Sunday, September 29, 2013

Shrimad BhAgavata in Kannada -Skandha-02-Ch-01(1)

ದ್ವಿತೀಯ ಸ್ಕಂಧ

ಪ್ರಥಮೋSಧ್ಯಾಯಃ

ಓಂ ನಮೋ ಭಗವತೇ ವಾಸುದೇವಾಯ ಓಂ
॥ ಶ್ರೀ ಗುರುಭ್ಯೋ ನಮಃ ಹರಿಃ ಓಂ ॥

ಉತ್ತರ ಕೊಡುವಂತಹ ಸುಸಂಬದ್ಧ  ಪ್ರಶ್ನೆಯನ್ನು ಪ್ರಸಕ್ತ ಕಾಲದಲ್ಲಿ ಕೇಳಿದ ಪರೀಕ್ಷಿತ ರಾಜನನ್ನು ಶುಕಾಚಾರ್ಯರು  ಪ್ರಶಂಸಿಸುವುದರೊಂದಿಗೆ ಭಾಗತದ ಎರಡನೇ ಸ್ಕಂಧ ಆರಂಭವಾಗುತ್ತದೆ. 

ಶ್ರೀಶುಕ ಉವಾಚ--
ವರೀಯಾನೇಷ ತೇ ಪ್ರಶ್ನಃ ಕೃತೋ ಲೋಕಹಿತಂ ನೃಪ
ಆತ್ಮವಿತ್ಸಮ್ಮತಃ ಪುಂಸಾಂ ಶ್ರೋತವ್ಯಾದಿಷು ಯಃ ಪರಃ ೦೧

 “ಇಡೀ ಮಾನವ ಸಮುದಾಯಕ್ಕೆ ಅವಶ್ಯವಾದ ಪ್ರಶ್ನೆಯನ್ನು ನೀನು ಕೇಳಿದೆ. ಈ ಪ್ರಶ್ನೆ ಕೇವಲ ನಿನ್ನೊಬ್ಬನದಷ್ಟೇ ಅಲ್ಲ, ಇದು ಪ್ರತಿಯೊಬ್ಬ ಮನುಷ್ಯ ತಿಳಿಯಲೇ ಬೇಕಾದ ವಿಚಾರದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ದೊರಕಿದರೆ  ಇಡೀ ಮನುಕುಲದ ಸಮಸ್ಯೆಗೆ ಉತ್ತರ ಸಿಕ್ಕಂತಾಗುತ್ತದೆ. ‘ಮನುಷ್ಯ ಜೀವನದಲ್ಲಿ ಕೇಳಲೇಬೇಕಾದ ಸಂಗತಿ ಯಾವುದು’ ಎನ್ನುವ ನಿನ್ನ ಪ್ರಶ್ನೆ ಕೇವಲ ನನಗಷ್ಟೇ ಖುಷಿ ಕೊಡುವ ಪ್ರಶ್ನೆಯಲ್ಲ, ಇದು ಎಲ್ಲಾ ಆತ್ಮಜ್ಞಾನಿಗಳೂ ಮೆಚ್ಚುವ ಪ್ರಶ್ನೆ. ಇದು ಎಲ್ಲಾ ಅಜ್ಞಾನಿಗಳಿಗೂ ಉದ್ಧಾರದ ದಾರಿ ತೋರುವ ವಿಚಾರದ ಮೇಲಿನ ಪ್ರಶ್ನೆ. ನೀನು ಇಡೀ ಲೋಕಕ್ಕೆ ಕಲ್ಯಾಣಕರವಾಗುವಂತಹ ಪ್ರಶ್ನೆ ಮಾಡಿದೆಯಲ್ಲಾ, ತುಂಬಾ ಸಂತೋಷವಾಯಿತು” ಎಂದು ಪರೀಕ್ಷಿತ ರಾಜನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಶುಕಾಚಾರ್ಯರು.

ಶ್ರೋತವ್ಯಾನೀಹ ರಾಜೇಂದ್ರ ನೃಣಾಂ ಸಂತಿ ಸಹಸ್ರಶಃ
ಅಪಶ್ಯತಾಮಾತ್ಮತತ್ತ್ವಂ ಗೃಹೇಷು ಗೃಹಮೇಧಿನಾಂ೦೨

ನಿದ್ರಯಾ ಹ್ರಿಯತೇ ನಕ್ತಂ ವ್ಯವಾಯೇನ ನವಂ ವಯಃ
ದಿವಾ ಚಾರ್ಥೇಹಯಾ ರಾಜನ್ ಕುಟುಂಬಭರಣೇನ ವಾ೦೩
   
ಶುಕಾಚಾರ್ಯರು ಹೇಳುತ್ತಾರೆ: “ಇಂದು ಪ್ರಶ್ನೆ ಹಾಕುವವರೇ ಇಲ್ಲವಾಗಿದ್ದಾರೆ.  ಹೇಳಿದರೆ ಕೇಳುವವರೂ ಇಲ್ಲಾ. ಇಂತಹ ಸಮಯದಲ್ಲಿ ನೀನು ಕೇಳಬೇಕೆಂದು ಸಂಕಲ್ಪಿಸಿ ಕುಳಿತಿರುವುದು ಶ್ಲಾಘನೀಯ” ಎಂದು.
ಜೀವನದಲ್ಲಿ ಕೇಳಬೇಕಾದ ಸಂಗತಿ ಅನೇಕ. ಅದು ಏಳು ದಿನದಲ್ಲಲ್ಲ, ಏಳು ಜನ್ಮದಲ್ಲೂ ಮುಗಿಯದ ವಿಚಾರ. ದೇವಲೋಕದಲ್ಲಿ ದೇವೇಂದ್ರ  ಬೃಹಸ್ಪತಿಯಾಚಾರ್ಯರಿಂದ ಪಾಠ ಕೇಳಿದ ಪ್ರಸಂಗವನ್ನು ವಿವರಿಸುತ್ತಾ ಪತಂಜಲಿ ಹೇಳುತ್ತಾನೆ: “ಸಾವಿರ-ಸಾವಿರ ವರ್ಷಗಳ ಕಾಲ ಪಾಠ ಕೇಳಿದರೂ ಕಲಿತು ಮುಗಿಯಲಿಲ್ಲ” ಎಂದು. ಇದರರ್ಥ ಸಾವಿರ-ಸಾವಿರ  ವರ್ಷ ಕಲಿತರೂ ಮುಗಿಯದಷ್ಟು ಜ್ಞಾನವಿದೆ. ಆದರೆ ಇಂದು ಯಾರಿಗೂ ಈ ಅಪೂರ್ವವಾದ ವೇದಾಂತ ಬೇಡವಾಗಿದೆ. ಬಾಲ್ಯದಲ್ಲಿ ವೇದಾಂತ ಸಾಧ್ಯವಾಗಲಿಲ್ಲ, ಮುದಿತನದಲ್ಲಿ ಅಧ್ಯಯನಕ್ಕೆ ತ್ರಾಣವಿಲ್ಲ, ಇನ್ನು ಯೌವನದಲ್ಲಿ ಮನೆ, ಸಂಸಾರ, ಇತ್ಯಾದಿಯಲ್ಲಿ ಕಾಲ ಕಳೆದು ಹೋಗುತ್ತದೆ. ಲೌಕಿಕದಿಂದಾಚೆಗೆ ಅಧ್ಯಾತ್ಮವೆಂಬ ಒಂದು ಅಪೂರ್ವ ಮೌಲ್ಯ ಇದೆ ಎನ್ನುವ ಎಚ್ಚರವೇ ಇಂದಿನ ಜನರಿಗೆ ತಿಳಿದಿಲ್ಲ.  ಎಲ್ಲರೂ ಕೇವಲ ಐಹಿಕ ಜೀವನವೇ ಪುರುಷಾರ್ಥ ಎಂದು ತಿಳಿದು ಬದುಕುತ್ತಿದ್ದಾರೆ. ದೇಹದ ಪೋಷಣೆಯಿಂದಾಚೆಗೆ, ದೇಹದೊಳಗಿರುವ ಅನಾದಿ-ಅನಂತವಾಗಿರುವ  ನಿತ್ಯತತ್ತ್ವದ ಎಚ್ಚರ ಯಾರಿಗೂ ಇಲ್ಲಾ.
ಭಗವಂತನ ಬಗೆಗೆ ಎಚ್ಚರ ಇಲ್ಲದೇ ಬದುಕುತ್ತಿರುವ ಜನ ಹಗಲಿನಲ್ಲಿ ಹಣದ ಹಿಂದೆ ಓಡಿದರೆ, ರಾತ್ರಿಯನ್ನು ನಿದ್ದೆಯಲ್ಲೋ ಅಥವಾ ಲೈಂಗಿಕ ಸುಖದಲ್ಲೋ ಕಳೆಯುತ್ತಿರುತ್ತಾರೆ. ಇದನ್ನೇ ಕಾರಣವಾಗಿಟ್ಟುಕೊಂಡು ತಮ್ಮಲ್ಲಿ ವೇದಾಂತ ಚಿಂತನೆಗೆ ಸಮಯವಿಲ್ಲ ಎನ್ನುವವರಿದ್ದಾರೆ.  ಮನಶಾಸ್ತ್ರದ ಹಿನ್ನೆಲೆಯಲ್ಲಿ ನೋಡಿದರೆ ‘ಸಮಯವಿಲ್ಲ’ ಎನ್ನುವುದರ ಒಳಾರ್ಥ ‘ಮನಸ್ಸಿಲ್ಲ’ ಎಂದರ್ಥ.

ಗೇಹಾಪತ್ಯಕಳತ್ರಾದಿಷ್ವಾತ್ಮದೈನ್ಯೇಷ್ವಸತ್ಸ್ವಪಿ
ತೇಷು ಪ್ರಸಕ್ತೋ ನಿಧನಂ ಪಶ್ಯನ್ನಪಿ ನ ಪಶ್ಯತಿ೦೪

ತಸ್ಮಾದ್ ಭಾರತ ಸರ್ವಾತ್ಮಾ ಭಗವಾನ್ ಹರಿರೀಶ್ವರಃ
ಶ್ರೋತವ್ಯಃ ಕೀರ್ತಿತವ್ಯಶ್ಚ ಸ್ಮರ್ತವ್ಯಶ್ಚೇಚ್ಛತಾSಭಯಮ್ ೦೫

ಏತಾವಾನ್ ಸಾಂಖ್ಯಯೋಗಾಭ್ಯಾಂ ಸ್ವಧರ್ಮಪರಿನಿಷ್ಠಯಾ
ಜನ್ಮಲಾಭಃ ಪರಃ ಪುಂಸಾಮಂತೇ ನಾರಾಯಣಸ್ಮೃತಿಃ ೦೬

ನಾವು ವ್ಯಾವಹಾರಿಕ ವಿಚಾರಲ್ಲಿ ಇರಬಾರದು ಎಂದಲ್ಲ, ಆದರೆ ಅದರಲ್ಲೇ ಮುಳುಗುವುದು ತಪ್ಪು. ಇಂದು ಎಲ್ಲರೂ ಮನೆ, ಪತಿ, ಪತ್ನಿ, ಮಕ್ಕಳು ಇತ್ಯಾದಿ ವಿಚಾರದಲ್ಲೇ ಮುಳುಗಿ ಬಿಟ್ಟಿದ್ದಾರೆ.  ಇದರಿಂದಾಗಿ ಕೇವಲ ವ್ಯಕ್ತಿ ನಾಶವಷ್ಟೇ ಅಲ್ಲ, ವ್ಯಕ್ತಿತ್ತ್ವದ ಪತನವಾಗುತ್ತದೆ. ವ್ಯಾವಹಾರಿಕ ವಿಚಾರದಲ್ಲೇ ಮುಳುಗಿ ಅದರಿಂದ ವ್ಯಕ್ತಿತ್ತ್ವ ನಾಶವಾಗುವುದನ್ನು ಕಣ್ಣಾರೆ ಕಂಡರೂ ಸಹ, ಅದೇ ಸರ್ವಸ್ವ ಎಂದು ಕಣ್ಮುಚ್ಚಿ ಬದುಕುತ್ತಿದ್ದಾರೆ ಜನ. ಹೀಗಿರುವಾಗ ಆತ್ಮಜ್ಞಾನಿಗಳ ಸಮ್ಮುಖದಲ್ಲಿ ಪರೀಕ್ಷಿತ ‘ಕೇಳಬೇಕು’ ಎಂದು ಅಭಿಲಾಷೆ ವ್ಯಕ್ತಪಡಿಸಿರುವುದನ್ನು ಶುಕಾಚಾರ್ಯರು ಕೊಂಡಾಡುತ್ತಾರೆ.

ಮನುಷ್ಯನ ಬದುಕೇ ಭಯದ ಸರಮಾಲೆ. ‘ಭಗವಂತ ನಮ್ಮನ್ನು ರಕ್ಷಿಸುತ್ತಾನೆ’ ಎನ್ನುವ ಭರವಸೆ ಯಾರಿಗಿಲ್ಲವೋ, ಯಾರು ‘ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು’ ಎಂದು ತೀರ್ಮಾನಮಾಡಿ ಬದುಕುತ್ತಿರುತ್ತಾರೋ, ಅವರಿಗೆ ಭಯದಿಂದ ಪಾರಾಗುವ ದಾರಿಯೇ ಇಲ್ಲ.  “ನನಗೊಬ್ಬ ರಕ್ಷಕನಿದ್ದಾನೆ, ಅವನು ರಕ್ಷಿಸುವಷ್ಟು ಕಾಲ ನನಗೆ ಯಾರೂ ಏನನ್ನೂ ಮಾಡಲಾರರು, ಅವನು ಕೈಬಿಟ್ಟರೆ ಯಾರೂ ನನ್ನನ್ನು ರಕ್ಷಿಸಲಾರರು, ನನ್ನನ್ನು ರಕ್ಷಿಸುವ ಆ ಭಗವಂತ ರಕ್ಷಿಸಿಯೇ ರಕ್ಷಿಸುತ್ತಾನೆ” ಎನ್ನುವ ಪೂರ್ಣ ಭರವಸೆ ನಮ್ಮಲ್ಲಿದ್ದಾಗ  ಯಾವ ಭಯವೂ ಇಲ್ಲ. ಇದೊಂದೇ ಭಯದಿಂದ ಪಾರಾಗುವ ಉಪಾಯ. ಒಟ್ಟಿನಲ್ಲಿ ಹೇಳಬೇಕೆಂದರೆ: ನಮ್ಮ ಬದುಕಿನ ಹೊಣೆಯನ್ನು ನಾವೇ ಹೊತ್ತರೆ ಅದು ಭಯ; ವಿಶ್ವ ನಿಯಾಮಕ ಭಗವಂತ ಎಲ್ಲವನ್ನೂ ನೋಡುತ್ತಿದ್ದಾನೆ, ಅವನು ರಕ್ಷಿಸುತ್ತಿದ್ದಾನೆ ಎನ್ನುವ ಭಾವ ಧೈರ್ಯ. ಭಗವಂತನ ರಕ್ಷಣೆಯ ಹೊಣೆಯನ್ನು ನಂಬಿದವರಿಗೆ ಯಾವ ಪ್ರಸಂಗದಲ್ಲೂ ಭಯವಾಗುವುದಿಲ್ಲ. ಹೀಗಾಗಿ ಭಯಾತೀತನಾಗಲು ಇರುವ ಒಂದೇ ಒಂದು ದಾರಿ-ಭಗವಂತನ ಬಗೆಗಿನ ಎಚ್ಚರ.
ಮೇಲಿನ ಶ್ಲೋಕದಲ್ಲಿ ಭಗವಂತನನ್ನು ಸರ್ವಾತ್ಮಾ, ಹರಿಃ, ಈಶ್ವರ ಎಂದು ಸಂಬೋಧಿಸಿದ್ದಾರೆ.  ‘ಸರ್ವಾತ್ಮಾ’ ಎಂದರೆ ಎಲ್ಲರೊಳಗೂ ಇರುವವನು, ಎಲ್ಲರನ್ನೂ ಹೊತ್ತವನು ಎಂದರ್ಥ. ನನ್ನೊಳಗಿದ್ದು ನನ್ನನ್ನು ಭಗವಂತ  ರಕ್ಷಿಸುತ್ತಿರುವಾಗ ನನಗೇಕೆ ಭಯ ಎನ್ನುವ ಸಂಕಲ್ಪ ನಮ್ಮಲ್ಲಿದ್ದಾಗ, ಒಂದು ವೇಳೆ ನಾವು ದುರಂತಕ್ಕೊಳಗಾಗುವ ಪ್ರಸಂಗ ಬಂದರೂ ಕೂಡಾ, ಅದು ನಮಗೆ ಭಯಾನಕ ಎನಿಸುವುದಿಲ್ಲ.
ಇಲ್ಲಿ ‘ಈಶ್ವರ’ ಎಂದರೆ ಎಲ್ಲಾ ದೇವಾದಿ-ದೇವತೆಗಳಿಗೂ ಒಡೆಯನಾದ, ಸರ್ವಸಮರ್ಥ ಭಗವಂತ. ಅವನೇ ನಾರಾಯಣ. ಇದನ್ನೇ  ಶಂಕರಾಚಾರ್ಯರು ಈಶ್ವರಃ ಈಶನಶೀಲೋ ನಾರಾಯಣಃ ಎಂದು ವರ್ಣಿಸಿದ್ದಾರೆ. ಅಂತಹ ನಾರಾಯಣನಿಗೆ ನಾವು ಶರಣಾಗಬೇಕು.
ಸಂಸಾರ ದುಃಖವನ್ನು ಪರಿಹರಿಸಿ ನಮ್ಮನ್ನು ಸಂಸಾರದಿಂದ ಬಿಡುಗಡೆಗೊಳಿಸುವವನು ಹರಿಃ. ನಾವು ಭಕ್ತಿಯಿಂದ ಏನನ್ನು ಅರ್ಪಣೆ ಮಾಡಿದೆವೋ ಅದನ್ನು ಸ್ವೀಕರಿಸಿ ಅನಂತ ಫಲವನ್ನು ಕೊಡುವವನು ಹರಿಃ. ಇಂತಹ ಭಗವಂತನ ಅರಿವೇ ಜೀವನದ ಸಾರ್ಥಕ್ಯ. ನಾವು ತಿಳಿಯಬೇಕಾಗಿರುವುದು, ಕೇಳಬೇಕಾಗಿರುವುದು ಮತ್ತು ಧ್ಯಾನಿಸಬೇಕಾಗಿರುವುದು ಭಗವಂತನನ್ನು. ಹೀಗಾಗಿ ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿಯಬಹುದೋ ಅಂತಹ ಭಗವಂತನನ್ನು ನಿರಂತರ ತಿಳಿಯುವ ಪ್ರಯತ್ನವೇ ಜೀವನದ ಅತಿದೊಡ್ಡ ಸಾಧನೆ.
ಈ ಹಿಂದೆ ಹೇಳಿದಂತೆ ಮನುಷ್ಯ ಸಾಯುವ ಕ್ಷಣದಲ್ಲಿ ಯಾವುದನ್ನು ಉತ್ಕಟವಾಗಿ ನೆನೆಯುತ್ತಾನೋ, ಅದನ್ನೇ ಮುಂದಿನ ಜನ್ಮದಲ್ಲಿ ಪಡೆಯುತ್ತಾನೆ. ಹೀಗಾಗಿ ಪ್ರಾಣೋತ್ಕ್ರಮಣ ಕಾಲದಲ್ಲಿ  ಭಗವಂತನನ್ನು ನೆನೆದವನು ಮುಂದೆ ಭಗವಂತನನ್ನು ಸೇರುತ್ತಾನೆ. ಆದರೆ ಇದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ಜನ್ಮ-ಜನ್ಮಾಂತರದ ಸಾಧನೆ ಅಗತ್ಯ. ಕೆಲವೊಮ್ಮೆ ಇಡೀ ಜೀವಮಾನವೆಲ್ಲಾ ಭಗವಂತನ ಸ್ಮರಣೆ ಮಾಡಿದರೂ ಕೂಡಾ, ಸಾಯುವ ಕ್ಷಣದಲ್ಲಿ ಭಗವಂತನ ಸ್ಮರಣೆ ಬಾರದೇ ಹೋಗಬಹುದು. ಜೀವನದ ಪರಮ ಸೌಭಾಗ್ಯ ಎಂದರೆ ಕೊನೇ ಕ್ಷಣದಲ್ಲಿ ನಾರಾಯಣ ಸ್ಮೃತಿ ಬರುವುದು. ಅಂತಹ ಎಚ್ಚರವನ್ನು, ಸಾವಿನ ಕೊನೇ ಕ್ಷಣದಲ್ಲಿ ಮನಸ್ಸನ್ನು ಹೇಗೆ ಧ್ಯಾನಕ್ಕೆ ಒಡ್ಡಿಕೊಳ್ಳಬೇಕು ಎನ್ನುವ ಧ್ಯಾನ ಪ್ರಕ್ರಿಯೆಯನ್ನು ಶುಕಾಚಾರ್ಯರು ಪರೀಕ್ಷಿತನಿಗೆ ಉಪದೇಶಿಸುವುದನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕಾಣಬಹುದು.   

ಪ್ರಾಯೇಣ ಮುನಯೋ ರಾಜನ್ ನಿವೃತ್ತಾ ವಿಧಿನಿಷೇಧತಃ
ನೈರ್ಗುಣ್ಯಸ್ಥಾ ರಮಂತೇ ಸ್ಮ ಗುಣಾನುಕಥನೇ ಹರೇಃ ೦೭

ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಂ
ಅಧೀತವಾನ್ ದ್ವಾಪರಾದೌ ಪಿತುರ್ದ್ವೈಪಾಯನಾದಹಮ್ ೦೮


“ಶಾಸ್ತ್ರಗಳನ್ನು ಮನನಮಾಡಿ ಎಲ್ಲಾ ವಿಧಿ ನಿಷೇಧವನ್ನು ಮೀರಿ ನಿಂತ ಅಪರೋಕ್ಷ ಜ್ಞಾನಿಗಳೂ ಕೂಡಾ ಸದಾ ಹರಿಯ ಗುಣಗಾನವನ್ನು, ಭಗವಂತನ ಕಥಾನುಶ್ರವಣವನ್ನು ಬಯಸುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ನಾನು ನಿನಗೆ  ನನ್ನ ತಂದೆ ವೇದವ್ಯಾಸರು ಉಪದೇಶಿಸಿರುವ,  ಅಷ್ಠಾದಶಪುರಾಣಗಳಲ್ಲಿ ಅತ್ಯಂತ ಶ್ರೇಷ್ಠವೆನಿಸಿರುವ, ಪುರಾಣಗಳ ಸಾರಭೂತವಾದ ಭಾಗವತವನ್ನು ಹೇಳುತ್ತೇನೆ”   ಎನ್ನುತ್ತಾರೆ.     

No comments:

Post a Comment