭುವ ಮನ್ವಂತರದ ವರಾಹ ಅವತಾರವನ್ನು ವಿವರಿಸುತ್ತಾ ಚತುರ್ಮುಖ ಹೇಳುತ್ತಾನೆ: “ಭೂಮಿ ಕಕ್ಷೆಯಿಂದ ಕಳಚಿ ನಾಶವಾಗುವ ಸಂದರ್ಭದಲ್ಲಿ ಭಗವಂತ ವರಾಹ ಅವತಾರಿಯಾಗಿ ಬಂದು ಭೂಮಿಯನ್ನು ರಕ್ಷಿಸಿದ ಮತ್ತು ತಡೆಯಲು ಬಂದ ಆದಿದೈತ್ಯ ಹಿರಣ್ಯಾಕ್ಷನನ್ನು ಇಂದ್ರ ವಜ್ರಾಯುಧದಿಂದ ಪರ್ವತವನ್ನು ಭೇದಿಸಿದಂತೆ  ವರಾಹ  ತನ್ನ ಕೋರೆದಾಡೆಯಿಂದ ಸೀಳಿ ಕೊಂದ” ಎಂದು.
ಭಗವಂತನ ಈ ಅವತಾರದಲ್ಲಿ ಇನ್ನೊಂದು ವಿಶೇಷವಿರುವುದನ್ನು ಈ ಶ್ಲೋಕ ವಿವರಿಸುತ್ತದೆ. ಈ ವರಾಹನನ್ನು ಯಜ್ಞವರಾಹ ಎಂದೂ ಕರೆಯುತ್ತಾರೆ. ಭಗವಂತ ಕೇವಲ ಭೂಮಿಯನ್ನು ಮರಳಿ ಕಕ್ಷೆಯಲ್ಲಿಟ್ಟು ರಕ್ಷಿಸಿದ್ದಷ್ಟೇ ಅಲ್ಲ, ಆತ ಈ ಅವತಾರದಲ್ಲಿ ತನ್ನ ರೋಮಕೂಪಗಳನ್ನು ಜಾಡಿಸಿ ಯಜ್ಞಕ್ಕೆ ಬೇಕಾದ ಸಕಲ ಸಲಕರಣೆಗಳನ್ನು ಸೃಷ್ಟಿಮಾಡಿದ. ಹೀಗಾಗಿ ಈತ ಯಜ್ಞ ವರಾಹ ಎಂದು ಹೆಸರಾದ.  
ಮೇಲಿನ ಶ್ಲೋಕದಲ್ಲಿ ಚತುರ್ಮುಖ ವರಾಹನನ್ನು ಅನಂತಃ ಎಂದು ಸಂಬೋಧಿಸಿದ್ದಾನೆ. ಏಕೆಂದರೆ: ಈ ಅವತಾರ ರಾಮ-ಕೃಷ್ಣಾವತಾರಗಳಿಗಿಂತ ಭಿನ್ನ.  ಈ ಹಿಂದೆ ಹೇಳಿದಂತೆ ಸ್ವಾಯಂಭುವ ಮನ್ವಂತರದಲ್ಲಿ ಆದ ವರಾಹ ಅವತಾರವನ್ನು ಭಗವಂತ ಇನ್ನೂ ಸಮಾಪ್ತಿಗೊಳಿಸಿಲ್ಲ.  ಪರಶುರಾಮ, ವೇದವ್ಯಾಸ ಅವತಾರಗಳಂತೆ ವರಾಹ ಅವತಾರ ಕೂಡಾ  ಕಣ್ಮರೆಯಾಗಿ ಇಂದಿಗೂ ಬ್ರಹ್ಮಾಂಡದಲ್ಲಿದೆ. 

No comments:

Post a Comment