Sunday, November 22, 2015

Shrimad BhAgavata in Kannada -Skandha-02-Ch-09(06)

ಶ್ರೀಭಗವಾನುವಾಚ--
ಜ್ಞಾನಂ ಪರಮಗುಹ್ಯಂ ಮೇ ಯದ್ ವಿಜ್ಞಾನಸಮನ್ವಿತಮ್
ಸರಹಸ್ಯಂ ತದಂಗಂ ಚ ಗೃಹಾಣ ಗದಿತಂ ಮಯಾ ೩೦

ಯಾವಾನಹಂ ಯಥಾಭಾವೋ ಯದ್ರೂಪಗುಣಕರ್ಮಕಃ
ತಥೈವ ತತ್ತ್ವವಿಜ್ಞಾನಮಸ್ತು ತೇ ಮದನುಗ್ರಹಾತ್ ೩೧

ನಾವಿಲ್ಲಿ ನೋಡುತ್ತಿರುವುದು ಸೃಷ್ಟಿಯ ಮೊದಲ ಜೀವನಾದ ಚತುರ್ಮುಖನ ಸೃಷ್ಟಿಯ ನಂತರ ನಡೆದ ಭಗವಂತ ಮತ್ತು ಚತುರ್ಮುಖನ ನಡುವಿನ ಸಂಭಾಷಣೆಯನ್ನು. ಈ ಹಿಂದೆ ಹೇಳಿದಂತೆ ಚತುರ್ಮುಖ  ಭಗವಂತನ ಮೊದಲ ಮಗ. ಆತನನ್ನು  ಆದಿಜೀವ, ಹಿರಣ್ಯಗರ್ಭ,  ವಿರಾಟಪುರುಷ, ಇತ್ಯಾದಿಯಾಗಿ ಶಾಸ್ತ್ರಗಳಲ್ಲಿ ಕರೆದಿದ್ದಾರೆ.   ಚತುರ್ಮುಖನನ್ನು ಸೃಷ್ಟಿ ಮಾಡಿದ ಭಗವಂತ ಆತನಿಗೆ ದರ್ಶನ ಕೊಟ್ಟು ಉಪದೇಶ ನೀಡಿದ. ಈಗಾಗಲೇ ಹೇಳಿರುವಂತೆ: ಇಂದು ನಾವು  ಯಾವುದನ್ನು ವ್ಯಾಸ ರಚಿತ ಭಾಗವತ ಎಂದು ಅಧ್ಯಾಯ ಮಾಡುತ್ತಿದ್ದೇವೆ, ಅದು ಮೂಲತಃ ಸೃಷ್ಟಿಯ ಆರಂಭದಲ್ಲಿ ಭಗವಂತ ಚತುರ್ಮುಖನಿಗೆ ನೀಡಿದ ಉಪದೇಶ.
“ಅತ್ಯಂತ ರಹಸ್ಯವಾದ ಜ್ಞಾನ ಮತ್ತು ವಿಜ್ಞಾನವನ್ನು ನಾನು ನಿನಗೆ ಹೇಳುತ್ತಿದ್ದೇನೆ ” ಎಂದಿದ್ದಾನೆ ಭಗವಂತ.  ಇಲ್ಲಿ ಬಳಸಿರುವ ‘ವಿಜ್ಞಾನ’ ಪದದ ಅರ್ಥವನ್ನು ನಾವು ಗೀತೆಯಲ್ಲಿ ಕಾಣಬಹುದು.  ಜ್ಞಾನಂ ತೇSಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ (೭-೨).  ಜ್ಞಾನ ವಿಜ್ಞಾನವಾದಾಗಲೇ ಅದು ಸಮಗ್ರವಾಗುವುದು. ವಿಜ್ಞಾನ ಅಂದರೆ ವಿ+ಜ್ಞಾನ. ಇಲ್ಲಿ ವಿಉಪಸರ್ಗ. ಅದು ವಿಲಕ್ಷಣವಾದ, ವಿಶಿಷ್ಟವಾದ, ವಿಶೇಷವಾದ, ಇತ್ಯಾದಿ ಅರ್ಥವನ್ನು ಕೊಡುತ್ತದೆ. ಒಂದು ವಿಷಯವನ್ನು ತಳಸ್ಪರ್ಶಿಯಾಗಿ ತಿಳಿಯುವುದು ವಿಜ್ಞಾನ. ಒಬ್ಬನ ವಿಜ್ಞಾನ ಇನ್ನೊಬ್ಬನ ವಿಜ್ಞಾನವಾಗಬೇಕೆಂದೇನೂ ಇಲ್ಲ.  ವಾಮನಪುರಾಣದಲ್ಲಿ ಹೇಳುವಂತೆ: ಯೇನ ಯೇನ ಯಥಾ ಜ್ಞಾತ್ವಾ ನಿಯತಂ ಮುಕ್ತಿರಾಪ್ಯತೇ ತದ್ ವಿಜ್ಞಾನಮಿತಿ ಪ್ರೋಕ್ತಂ, ಜ್ಞಾನಂ ಸಾಧಾರಣಂ ಸ್ಮೃತಂ ಯಾವ ನಿಶ್ಚಿತವಾದ ಜ್ಞಾನದಿಂದ ಒಬ್ಬ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುವುದೋ ಅದು ಆತನ ‘ವಿಜ್ಞಾನ’ವೆನಿಸುತ್ತದೆ.  ಭಗವಂತನ ಮಹಿಮೆಯನ್ನು ಮತ್ತು ಆಯಾ ಮೋಕ್ಷ ಸಾಧಕರ ಯೋಗ್ಯತೆಗನುಗುಣವಾದ ಉಪಾಸನೆಯ ಭಗವಂತನ  ವಿಶೇಷ ಗುಣಗಳನ್ನು ಉಪನಿಷತ್ತಿನಲ್ಲಿ ಹೇಳಲಾಗಿದೆ. “ಅಂಥಹ ಪರಮಗುಹ್ಯವಾದ ವಿಜ್ಞಾನವನ್ನು ನಾನು ನಿನಗೆ ಹೇಳುತ್ತೇನೆ” ಎಂದಿದ್ದಾನೆ ಭಗವಂತ.
ಭಗವಂತ ಚತುರ್ಮುಖನಿಗೆ ನೀಡಿದ ಸಮಸ್ತ ಶಾಸ್ತ್ರದ ಪ್ರಮೇಯವನ್ನು ಮುಂದಿನ ನಾಲ್ಕು ಶ್ಲೋಕಗಳು (ಚತುಃಶ್ಲೋಕೀ ಮೂಲಭಾಗವತ)ವಿವರಿಸುತ್ತವೆ. ಈ ಶ್ಲೋಕಗಳು ಭಾಗವತದ ಸಾರವಾಗಿದ್ದು,  ಇವು ನಾವು ಎಷ್ಟು ಬಗೆಯಿಂದ ಚಿಂತನೆ ಮಾಡಿದರೂ ಅಷ್ಟು ಬಗೆಯಿಂದ ತೆರೆದುಕೊಳ್ಳುವಂಥಹ ಅಪೂರ್ವ ಶ್ಲೋಕಗಳಾಗಿವೆ.

ಅಹಮೇವಾಸಮಗ್ರೇ ಚ ನಾನ್ಯದ್ ಯತ್ ಸದಸತ್ ಪರಮ್
ಪಶ್ಚಾದಹಂ ತ್ವಮೇತಚ್ಚ ಯೋSವಶಿಷ್ಯೇತ ಸೋSಸ್ಮ್ಯಹಮ್ ೩೨

“ಸೃಷ್ಟಿಗೂ ಮುನ್ನ ಯಾರೂ ಇಲ್ಲದೇ ಇದ್ದಾಗ ನಾನಿದ್ದೆ(ಸ್ವತಂತ್ರನಾಗಿದ್ದೆ). ಮುಂದೆ ಪ್ರಳಯವಾಗಿ ಈ ಸೃಷ್ಟಿ ನಾಶವಾದಾಗಲೂ ನಾನಿರುತ್ತೇನೆ(ಸ್ವತಂತ್ರನಾಗಿರುವವನು ನಾನು) . ಈ ನಡುವಿನ ಸ್ಥಿತಿ ಕಾಲದಲ್ಲಿ, ಇದೀಗ ನನ್ನೊಂದಿಗೆ ನೀನು, ಮುಂದೆ ಸೃಷ್ಟಿ ವಿಸ್ತಾರವಾದಾಗ ಇತರ ಜೀವಗಳೂ ಇರುತ್ತಾರೆ(ಸ್ಥಿತಿ ಕಾಲದಲ್ಲೂ ನಾನೊಬ್ಬನೇ ಸ್ವತಂತ್ರ. ಇನ್ನಾವುದೂ ಸ್ವತಂತ್ರವಲ್ಲ.)” ಎಂದಿದ್ದಾನೆ ಭಗವಂತ. ಭಗವಂತನ ಈ ಮಾತಿನ ಅರ್ಥ: ಸೃಷ್ಟಿಗೂ ಮುನ್ನ ಮತ್ತು ಪ್ರಳಯದ ನಂತರ  ಯಾವ ಜೀವರೂ ಇರುವುದಿಲ್ಲ ಎಂದಲ್ಲ. ಈಗಾಗಲೇ ಅನೇಕ ಬಾರಿ ಹೇಳಿರುವಂತೆ: ಜೀವರೂ ಕೂಡಾ ಅನಾದಿನಿತ್ಯರು. ಆದರೆ ಅವರು ಸೃಷ್ಟಿಗೂ ಮುನ್ನ ಮತ್ತು ಪ್ರಳಯದ ನಂತರ ಅಸ್ವತಂತ್ರರಾಗಿ ಸುಪ್ತಾವಸ್ಥೆಯಲ್ಲಿರುತ್ತಾರೆ. ಸ್ಥಿತಿಕಾಲದಲ್ಲಿ ಜೀವರಿಗೆ ಇರವಿನ ಅರಿವು ಹುಟ್ಟುತ್ತದೆ. ಆದರೆ  ಜೊತೆಗೆ ‘ತಾನು ಸ್ವತಂತ್ರ’ ಎನ್ನುವ ಭ್ರಮೆಯೂ(ಅಜ್ಞಾನವೂ) ಹುಟ್ಟುತ್ತದೆ. ಆದರೆ ಸಮಸ್ತ ಕಾಲದಲ್ಲೂ ಭಗವಂತನೊಬ್ಬನೇ ಸ್ವತಂತ್ರ  ಮತ್ತು ಇತರ ಎಲ್ಲವೂ ಆತನ ಅಧೀನವಾಗಿರುತ್ತದೆ.

ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಈ ಮೇಲಿನ ಮಾತನ್ನು ಬ್ರಹ್ಮತರ್ಕದ ಪ್ರಮಾಣ ಶ್ಲೋಕಗಳೊಂದಿಗೆ ಈ ರೀತಿ ವಿವರಿಸಿದ್ದಾರೆ:   

ಪರಂ ಸ್ವತಂತ್ರಂ  ನ
ವಿಷ್ಣೋರಧೀನಂ ಪ್ರಾಕ್  ಸೃಷ್ಟೇ ಸ್ತಥೈವ ಚ ಲಯಾದನು
ಅಸ್ಯ ಸತ್ತ್ವಪ್ರವೃತ್ತ್ಯಾದಿ ವಿಶೇಷೇಣಾಧಿಗಮ್ಯತೇ
ಸ್ವಾತಂತ್ರ್ಯಂ ಸ್ಥಿತಿಕಾಲೇ ತು ಕಥಂಚಿದ್ ಬುದ್ಧಿಮೋಹತಃ
ಪ್ರತೀಯಮಾನಮಪಿ ತು ತಸ್ಮಾನ್ನ್ಯೆವೇತಿ ಗಮ್ಯತಾಮ್
ಜನಿಷ್ಯೇSಹಂ ಲಯಿಷ್ಯೇSಹಮಿತಿ ನ ಹ್ಯಭಿಸಂಧಿತಃ
ಅತೋ ಜೀವನಮಪ್ಯೇತದ್  ಭವೇದೀಶಾಭಿಸಂಧಿತಮ್
ಅತಃ  ಸ್ವರೂಪಭೇದೇSಪಿ ಹ್ಯಾತ್ಮೈವೇದಮಿತಿ ಶ್ರುತಿಃ
ವದತ್ಯಸ್ಯೇಶತಂತ್ರತ್ವಾದ್ ಯಥಾSಶಕ್ತಸ್ತ್ವಸನ್ನಿತಿ
ವಿದ್ಯಂತೇ ಹಿ ತದಾ ಜೀವಾಃ ಕಾಲಕರ್ಮಾದಿಕಂ ತಥಾ
ಕ್ವಾನ್ಯಥಾ ಹಿ ಪುನಃ ಸೃಷ್ಟಿಃ ಪೂರ್ವಕರ್ಮಾನುಸಾರಿಣೀ
ಇತಿ ಬ್ರಹ್ಮ ತರ್ಕೇ ತ್ವಮೇತಚ್ಚ ಪರಂ ನ ಭವತಿ ಸ್ವತಂತ್ರಂ ನ

ಸೃಷ್ಟಿಪೂರ್ವ ಮತ್ತು ಲಯಕಾಲದಲ್ಲಿ ಭಗವಂತನೊಬ್ಬನೇ ಸ್ವತಂತ್ರ.  ಸ್ಥಿತಿಕಾಲದಲ್ಲಿ ಜೀವರಿಗೆ ಸ್ವತಂತ್ರಾನುಭವ ಕೇವಲ ಅಜ್ಞಾನದಿಂದ ಬರುವ ಭ್ರಮೆ. ಹೀಗಾಗಿ ಎಲ್ಲಾ ಕಾಲದಲ್ಲೂ ಜೀವ, ಪ್ರಕೃತಿ, ಈ ಪ್ರಪಂಚ, ಎಲ್ಲವೂ ಆ ಭಗವಂತನ ಅಧೀನ.

ಋತೇSರ್ಥಂ ಯತ್ಪ್ರತೀಯೇತ ನ ಪ್ರತೀಯೇತ ಚಾತ್ಮನಿ
ತದ್ ವಿದ್ಯಾದಾತ್ಮನೋ ಮಾಯಾಂ ಯಥಾಭಾಸೋ ಯಥಾತಮಃ ೩೩

ಪ್ರಕೃತಿ ನಿರ್ಮಿತ ಪ್ರಪಂಚದಲ್ಲಿರುವ ನಾವು ಆ ಭಗವಂತನ ‘ಪ್ರತಿಬಿಂಬ’. ಆದರೆ ಅದರ ಎಚ್ಚರ ನಮಗಿರುವುದಿಲ್ಲ. ನಮ್ಮನ್ನಾವರಿಸಿರುವ ಅಜ್ಞಾನದಿಂದಾಗಿ ‘ಯಥಾರ್ಥ’ ಮುಚ್ಚಿಹೋಗಿರುತ್ತದೆ. ಈ ಜಗತ್ತು, ಈ ಮಾಯೆ, ಎಲ್ಲವೂ ಭಗವಂತನಲ್ಲಿದೆ. ಆದರೆ ಅದರಿಂದಾಗಿ ಅವನಿಗೇನೂ ಪ್ರಯೋಜನವಾಗಬೇಕಿಲ್ಲ, ಆಗುವುದೂ ಇಲ್ಲ. ಸೃಷ್ಟಿಪೂರ್ವದಲ್ಲಿ ಅನಾದಿನಿತ್ಯರಾದ ಜೀವರು ಇದ್ದರೂ ಕೂಡಾ ಅವರಿಗೆ ಯಾವುದೇ ಪ್ರೇರಕತ್ವವಾಗಲೀ, ಇರವಿನ ಅರಿವಾಗಲೀ ಇರುವುದಿಲ್ಲ. ಈ ಕಾಲದಲ್ಲಿ ಪ್ರಕೃತಿಗೆ ಬಂಧಕತ್ವವಿರುವುದಿಲ್ಲ, ತ್ರಿಗುಣಗಳಲ್ಲಿ ಕಂಪನವಿರುವುದಿಲ್ಲ. ಇಂಥಹ ಸ್ಥಿತಿಯಲ್ಲಿ  ಎಲ್ಲವೂ ನಿಷ್ಕ್ರೀಯವಾಗಿ ಭಗವಂತನಲ್ಲಿರುತ್ತದೆ. ಸೃಷ್ಟಿ ಕಾಲದಲ್ಲಿ ಭಗವಂತನ ಇಚ್ಛೆಯಂತೆ ನಿಷ್ಕಂಪದಲ್ಲಿ ಕಂಪನ ಆರಂಭವಾಗಿ ನಾದ ಹುಟ್ಟುತ್ತದೆ. ನಾದದಿಂದ ರೂಪ ಹುಟ್ಟುತ್ತದೆ. ಈ ಸ್ಪಂದನದಿಂದ ಜಗತ್ತಿನ ಸೃಷ್ಟಿಯಾಗುತ್ತದೆ. ಸುಪ್ತಾವಸ್ಥೆಯಲ್ಲಿ  ಭಗವಂತನಲ್ಲಿ ಇದ್ದೂ ಇಲ್ಲದಂತೆ ಇದ್ದ ಎಲ್ಲವುದಕ್ಕೂ ಸೃಷ್ಟಿಯಾದಾಗ ಒಂದು  ಅರ್ಥ ಬರುತ್ತದೆ. ಸೃಷ್ಟಿ ರಚನೆಯಾದಾಗ ಮಾಯೆಯಲ್ಲಿ ಚಟುವಟಿಕೆ ಪ್ರಾರಂಭವಾಗುತ್ತದೆ. ಇವೆಲ್ಲವೂ ಭಗವಂತನ ಇಚ್ಛೆಯಂತೆ ಗಣಿತಬದ್ಧವಾಗಿ ನಡೆಯುತ್ತದೆ. ಭಗವಂತನ ಈ ವಿಶ್ವಗಣಿತವನ್ನು ಅರಿಯುವ ಶಕ್ತಿ ಸಾಮಾನ್ಯ ಜೀವರಿಗಿರುವುದಿಲ್ಲ. ಇವೆಲ್ಲವನ್ನೂ ಭಗವಂತ ನಮ್ಮ ಮೇಲಿನ ಕಾರುಣ್ಯದಿಂದ ಮಾಡುತ್ತಾನೆಯೇ ಹೊರತು ಆತನಿಗೆ ಇದರಿಂದ ಯಾವ ಉಪಯೋಗವೂ ಇಲ್ಲ.

 ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಈ ಮೇಲಿನ ಮಾತನ್ನು ಪ್ರಮಾಣ ಸಹಿತ ಈರೀತಿ ವಿವರಿಸಿದ್ದಾರೆ:

ಅರ್ಥವದಿವ   ಪ್ರತೀಯತೇ | ನ ಚ ಪರಮಾತ್ಮನ್ಯರ್ಥವತ್ ಪ್ರತೀಯತೇ |
ಅರ್ಥಂ ಪ್ರಯೋಜನಮೃತೇ | ನಹಿ ಜೀವ ಪ್ರಕೃತಿಭ್ಯಾಮೀಶ್ವರಸ್ಯಾರ್ಥಃ |
ಮುಖ್ಯತೋ ವಿಷ್ಣುಶಕ್ತಿರ್ಹಿ ಮಾಯಾಶಬ್ದೇನ ಭಣ್ಯತೇ |
ಉಪಚಾರತಸ್ತು ಪ್ರಕೃತಿರ್ಜೀವಶ್ಚೈವ ಹಿ ಭಣ್ಯತೇ | ಇತಿ ಚ |
ಯಥಾSSಭಾಸೋ ಜೀವಃ |
ಸರ್ವಂ ಪರೇ ಸ್ಥಿತಮಪಿ ನೈವ ತತ್ರೇತಿ ಭಣ್ಯತೇ |
ಯತೋ ಹರೇರ್ನ ಜೀವೇನ ಜೀವನಂ ನ ಹರೌ ತತಃ |
ಜೀವಃ ಪ್ರಕೃತಿರಪ್ಯತ್ರ ಯತೋ ನೈವ ಹಿ ಬಂಧಕೃತ್ |
ಕರ್ಮ ಚಾಫಲದಾತೃತ್ವಾತ್ ಕಾಲಶ್ಚಾಪರಿಣಾಮನಾತ್ |
ಯಥಾ ಛತ್ರಧಾರಾದ್ಯಾಸ್ತು ರಥಸ್ಥಾ ಅಪಿ ಸರ್ವಶಃ |
ರಥಿನೋ ನೈವ ಭಣ್ಯಂತೇ ಏವಂ ಹರಿಗತಾ ಅಪಿ |

ಭಗವಂತನಿಗೆ ಜೀವ ಮತ್ತು ಪ್ರಕೃತಿಯಿಂದ ಯಾವುದೇ ಪ್ರಯೋಜನ ಇಲ್ಲ. [ಹಾಗೇನಾದರೂ ಇರುವುದಾದರೆ ಆತ ಪರಮಾತ್ಮ ಎನಿಸುತ್ತಾನೆಯೇ?]. ಭಗವಂತನ ಇಚ್ಛೆಯಂತೆ ಆತನಿಗೆ  ಅಧೀನವಾಗಿರುವ ಜೀವ, ಪ್ರಕೃತಿ, ಮುಂತಾದವುಗಳು ಭಗವಂತನ ಮಾಯೆ ಎನಿಸುತ್ತವೆ. [ಸಂಸ್ಕೃತದಲ್ಲಿ ‘ಮಾಯಾ’ ಶಬ್ದಕ್ಕೆ ಅನೇಕ ಅರ್ಥಗಳಿವೆ. ಮುಖ್ಯವಾಗಿ ಭಗವಂತನ ಇಚ್ಛೆ, ಜ್ಞಾನ ಮತ್ತು ಮಹಿಮೆ ಆತನ ಸ್ವರೂಪಭೂತವಾದ ಮಾಯೆ ಎನಿಸುತ್ತದೆ. ಇನ್ನು ಭಗವಂತನ ಅಧೀನವಾಗಿರುವ ಪ್ರಕೃತಿ ಮಾಯೆ. ಜಡಪ್ರಕೃತಿಯನ್ನು  ಕೂಡಾ ಮಾಯೆ ಎನ್ನುತ್ತಾರೆ]. ಬ್ರಹ್ಮತರ್ಕದಲ್ಲಿ ಹೇಳಿರುವಂತೆ: ಪ್ರಪಂಚ ಭಗವಂತನಲ್ಲಿದ್ದರೂ ಕೂಡಾ ಅದರಿಂದ ಆತನಿಗೆ ಯಾವುದೇ ಪ್ರಯೋಜನ ಇಲ್ಲವಾದ್ದರಿಂದ  ಅದು ‘ಅವನಲ್ಲಿ ಇಲ್ಲಾ’ ಎನಿಸುತ್ತದೆ. ಹೇಗೆ ಛತ್ರಧಾರಿಗಳ ಇರುವಿಕೆಗೂ ರಥದ ಚಲನೆಗೂ ಸಂಬಂಧವಿರುವುದಿಲ್ಲವೋ ಹಾಗೇ,  ಭಗವಂತನಿಗೆ  ಜೀವನಿಂದ ಜೀವನವಾಗಲೀ, ಪ್ರಕೃತಿಯಿಂದ ಬಂಧನವಾಗಲೀ, ಕರ್ಮದಿಂದ ಫಲವಾಗಲೀ,  ಕಾಲದಿಂದಾಗಿ ವಿಕಾರವಾಗಲೀ ಉಂಟಾಗುವುದಿಲ್ಲ. ಈ ಕಾರಣದಿಂದ    ಜೀವ-ಪ್ರಕೃತಿ-ಕರ್ಮ-ಕಾಲಗಳು  ಭಗವಂತನಲ್ಲಿದ್ದರೂ ಕೂಡಾ ‘ಇಲ್ಲಾ’ ಎನಿಸುತ್ತವೆ.

ಯಥಾ ಮಹಾಂತಿ ಭೂತಾನಿ ಭೂತೇಷೂಚ್ಚಾವಚೇಷು ಚ
ಪ್ರವಿಷ್ಟಾನ್ಯಪ್ರವಿಷ್ಟಾನಿ ತಥಾ ತೇಷು ನ ತೇಷ್ವಹಮ್ ೩೪

“ಹೇಗೆ ಪಂಚಮಹಾಭೂತಗಳು ಪ್ರತಿಯೊಂದು ವಸ್ತುವಿನ ಒಳಗೂ ಇದ್ದು ಹೊರಗೂ ವ್ಯಾಪಿಸಿವೆಯೋ,  ಹಾಗೇ  ನಾನೂ ಕೂಡಾ ಎಲ್ಲರ ಒಳಗೆ ಅಂತರ್ಯಾಮಿಯಾಗಿದ್ದೂ ಕೂಡಾ ಎಲ್ಲವುದರ ಹೊರಗೂ ಇದ್ದೇನೆ”  ಎಂದಿದ್ದಾನೆ ಭಗವಂತ. ಅಂದರೆ ಭಗವಂತ ಎಲ್ಲವುದರಲ್ಲೂ ಇದ್ದಾನೆ ಆದರೆ ಯಾವುದರಲ್ಲೂ ಇಲ್ಲಾ. ಇದನ್ನು ಬ್ರಹ್ಮತರ್ಕ ಈ ರೀತಿ ವಿವರಿಸುತ್ತದೆ:ಯಥಾ ಮಹಾನ್ತಿ ಭೂತಾನಿ ಶರೀರೇಷು ಬಹಿಸ್ತಥಾ ಏವಂ ಹರಿಶ್ಚ ಭೂತೇಷು ಬಹಿಶ್ಚವ್ಯಾಪ್ತಿಹೇತುತಃ   ತಸ್ಮಾತ್ ತತ್ಸ್ಥೋ ನ ತತ್ಸ್ಥಶ್ಚಪ್ರೋಚ್ಯತೇ ಹರಿರೀಶ್ವರಃಇತಿ ಚ :ಹೇಗೆ ಮಹಾಭೂತಗಳು ಶರೀರದ ಒಳಗೂ ಹೊರಗೂ ಇವೆಯೋ, ಹಾಗೇ ಭಗವಂತ ಎಲ್ಲಾ ಜೀವ-ಜಡಗಳಲ್ಲಿ ಒಳಗೂ ಹೊರಗೂ ವ್ಯಾಪಿಸಿರುವುದರಿಂದ ಅವುಗಳಲ್ಲಿ ಇರುವನೆಂಬುದೂ ಸತ್ಯ, ಇಲ್ಲವೆಂಬುದೂ ಸತ್ಯ.

ಏತಾವದೇವ ಜಿಜ್ಞಾಸ್ಯಂ ತತ್ತ್ವಜಿಜ್ಞಾಸುನಾSSತ್ಮನಃ
ಅನ್ವಯವ್ಯತಿರೇಕಾಭ್ಯಾಂ ಯತ್ ಸ್ಯಾತ್ ಸರ್ವತ್ರ ಸರ್ವದಾ ೩೫

ಈ ಹಿಂದೆ ಹೇಳಿದ ಮಾತಿನ ಹಿಂದೆ ಗಾಢವಾದ ತತ್ತ್ವವಿಜ್ಞಾನವಿದೆ. ಆದರೆ ಭಗವಂತನ ಯಥಾವತ್ತಾದ ಅರಿವು ಬೇಕು ಎನ್ನುವವರು ಇಷ್ಟು ವಿಷಯಗಳನ್ನು ಅರಿತಿರಬೇಕು: ಭಗವಂತ ‘ಅನ್ವಯ’ ಮತ್ತು ‘ಅತಿರೇಕ’. ಅಂದರೆ  ಆತ ಪ್ರಪಂಚ ಇರುವಾಗಲೂ, ಇಲ್ಲದೇ ಇರುವಾಗಲೂ ಇರುವವನು.  ಎಲ್ಲಾ  ಕಾಲ-ದೇಶಗಳಲ್ಲಿ, ಈ ಪ್ರಪಂಚ ಇರಲಿ,  ಇಲ್ಲದೇ ಇರಲಿ, ಯಾರು ಸದಾ ಸ್ವತಂತ್ರನಾಗಿರುತ್ತಾನೋ ಆತನೇ ‘ದೇವರು’. ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಜೀವ-ಜಡಗಳು ರೂಪವನ್ನು ಪಡೆದು ವ್ಯಕ್ತವಾಗುತ್ತವೆ, ರೂಪ ನಾಶವಾಗಿ ಪರಮಾಣುವಾಗಿ ಅವ್ಯಕ್ತವಾಗುತ್ತವೆ.  ಆದರೆ ಎಲ್ಲಾ ದೇಶ-ಕಾಲದಲ್ಲಿ ನಾಶವಾಗದೇ ಉಳಿಯುವ ಏಕಮಾತ್ರ ತತ್ತ್ವ ಆ ಭಗವಂತ.
ಈ ರೀತಿ ಚತುರ್ಮುಖನಿಗೆ ಉಪದೇಶ ನೀಡಿದ ಭಗವಂತ: “ನಿನಗೆ ಸತ್ಯವನ್ನು ಹೇಳಿದ್ದೇನೆ. ಸೃಷ್ಟಿಯ ರಹಸ್ಯ ನಿನಗೀಗ ತಿಳಿಯಿತು. ಇನ್ನು ನೀನು ಸೃಷ್ಟಿ ಕಾರ್ಯವನ್ನು ಮುಂದುವರಿಸು” ಎಂದು ಹೇಳಿ ಅದೃಶ್ಯನಾಗುತ್ತಾನೆ.

ಅಂತರ್ಹಿತೇಂದ್ರಿಯಾರ್ಥಾಯ ಹರಯೇSವಹಿತಾಂಜಲಿಃ
ಸರ್ವಭೂತಮಯೋ ವಿಶ್ವಂ ಸಸರ್ಜೇದಂ ಸ ಪೂರ್ವವತ್ ೩೮

 ಹೊರಗಣ್ಣಿಗೆ ಕಾಣುವ ರೂಪವನ್ನು ಭಗವಂತ ಅಂತರ್ಧಾನಗೊಳಿಸಿದಾಗ, ಸರ್ವಭೂತಮಯನಾದ ಚತುರ್ಮುಖ ಭಗವಂತನಿಗೆ ನಮಸ್ಕರಿಸಿ, ಭಗವಂತನ ಇಚ್ಚೆಗನುಗುಣವಾಗಿ,  ಪೂರ್ವಕಲ್ಪದಂತೆಯೇ ಸಮಸ್ತ ಜಗತ್ತನ್ನು ಸೃಷ್ಟಿಸುತ್ತಾನೆ. [ಸರ್ವಭೂತಮಯ ಎನ್ನುವಲ್ಲಿ ‘ಮಯಾ’ ಎಂದರೆ ‘ಪ್ರಧಾನ’ ಎಂದರ್ಥ. ಆದ್ದರಿಂದ ಸರ್ವಭೂತಮಯ ಎಂದರೆ  ಸಮಸ್ತ ಜೀವಜಾತಗಳಿಗೆ ಉತ್ತಮನಾದವನು(ಜೀವೊತ್ತಮನಾದ ಚತುರ್ಮುಖ)  ಎಂದರ್ಥ]. ಈ ರೀತಿ ಸೃಷ್ಟಿ ಕಾರ್ಯದಲ್ಲಿ ತೊಡಗಿದ ಚತುರ್ಮುಖ ಮೊದಲು ನವಪ್ರಜಾಪತಿಗಳನ್ನು ಮತ್ತು ಜೊತೆಗೆ ನಾರದರನ್ನು ಸೃಷ್ಟಿ ಮಾಡುತ್ತಾನೆ.

ಮಾಯಾಂ ವಿವಿದಿಷುರ್ವಿಷ್ಣೋರ್ಮಾಯೇಶಸ್ಯ ಮಹಾಮುನಿಃ
ಮಹಾಭಾಗವತೋ ರಾಜನ್ ಪಿತರಂ ಪರ್ಯತೋಷಯತ್ ೪೧

ಸದಾ ಭಗವಂತನ ಧ್ಯಾನದಲ್ಲಿ ನಿರತನಾಗಿರುವ ಚತುರ್ಮುಖನ ಪುತ್ರ ಬ್ರಹ್ಮಚಾರಿ ನಾರದರಿಗೆ ಒಮ್ಮೆ  ಸಮಸ್ತ ಮಹಿಮೆಗಳ ಈಶನಾದ(ಮಾಯೇಶ), ಭಗವಂತನ (ವಿಷ್ಣುವಿನ) ಮಹಿಮೆಯನ್ನು ತಿಳಿಯಬೇಕು ಎನ್ನುವ ಆಸೆಯಾಯಿತಂತೆ. ಹೀಗಾಗಿ  ಅವರು ಸಮಸ್ತ ಭಗವದ್ಭಕ್ತರಲ್ಲೇ ಹಿರಿಯರಾದ ತನ್ನ ತಂದೆ ಚತುರ್ಮುಖನಲ್ಲಿ   ತಮ್ಮ  ಬಯಕೆಯನ್ನು ತೋಡಿಕೊಳ್ಳುತ್ತಾರೆ. ಆಗ ಚತುರ್ಮುಖ ಭಾಗವತವನ್ನು ನಾರದರಿಗೆ ಉಪದೇಶಿಸುತ್ತಾನೆ.

ನಾರದಃ ಪ್ರಾಹ ಮುನಯೇ ಸರಸ್ವತ್ಯಾಸ್ತಟೇ ನೃಪ
ಧ್ಯಾಯತೇ ಬ್ರಹ್ಮ ಪರಮಂ ವ್ಯಾಸಾಯಾಮಿತತೇಜಸೇ ೪೪

ಚತುರ್ಮುಖನಿಂದ ಉಪದೇಶಿಸಲ್ಪಟ್ಟ ಮೂಲ ಭಾಗವತವನ್ನು  ನಾರದರು ಸರಸ್ವತೀ ನದಿ ತೀರದಲ್ಲಿ  ಅಮಿತ ತೇಜಸ್ವಿಯಾದ ವೇದವ್ಯಾಸರಿಗೆ ಉಪದೇಶಿಸುತ್ತಾರೆ. ವೇದವ್ಯಾಸರು ಈ ಭಾಗವತವನ್ನು ವಿಸ್ತಾರವಾಗಿ ರಚನೆ ಮಾಡಿ ಮುಂದೆ ತಮ್ಮ ಪುತ್ರ ರುದ್ರಾವತಾರಿ ಶುಕಾಚಾರ್ಯರಿಗೆ ಉಪದೇಶಿಸುತ್ತಾರೆ.
ವೇದ ವ್ಯಾಸರು ಭಗವಂತನ ಅವತಾರ. ಆದರೆ ಲೋಕದ ನಿಯಮಕ್ಕನುಗುಣವಾಗಿ, ಗುರು ಪರಂಪರೆಯಂತೆ ಅವರು ನಾರದರಿಂದ ಉಪದೇಶ ಪಡೆದು ಭಾಗವತ ರಚನೆ ಮಾಡಿದರು.   ತನ್ನ ಪ್ರಿಯ ಭಕ್ತನಾದ ನಾರದರ ಕೀರ್ತಿಯನ್ನು ಪ್ರಪಂಚದ ಮುಂದೆ ಬೆಳಗಿಸಲು ಇದು ಭಗವಂತನಾಡಿದ  ಲೀಲಾ ನಾಟಕ.  [ಹರಿರ್ವ್ಯಾಸಾದಿರೂಪೇಣ ಸರ್ವಜ್ಞೋಽಪಿ ಸ್ವಯಂ ಪ್ರಭುಃ  ಶೃಣೋತಿ ನಾರದಾದಿಭ್ಯೋ ಮೋಹಾಯೈಷಾಂ ಪ್ರಸಿದ್ಧಯೇ   ಭಗವಂತ ವ್ಯಾಸಾದಿ ಅವತಾರಗಳಲ್ಲಿಯೂ ಸ್ವಯಂ ಸರ್ವಶಕ್ತ-ಸರ್ವಜ್ಞನಾಗಿದ್ದರೂ ಸಹ, ಅಸುರ ಮೋಹಕ್ಕಾಗಿ, ನಾರದಾದಿಗಳಿಗೆ ಕೀರ್ತಿಯನ್ನು ತರುವುದಕ್ಕಾಗಿ ಅವರಿಂದ ಉಪದೇಶ ಕೇಳುತ್ತಾನೆ ಎಂದಿದೆ ಪಾದ್ಮಾಪುರಾಣ].

ಯದುತಾಹಂ ತ್ವಯಾ ಪೃಷ್ಟೋ ವೈರಾಜಾತ್ ಪುರುಷಾದಿದಮ್
ಯಥಾSSಸೀತ್ ತದುಪಾಖ್ಯಾಸ್ಯೇ  ಪ್ರಶ್ನಾನನ್ಯಾಂಶ್ಚ ಕೃತ್ಸ್ನಶಃ ೪೫

    ಇಲ್ಲಿ ಪರೀಕ್ಷಿತನ ಪ್ರಶ್ನೆಗಳಿಗೆ ಉತ್ತರಿಸುತ್ತಿರುವ ಶುಕಾಚಾರ್ಯರು ಹೇಳುತ್ತಾರೆ:  “ಚತುರ್ಮುಖನ ಅಂತರ್ಯಾಮಿಯಾದ ಭಗವಂತನಿಂದ ಈ ಜಗತ್ತು ಹೇಗೆ ಸೃಷ್ಟಿಯಾಯಿತು ಎನ್ನುವುದನ್ನು ನೀನು ತಿಳಿಯಬಯಸಿದೆ. ಅದಕ್ಕ ಉತ್ತರ ರೂಪವಾಗಿ ಹಾಗು ನೀನು ಕೇಳಿದ ಇತರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ರೂಪವಾಗಿ, ನಾನು ನನ್ನ ತಂದೆ ವೇದವ್ಯಾಸರಿಂದ ಉಪದೇಶಿಸಲ್ಪಟ್ಟ ಭಾಗವತವನ್ನು ನಿನಗೆ ಉಪದೇಶಿಸುತ್ತೇನೆ” ಎಂದು.  [ ವಿರಾಟ್ ಎಂದರೆ ಬ್ರಹ್ಮ. ಹಾಗಾಗಿ ಆತನ ಅಂತರ್ಯಾಮಿ ಹರಿಯನ್ನು ‘ವೈರಾಜ’ ಎನ್ನುತ್ತಾರೆ.    ವಿರಾಡ್ ಬ್ರಹ್ಮಾಸುಮುದ್ದಿಷ್ಟಸ್ತದ್ಗತಃ ಪರಮೋ ಯತಃ|  ಅತೋ ವೈರಾಜಮಿತ್ಯೇನಮಾಹುರೀಶತ್ವತೋ ವಿರಾಟ್ ಇತಿ ಬೃಹತ್ಸಂಹಿತಾಯಾಮ್ ]

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ನವಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಒಂಬತ್ತನೇ ಅಧ್ಯಾಯ ಮುಗಿಯಿತು

*********

No comments:

Post a Comment