Showing posts with label Skandha-03 Chapter-02. Show all posts
Showing posts with label Skandha-03 Chapter-02. Show all posts

Sunday, February 25, 2024

Shrimad BhAgavata in Kannada -Skandha-03-Ch-02_02

 

ಅಹೋ ಬಕೀಯಂ ಸ್ತನಕಾಳಕೂಟಂ ಜಿಘಾಂಸಯಾSಪಾಯಯದಪ್ಯಸಾಧ್ವೀ ।

ಲೇಭೇ ಗತಿಂ ಧಾತ್ರ್ಯುಚಿತಾಂ ತತೋSನ್ಯಂ ಕಂ ವಾ ದಯಾಳುಂ ಶರಣಂ ವ್ರಜೇಮ ॥೨೩॥

 

ಶ್ರೀಕೃಷ್ಣ ಎಂತಹ  ಕರುಣಾಳು ಎನ್ನುವುದನ್ನು ಉದ್ಧವ ಹಿಂದೆ ನಡೆದ ಕೆಲವು ಘಟನೆಗಳ ಉಲ್ಲೇಖದೊಂದಿಗೆ  ವಿವರಿಸುವುದನ್ನು ನಾವಿಲ್ಲಿ ಕಾಣುತ್ತೇವೆ. “ಶ್ರೀಕೃಷ್ಣ ಪುಟ್ಟ ಮಗುವಿದ್ದಾಗ ಪೂತನಿ(ಬಕೀ*) ಎನ್ನುವ ರಾಕ್ಷಸಿ  ಒಂದು ಸುಂದರ ಹೆಣ್ಣಿನ ರೂಪದಲ್ಲಿ, ದಾದಿಯಾಗಿ ಬಂದು, ಕೃಷ್ಣನಿಗೆ ವಿಷದ ಹಾಲನ್ನು ಉಣಿಸಿ ಸಾಯಿಸಲು ಪ್ರಯತ್ನಿಸಿರುತ್ತಾಳೆ. ಆದರೂ ಕೂಡಾ ಶ್ರೀಕೃಷ್ಣ ಆಕೆಯ ತಪ್ಪನ್ನು ಮನ್ನಿಸಿ, ಆಕೆಗೆ ಮಗುವಿನ ಸೇವೆ ಮಾಡಿದ ದಾದಿ ಯಾವ ಸದ್ಗತಿ ಪಡೆಯುತ್ತಾಳೋ, ಅಂತಹ ಸದ್ಗತಿಯನ್ನು ಕರುಣಿಸಿದ” ಎಂದಿದ್ದಾನೆ ಉದ್ಧವ.

ಇಲ್ಲಿ ಓದುಗರಿಗೆ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ರಾಕ್ಷಸಿಯಾಗಿದ್ದ ಪೂತನಿಗೆ ಶ್ರೀಕೃಷ್ಣ ಸದ್ಗತಿ ನೀಡಿದನೇ ಎನ್ನುವ ಪ್ರಶ್ನೆ.  ಆದರೆ ಈ ಹಿಂದೆ ಎರಡನೇ ಸ್ಕಂಧದಲ್ಲಿ ವಿವರಿಸಿದಂತೆ(೨-೭-೨೭): ಹಾಲನ್ನುಣಿಸಿದ ಸ್ತ್ರೀಯ ದೇಹದ ಒಳಗೆ ಪೂತನಿ ಎನ್ನುವ ರಾಕ್ಷಸೀ ಜೀವದ ಜೊತೆಗೆ, ಊರ್ವಶಿ ಎನ್ನುವ ಗಂಧರ್ವ ಸ್ತ್ರೀ ಶಾಪಗ್ರಸ್ತಳಾಗಿ ಸೇರಿಕೊಂಡಿದ್ದಳು. ಹೀಗಾಗಿ ಅದು ಏಕ ದೇಹದಲ್ಲಿ ಜೀವದ್ವಯರ ಸಮಾವೇಶವಾಗಿತ್ತು. ಆದರೆ ಶ್ರೀಕೃಷ್ಣ ಹೇಗೆ ಹಂಸ ಹಾಲನ್ನು ನೀರಿನಿಂದ ಬೇರ್ಪಡಿಸಬಲ್ಲುದೋ ಹಾಗೆ, ಪುಣ್ಯಜೀವಿಯಾದ ಊರ್ವಶಿಯನ್ನು ರಾಕ್ಷಸಿಯಾದ ಪೂತನಿಯಿಂದ ಬೇರ್ಪಡಿಸಿ, ಆಕೆಯಿಂದಾದ ಅಪರಾದಗಳನ್ನು ಮನ್ನಿಸಿ, ಆಕೆಗೆ ಸದ್ಗತಿಯನ್ನು ನೀಡುತ್ತಾನೆ.  “ಇಂತಹ ದಯಾಳುವಾದ ಶ್ರೀಕೃಷ್ಣನಲ್ಲಿ ನಾನು ಶರಣು ಹೋಗುತ್ತೇನೆ” ಎಂದಿದ್ದಾನೆ ಉದ್ಧವ. [*ಭಾಗವತದಲ್ಲಿ ಪೂತನಿಯನ್ನು ಬೇರೆಬೇರೆ ಸಂದರ್ಭದಲ್ಲಿ ಬೇರೆಬೇರೆ  ಹೆಸರುಗಳಿಂದ ಕರೆಯುವುದನ್ನು ನಾವು ಕಾಣುತ್ತೇವೆ. ಮಗುವಿನ ಜೀವವನ್ನು ಹೀರಲು ಬಂದಿದ್ದ ಆಕೆಯನ್ನು ಇಲ್ಲಿ ಬಕೀ(ಕೊಕ್ಕರೆ} ಎಂದು ಕರೆದಿದ್ದಾರೆ. ಈ ಹಿಂದೆ ಅವಳನ್ನು ಉಲೂಪಿಕಾ ಎಂದೂ ಸಂಬೋಧಿಸಿರುವುದನ್ನು ನಾವು ಈಗಾಗಲೇ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ].

 

ಮನ್ಯೇSಸುರಾನ್ ಭಾಗವತಾಂಸ್ತ್ರ್ಯಧೀಶೇ ಸಂರಮ್ಭಮಾರ್ಗಾಭಿನಿವಿಷ್ಟಚಿತ್ತಾನ್ ।

ಯೇ ಸಂಯುಗೇSಚಕ್ಷತ ತಾರ್ಕ್ಷ್ಯಪುತ್ರಸ್ಯಾಂಸೇ[1] ಸುನಾಭಾಯುಧಮಾಪತನ್ತಮ್ ॥೨೪॥

 

ಕೇವಲ ಪೂತನಿಯಷ್ಟೇ ಅಲ್ಲ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಅಸುರರನ್ನೂ ಭಗವಂತ ಉದ್ಧಾರ ಮಾಡಿರುವುದನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುತ್ತಾನೆ. ಭಗವಂತ ನೋಡುವುದು ಜಾತಿಯನ್ನಲ್ಲ, ಬದಲಿಗೆ  ನಮ್ಮ ಸ್ವಭಾವವನ್ನು. ಸ್ವಭಾವ ಸಾತ್ವಿಕವಾಗಿದ್ದು, ಪ್ರಾರಾಬ್ದಕರ್ಮದಿಂದ ಅಥವಾ ಇನ್ನಾವುದೋ ಕಾರಣದಿಂದ  ಜೀವ ಅಸುರನಾಗಿದ್ದರೂ ಕೂಡಾ, ಅಂತಹ ಜೀವವನ್ನು ಭಗವಂತ ಉದ್ಧಾರ ಮಾಡುತ್ತಾನೆ.

ಇಲ್ಲಿ ಉದ್ಧವ ಭಗವಂತನನ್ನು ‘ತ್ರ್ಯಧೀಶ’ ಎಂದು ಸಂಬೋಧಿಸಿದ್ದಾನೆ. ಮೇಲಿನ-ನಡುವಿನ ಮತ್ತು ಕೆಳಗಿನ ಅಥವಾ ಭೂಃ, ಭುವಃ, ಸ್ವಃ  ಈ ಎಲ್ಲಾ ಲೋಕಗಳ(ಎಲ್ಲಾ ಹದಿನಾಲ್ಕು ಲೋಕಗಳ) ಮತ್ತು  ನಿತ್ಯಲೋಕಗಳಾದ ಶ್ವೇತದ್ವೀಪ, ವೈಕುಂಠ,  ಅನಂತಾಸನದ ಒಡೆಯನಾದ ಭಗವಂತ  ‘ತ್ರ್ಯಧೀಶ’. ರಾಜಸ-ತಾಮಸ-ಸಾತ್ವಿಕ ಹೀಗೆ ಎಲ್ಲ ರೀತಿಯ ಜೀವರ ಒಡೆಯನಾದ ಭಗವಂತ ‘ತ್ರ್ಯಧೀಶ’.

“ಭಗವಂತ ನೋಡುವುದು ಜಾತಿ-ಧರ್ಮವನ್ನಲ್ಲ. ಭಗವಂತನ ಅನುಗ್ರಹವಿರುವುದು ಜೀವಸ್ವಭಾವಕ್ಕನುಗುಣವಾಗಿ”. ಈ ಮಾತನ್ನು ಬ್ರಹ್ಮವೈವರ್ತಪುರಾಣ(ಪ್ರಚಲಿತ ಪಾಠ ಬ್ರಹ್ಮಪುರಾಣ) ಸ್ಪಷ್ಟವಾಗಿ ವಿವರಿಸಿರುವುದನ್ನು ನಾವು ಕಾಣಬಹುದು: “ಅಸುರಾ ಅಪಿ ಯೇ ವಿಷ್ಣುಂ ಶಙ್ಕಚಕ್ರಧರಂ ರಣೇ[2] । ಭಕ್ತಿಪೂರ್ವಮವೇಕ್ಷನ್ತೇ ಜ್ಞೇಯಾ ಭಗವತಾ ಇತಿ । ವಿದ್ವಿಷನ್ತಿ ತು[3] ಯೇ ವಿಷ್ಣುಮೃಷಿಪುತ್ರಾ ಅಪಿ ಸ್ಫುಟಮ್ । ಅಸುರಾಸ್ತೇSಪಿ ವಿಜ್ಞೇಯಾ ಗಚ್ಛನ್ತಿ ಚ ಸದಾ ತಮಃ । ಜೀವದ್ವಯಸಮಾಯೋಗಾದ್ಧಿರಣ್ಯಕಮುಖಾಃ[4] ಪರೇ । ಭಕ್ತಿದ್ವೇಷಯುತಾಶ್ಚ ಸ್ಯುರ್ಗತಿಸ್ತೇಷಾಂ ಯಥಾನಿಜಮ್[5] । ಕಂಸಪೂತನಿಕಾದ್ಯಾಶ್ಚ ಬಾನ್ಧವಾದಿಯುತಾ ಯತಃ । ಜೀವದ್ವಯಸಮಾಯೋಗಾದ್[6] ಗತಿದ್ವಯಜಿಗೀಷವಃ । ಸರ್ವಥಾ ಭಕ್ತಿತೋ ಮುಕ್ತಿರ್ದ್ವೇಷಾತ್ ತಮ ಉದೀರಿತಮ್ । ನಿಯಮಸ್ತ್ವನಯೋರ್ನಿತ್ಯಂ ಮೋಹಾಯಾನ್ಯದ್ ವಚೋ[7] ಭವೇತ್” ಯಾರು ಗರುಡವಾಹನನೂ, ಶಂಖ-ಚಕ್ರಧಾರಿಯೂ ಆದ  ಭಗವಂತನ ರೂಪವನ್ನು ಕಾಣುತ್ತಾರೋ, ಅವರನ್ನು ಭಗವದ್ಭಕ್ತರೆಂದೇ ತಿಳಿಯಬೇಕು. ಭಗವಂತನನ್ನು ದ್ವೇಷಿಸುವವನು ಋಷಿಕುಮಾರನಾಗಿದ್ದರೂ ಕೂಡಾ, ಆತನನ್ನು ಅಸುರನೆಂದು ತಿಳಿಯಬೇಕು. ಜೀವದ್ವಯ ಸಮಾವೇಶದಿಂದ ಬಾಹ್ಯವಾಗಿ ದ್ವೇಷ ಮಾಡಿದರೂ ಕೂಡಾ, ಆ ದೇಹದೊಳಗಿನ ಸಾತ್ವಿಕ ಜೀವ ಸದಾ ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುತ್ತದೆ. [ಜೀವದ್ವಯ ಸಮಾವೇಶಕ್ಕೆ  ಉದಾಹರಣೆ: ಕಂಸ. ಆತನ ಶರೀರದಲ್ಲಿ  ಕಾಲನೇಮಿ ಎನ್ನುವ ಅಸುರ ಮತ್ತು ಭೃಗು ಎನ್ನುವ ಪುಣ್ಯಜೀವಿಯ ಸಮಾವೇಶವಿತ್ತು. ಇದೇ ರೀತಿ, ಈ ಹಿಂದೆ ಹೇಳಿದಂತೆ: ಪೂತನಿ, ಹಿರಣ್ಯಕಶಿಪು-ಹಿರಣ್ಯಾಕ್ಷ, ಶಿಶುಪಾಲ-ದಂತವಕ್ರ, ರಾವಣ-ಕುಂಭಕರ್ಣ, ಇವರೆಲ್ಲರಲ್ಲೂ ಜೀವದ್ವಯ ಸಮಾವೇಶವಿತ್ತು]. ಹೀಗಾಗಿ ಅಂತರಂಗದಲ್ಲಿ ಭಕ್ತಿಯನ್ನಿಟ್ಟ ಜೀವರುಗಳು ಬಾಹ್ಯವಾಗಿ ಕೋಪದ ವಶವಾದರೂ ಕೂಡಾ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಅವರು ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ವಿಷ್ಣುರೂಪದಲ್ಲಿ ಅಸುರ ಸಂಹಾರ ಮಾಡಿದ ಭಗವಂತನನ್ನು ನೆನಪಿಸಿಕೊಂಡ ಉದ್ಧವ ಇಲ್ಲಿ  ಲೋಕಕಲ್ಯಾಣಕ್ಕಾಗಿ ಮತ್ತು  ಭಕ್ತರ ಅಭೀಷ್ಟ ಸಿದ್ಧಿಗಾಗಿ ಶ್ರೀಕೃಷ್ಣನಾಡಿದ ಲೀಲಾ ನಾಟಕಗಳನ್ನು ನೆನಪಿಸಿಕೊಳ್ಳುತ್ತಾನೆ. ಚತುರ್ಮುಖನ ಪ್ರಾರ್ಥನೆಯಂತೆ ಭಗವಂತ ಶ್ರೀಕೃಷ್ಣನಾಗಿ ದೇವಕಿಯ ಗರ್ಭದಿಂದ ಅವತರಿಸಿದ. ಹುಟ್ಟಿದ ಮಗುವನ್ನು   ವಸುದೇವ, ನಂದಗೋಪನ ಮನೆಯಲ್ಲಿ ಬಿಟ್ಟ. ನಂದಗೋಪನ ಮನೆಯಲ್ಲಿ ಶ್ರೀಕೃಷ್ಣ ಸುಮಾರು ಹನ್ನೊಂದು ವರ್ಷಗಳ ಕಾಲ ಒಬ್ಬ ಸಾಮಾನ್ಯ ಗೋವಳನಂತೆ ಬೆಳೆದ. ಈ ಸಮಯದಲ್ಲಿ  ಕಾಲಿಯನನ್ನು ಮರ್ದಿಸಿ ಗೋಪಾಲಕರನ್ನು ಶ್ರೀಕೃಷ್ಣ ಕಾಪಾಡಿದ. ಏಳು ವರ್ಷ ವಯಸ್ಸಿನ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಆಟದ ಕೊಡೆಯಂತೆ ಏಳು ದಿನ ಎತ್ತಿ ಹಿಡಿದ. ತನ್ನ ವೇಣುನಾದದಿಂದ ಗೋಪ-ಗೋಪಿಕೆಯರನ್ನು ಶ್ರೀಕೃಷ್ಣ ಮರುಳು ಮಾಡಿದ. ಹೀಗೆ ಗೋವಳನಾಗಿ ಶ್ರೀಕೃಷ್ಣ ತೋರಿದ ಅನೇಕ ಲೀಲಾನಾಟಕಗಳನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ. [ಈ ಎಲ್ಲಾ ಲೀಲಾ ನಾಟಕಗಳ ವಿವರಣೆಯನ್ನು ನಾವು ಸಂಕ್ಷಿಪ್ತವಾಗಿ ಈಗಾಗಲೇ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ]

 

॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ದ್ವಿತೀಯೋSಧ್ಯಾಯಃ ॥

ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು

*********



[1] “ತಾಕ್ಷರ್ಯಪುತ್ರಮಂಸೇ-“ -ಪ್ರಚಲಿತ ಪಾಠ

[2] ಶಙ್ಕಚಕ್ರಗದಾಧರಮ್” – ಪ್ರಚಲಿತ ಪಾಠ

[3] “ವಿದ್ವಿಷನ್ತಿ ಹಿ” – ಎಂದು ಕೆಲವರು ಹೇಳುತ್ತಾರೆ.

[4] “ಹಿರಣ್ಯಪ್ರಮುಖಾಃ” – ಎಂದು ಕೆಲವರು ಹೇಳುತ್ತಾರೆ

[5] “ಯಥಾ ನಿಜಾ” ಎಂದು ಕೆಲವು ಮುದ್ರಿತ ಪಾಠವಿದೆ

[6] “-ಸಮಾವೇಶಾತ್” ಎಂದು ಕೆಲವರು ಹೇಳುತ್ತಾರೆ

[7] “ಮೋಹಾಯಾನ್ಯವಚೋ-“ ಪ್ರಚಲಿತ ಪಾಠ

Saturday, February 24, 2024

Shrimad BhAgavata in Kannada -Skandha-03-Ch-02_01

 

ದ್ವಿತೀಯೋSಧ್ಯಾಯಃ

 

ವಿದುರ ಶ್ರೀಕೃಷ್ಣನ ಕುರಿತು ಕೇಳಿದಾಗ ಉದ್ಧವ ಗದ್ಗದಿಸುತ್ತಾನೆ. ಶ್ರೀಕೃಷ್ಣನ ಪರಮ ಭಕ್ತನಾದ ಆತ  ಬಾಲ್ಯದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದನ್ನೇ ತನ್ನ ಆಟವಾಗಿಸಿಕೊಂಡಿದ್ದವನಾಗಿದ್ದ. ಉದ್ಧವ ಅದೆಷ್ಟು ಉತ್ಕಟವಾಗಿ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದ ಎಂದರೆ, ತಾಯಿ ಬೆಳಗಿನ ಉಪಹಾರಕ್ಕೆ ಕರೆದರೆ, ಪೂಜೆಯಾಗದೇ ಆತ ಬರುತ್ತಿರಲಿಲ್ಲ. ಇಂತಹ ಉದ್ಧವನಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ವಿಷಯವೊಂದು ತಿಳಿದಿತ್ತು. ಅದೇನೆಂದರೆ: “ಯಾದವರೆಲ್ಲರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಸಾಯುವುದಷ್ಟೇ ಅಲ್ಲ, ನಾನೂ ಕೂಡಾ ಸದ್ಯದಲ್ಲೇ ಅವತಾರ ಸಮಾಪ್ತಿ ಮಾಡುತ್ತಿದ್ದೇನೆ” ಎಂದು ಶ್ರೀಕೃಷ್ಣ ಉದ್ಧವ ಮತ್ತು ಮೈತ್ರೇಯನಿಗೆ ತಿಳಿಸಿದ್ದ.

 

ಸ ಮುಹೂರ್ತಮಭೂತ್ ತೂಷ್ಣೀಂ ಕೃಷ್ಣಾಘ್ರಿಸುಧಯಾ ಭೃಶಮ್ ।

 ತೀವ್ರೇಣ ಭಕ್ತಿಯೋಗೇನ ನಿಮಗ್ನಃ ಸಾಧುನಿರ್ವೃತಃ ॥೦೪॥

 

ವಿದುರ “ಶ್ರೀಕೃಷ್ಣನ ಕುರಿತು ಹೇಳು” ಎಂದು ಕೇಳಿದಾಗ ಉದ್ಧವನಿಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಆತನಿಗೆ ಭಗವಂತನ ಪಾದವೆಂಬ ಅಮೃತದ ಕಡಲು ನೆನಪಾಗುತ್ತದೆ. ಆತ ಆ ಅದಮ್ಯವಾದ ಅಮೃತಸಾಗರದಲ್ಲಿ ಮುಳುಗಿಬಿಡುತ್ತಾನೆ.

 

ಶನಕೈರ್ಭಗವಲ್ಲೋಕಾನ್ನೃಲೋಕಂ ಪುನರಾಗತಃ ।

 ವಿಮೃಜ್ಯ ನೇತ್ರೇ ವಿದುರಂ ಪ್ರತ್ಯಾಹೋದ್ಧವ ಉತ್ಸ್ಮಯನ್ ॥೦೬॥

 

ಧ್ಯಾನಾಮೃತದಲ್ಲಿ  ಮುಳುಗಿದ್ದು, ನಿಧಾನವಾಗಿ ಮರಳಿ ವ್ಯವಹಾರ ಲೋಕಕ್ಕೆ ಇಳಿದು ಬಂದ ಉದ್ಧವ, ಕಣ್ಣೊರೆಸಿಕೊಂಡು ಕಿರುನಗುವಿನೊಂದಿಗೆ ವಿದುರನೊಂದಿಗೆ ಮಾತನಾಡುತ್ತಾನೆ.  [ಇವೆಲ್ಲವೂ ಭಾಗವತ ನಮ್ಮ ಮುಂದೆ ತೆರೆದಿಡುವ  ಅನುಭಾವದ ಅಭೂತಪೂರ್ವ ಅನುಭವಗಳ ವಿವರಣೆ]

 

ಉದ್ಧವ ವಿದುರ ಸಂವಾದ-ಶ್ರೀಕೃಷ್ಣನ ಲೀಲಾ ನಾಟಕಗಳು

 

ಉದ್ಧವ ಉವಾಚ

 ಕೃಷ್ಣದ್ಯುಮಣಿನಿಮ್ಲೋಚೇ ಗೀರ್ಣೇಷ್ವಜಗರೇಣ ಹ[1]

 ಕಿಂ ನು ನಃ ಕುಶಲಂ ಬ್ರೂಯಾಂ ಗತಶ್ರೀಷು ಯದುಷ್ವಹಮ್[2] ॥೦೭॥

 

“ಕೃಷ್ಣನೆಂಬ ಸೂರ್ಯ ನಮ್ಮ ಪಾಲಿಗೆ ಮುಳುಗಲಿದ್ದಾನೆ. ಇದರಿಂದಾಗಿ ಈ ದೇಶಕ್ಕೆ ಕತ್ತಲು ಕವಿಯಲಿದೆ. ಯಾದವರು ತಮ್ಮ ಸೊಬಗನ್ನು ಕಳೆದುಕೊಂಡು ಮೃತ್ಯುವಿನೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಸಾವು ಎನ್ನುವ ಹೆಬ್ಬಾವು ಅವರ ಹಿಂಬದಿಯಿಂದ ಬಾಯಿ ತೆರೆದು ಕುಳಿತಿದೆ. ಅದು ಯಾವ ಕ್ಷಣಕ್ಕೂ  ಅವರನ್ನು ಕಬಳಿಸಬಹುದು.  ಹೀಗಿರುವಾಗ  ಅವರ ಕ್ಷೇಮ-ಸಮಾಚಾರವನ್ನು ಏನೆಂದು ವಿವರಿಸಲಿ?” ಎಂದು ದುಃಖಿತನಾಗಿ ಮಾತನಾಡುತ್ತಾನೆ ಉದ್ಧವ.

 

 ದುರ್ಭಗೋ ಬತ ಲೋಕೋSಯಂ ಯದವೋ ನಿತರಾಮಪಿ ।

 ಯೇ ಸಂವಸಂತೋ ನ ವಿದುರ್ಹರಿಂ ಮೀನಾ ಇವಾಮ್ಭಸಿ[3] ॥೦೮॥

 

 “ಶ್ರೀಕೃಷ್ಣನ ಸಮಕಾಲಿನವರಾಗಿ ಹುಟ್ಟಿದ ಇವರ ದೌರ್ಭಾಗ್ಯಕ್ಕೆ ಎಣೆಯಿಲ್ಲ. ಏಕೆಂದರೆ ತಮ್ಮ ಜೊತೆಗೆ ಅವತಾರ ರೂಪಿಯಾಗಿ ಭಗವಂತ ನಿಂತಿದ್ದಾನೆ ಎನ್ನುವ ಎಚ್ಚರ ಅವರಿಗಿಲ್ಲ. ಉಳಿದವರ ಮಾತೇಕೆ? ಶ್ರೀಕೃಷ್ಣನ ಬಂಧುಗಳಾಗಿರುವ ಯಾದವರಿಗೇ ಈ ಎಚ್ಚರವಿಲ್ಲ ಎನ್ನುವುದು ದುರಾದೃಷ್ಟಕರ. ಇವರೆಲ್ಲರೂ ಸಂಸಾರವೆಂಬ ನೀರಿನಲ್ಲಿ ಈಜುತ್ತಿರುವ ಮೀನುಗಳಂತೆ ಬದುಕುತ್ತಿದ್ದಾರೆ. ಹೇಗೆ ನೀರಿನಿಂದ ಮೀನು ಆಚೆ ಬಿದ್ದರೆ ಸಾಯುತ್ತದೋ, ಅದೇ ರೀತಿ ಸಂಸಾರವೇ ಸರ್ವಸ್ವ, ಅದರಿಂದಾಚೆಗೆ ಬದುಕಿಲ್ಲ ಎಂದು ಇವರು ಜೀವಿಸುತ್ತಿದ್ದಾರೆ. ತಮ್ಮನ್ನು ಸಂಸಾರ ಸಾಗರದಿಂದ ದಡ ಸೇರಿಸಬಲ್ಲ ಭಗವಂತ ಜೊತೆಗಿದ್ದರೂ ಕೂಡಾ, ಅದರ ಪರಿಜ್ಞಾನ ಅವರಿಗಿಲ್ಲ. ಇವರಿಗೆ ಶ್ರೀಕೃಷ್ಣನ ಜ್ಞಾನಾನಂದಮಯವಾದ ದೇಹವಾಗಲೀ, ಆತನ ಅನಂತ ಮಹಿಮೆಯಾಗಲೀ ತಿಳಿದಿಲ್ಲ. ಈ ರೀತಿ ಬದುಕುತ್ತಿರುವ ಜನಾಂಗದ ದೌರ್ಭಾಗ್ಯವನ್ನು ನೋಡಿ ನನಗೆ ದುಃಖವಾಗುತ್ತಿದೆ. ”  ಎಂದು ಉದ್ಧವ ತನ್ನ ಅಂತರಂಗದ ನೋವನ್ನು ವಿದುರನಲ್ಲಿ ತೋಡಿಕೊಳ್ಳುತ್ತಾನೆ.

 

ಯದ್ ಧರ್ಮಸೂನೋರ್ಬತ ರಾಜಸೂಯೇ ನಿರೀಕ್ಷ್ಯ ದೃಕ್ಸ್ವಸ್ತ್ಯಯನಂ ತ್ರಿಲೋಕಃ ।

 ಕಾರ್ತ್ಸ್ನ್ಯೇನ ಚಾತ್ರೋಪಗತಂ[4] ವಿಧಾತುರರ್ವಾಕ್ಸೃತೌ ಕೌಶಲಮಿತ್ಯಮನ್ಯತ ॥೧೩॥

 

ಶ್ರೀಕೃಷ್ಣನನ್ನು ಭಗವಂತನ ಅವತಾರ ಎಂದು ತಿಳಿಯದ ಜನರ ದೌರ್ಭಾಗ್ಯದ ಕುರಿತು ಹೇಳುವಾಗ ಉದ್ಧವನಿಗೆ ರಾಜಸೂಯ ಯಜ್ಞದ ನೆನಪಾಗುತ್ತದೆ. ರಾಜಸೂಯ ಯಜ್ಞಕ್ಕೆ  ದೇವತೆಗಳು, ನಾರದಾದಿ ಋಷಿ-ಮುನಿಗಳು ಎಲ್ಲರೂ ಬಂದಿದ್ದರು. ಭಗವಂತನ ಮೂರು ರೂಪಗಳ ಸಮ್ಮುಖದಲ್ಲಿ(ಶ್ರೀಕೃಷ್ಣ, ಪರಶುರಾಮ ಮತ್ತು ವೇದವ್ಯಾಸ) ನಡೆದ ಅಪೂರ್ವ ಯಜ್ಞ ಅದಾಗಿತ್ತು. ಅಲ್ಲಿ ಶ್ರೀಕೃಷ್ಣ ಸೌಂದರ್ಯದ ಪ್ರತೀಕವಾಗಿ ಕುಳಿತಿದ್ದ. ಆತನ ಸೌಂದರ್ಯವನ್ನು ಕಂಡವರು ತಮ್ಮ ಅಜ್ಞಾನದಿಂದ: “ ಇದು ಚತುರ್ಮುಖ ತನ್ನ ಎಲ್ಲಾ ಸೃಷ್ಟಿ ಕೌಶಲವನ್ನು ಪೂರ್ಣಪ್ರಮಾಣದಲ್ಲಿ ಬಳಸಿ ಸೃಷ್ಟಿಸಿದ ರೂಪ” ಎಂದು ತಿಳಿದರೇ ಹೊರತು, ಅದು ಚತುರ್ಮುಖನನ್ನೇ ಸೃಷ್ಟಿಸಿದ ಜ್ಞಾನಾನಂದಮಯನಾದ ಭಗವಂತ ಎನ್ನುವುದನ್ನು ತಿಳಿಯಲಿಲ್ಲ. “ಅಲ್ಲಿ ನೆರೆದ ದೇವತೆಗಳೇ ಹೀಗೆ ತಪ್ಪಾಗಿ ತಿಳಿದಿರುವಾಗ*, ಇನ್ನು ಯಾದವರ ಪಾಡೇನು” ಎಂದು ಪ್ರಶ್ನಿಸುತ್ತಾನೆ ಉದ್ಧವ. ಹೀಗೆ ಎಲ್ಲರೂ ಭಗವತನ ಜೊತೆಗೇ ಬದುಕಿದ್ದು, ಆತನ ಮಹಿಮೆಯನ್ನು ನೋಡಿಯೂ, ಆತ ಜ್ಞಾನಾನಂದಮಯನಾದ ಭಗವಂತ ಎನ್ನುವ ಅರಿವಿಲ್ಲದೇ ಬದುಕಿರುವುದು ಅವರ ದೌರ್ಭಾಗ್ಯ.

[*ಅಪರೋಕ್ಷ ಜ್ಞಾನಿಗಳು ಎಂದರೆ ಭಗವಂತನನ್ನು ಜ್ಞಾನದಲ್ಲಿ ಕಂಡವರು ಅಷ್ಟೇ. ಇಂತಹ ಅಪರೋಕ್ಷ ಜ್ಞಾನಿಗಳೇ ಮುಂದೆ ದೇವಪದವಿಯನ್ನು ಅಲಂಕರಿಸಬಹುದು. ಹೀಗಾಗಿ, ಅಪರೋಕ್ಷ ಜ್ಞಾನಿಗಳಿಗೆ ಮತ್ತು ಎಲ್ಲಾ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರಬೇಕೆಂದೇನು ಇಲ್ಲ. ಬ್ರಹ್ಮ-ವಾಯುವನ್ನು ಬಿಟ್ಟರೆ, ಇತರ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರುತ್ತದೆ ಎಂದು ಹೇಳಲಾಗದು. ಹೀಗಾಗಿ ರಾಜಸೂಯ ಯಜ್ಞಕ್ಕೆ ಆಗಮಿಸಿದ ದೇವತೆಗಳೂ ಶ್ರೀಕೃಷ್ಣನನ್ನು ಚತುರ್ಮುಖ ಸೃಷ್ಟಿಸಿದ ಒಂದು ರೂಪವೆಂದು ತಪ್ಪಾಗಿ ತಿಳಿದರು]    

ಈ ಶ್ಲೋಕದಲ್ಲಿ ‘ಬತ’ ಎನ್ನುವ ಪದವನ್ನು ‘ಆಶ್ಚರ್ಯ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ತ್ರಿಲೋಕಸ್ಯಾಜ್ಞಾನಂ ಬತ ರಾಜಸೂಯ ಯಜ್ಞದಲ್ಲಿ ಪಾಲ್ಗೊಂಡಿದ್ದ ಮೂರು ಲೋಕದ ಬಹುತೇಕರು  ಭಗವಂತನ  ಜ್ಞಾನಾನಂದಮಯವಾದ ಶರೀರವನ್ನು ‘ಚತುರ್ಮುಖ ಸೃಷ್ಟಿಸಿದ ಭೌತಿಕ ಶರೀರ’ ಎಂದು ತಪ್ಪಾಗಿ ತಿಳಿದಿದ್ದು ಪರಮಾಶ್ಚರ್ಯ. ಸ್ಕಾಂದ ಪುರಾಣದಲ್ಲಿ ಹೇಳುವಂತೆ: “ಆನನ್ದರೂಪಂ ದೃಷ್ಟ್ವಾ ತು[5] ಲೋಕೋ ಭೌತಿಕಮೇವ ತು । ಮನ್ಯತೇ ವಿಷ್ಣುರೂಪಂ ಚ ಅಹೋ ಭ್ರಾನ್ತಿರ್ಬಹುಸ್ಥಿತಾ[6] ಅಲ್ಲಿ ಸೇರಿದ್ದ ಹೆಚ್ಚಿನವರಿಗೆ  ಈ ರೀತಿಯ ಭ್ರಾಂತಿ ಬಂದಿರುವುದು ಅಚ್ಚರಿ.



[1] “ಹಿ” – ಪ್ರಾಚೀನ  ಪಾಠ

[2] “ಗತಶ್ರೀಷು ಗತೇಷ್ವಸತ್” – ಪ್ರಾಚೀನ ಪಾಠ

[3] “ಇವೋಡುಪಮ್” – ಪ್ರಚಲಿತ ಪಾಠ

[4] ಚಾದ್ಯೇಹ ಗತಮ್” – ಎಂದು ಪ್ರಾಚೀನರು ಓದುತ್ತಾರೆ.

[5]ದೃಷ್ಟ್ವಾsಪಿ” – ಪ್ರಚಲಿತ ಪಾಠ

[6] “ಬಹುಸ್ಥಿತಾ” ಪ್ರಚಲಿತ ಪಾಠ