Friday, November 15, 2013

Shrimad BhAgavata in Kannada -Skandha-02-Ch-02(1)

ದ್ವಿತೀಯೋSಧ್ಯಾಯಃ


ಶ್ರೀಶುಕ ಉವಾಚ--
ಶಬ್ದಸ್ಯ ಹಿ ಬ್ರಹ್ಮಣ ಏಷ ಪಂಥಾ ಯನ್ನಾಮಭಿರ್ಧ್ಯಾಯತಿ ಧೀರಪಾರ್ಥೈಃ
ಪರಿಭ್ರಮಂಸ್ತತ್ರ ನ ವಿಂದತೇಽರ್ಥಾನ್ಮಾಯಾಮಯೇ ವಾಸನಯಾ ಶಯಾನಃ ೦೨

ಧ್ಯಾನ ಪ್ರಕ್ರಿಯೆಯನ್ನು ವಿವರಿಸುತ್ತಾ ಶುಕಾಚಾರ್ಯರು ಇಲ್ಲಿ ಒಂದು ವಿಶೇಷ ಹಾಗೂ ಅತ್ಯಂತ ಮಹತ್ತರವಾದ ವಿಷಯವನ್ನು ಪರೀಕ್ಷಿತನಿಗೆ ವಿವರಿಸುವುದನ್ನು ಕಾಣುತ್ತೇವೆ. ಧ್ಯಾನ ಸಾಧನೆ ಮಾಡುತ್ತಾ-ಮಾಡುತ್ತಾ ಮುಂದುವರಿದು ಪ್ರಪಂಚದಲ್ಲಿನ ಎಲ್ಲಾ ಶಬ್ದಗಳಲ್ಲಿ ಭಗವಂತನನ್ನು ಕಾಣಬೇಕು ಎಂದಿದ್ದಾರೆ ಶುಕಾಚಾರ್ಯರು. ಇಲ್ಲಿ  ಶಬ್ದ ಎಂದರೆ ಕೇವಲ ಸಂಸ್ಕೃತ ಶಬ್ದವಷ್ಟೇ ಅಲ್ಲ, ಪ್ರಪಂಚದ ಎಲ್ಲಾ ಭಾಷೆಯ ಎಲ್ಲಾ ಶಬ್ದಗಳು, ಜೊತೆಗೆ ಪ್ರಾಣಿ-ಪಕ್ಷಿಗಳ ಮತ್ತು ಪ್ರಕೃತಿಯ ನಾದ (ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು, ನೀರಿನ ಝುಳು-ಝುಳು, ಸಮುದ್ರದ ಮೊರೆತ, ಗಾಳಿಯ ಸುಯಿಲು, ಎಲೆಗಳ ಮರ್ಮರ), ಎಲ್ಲದರಲ್ಲೂ ಭಗವಂತನನ್ನು ಕಾಣಬೇಕು. ಇದನ್ನೇ ಐತರೇಯ ಅರಣ್ಯಕದಲ್ಲಿ ಹೀಗೆ ಹೇಳಿದ್ದಾರೆ:  ಸರ್ವೇ ಘೋಷಾಃ ಸರ್ವೇ ವೇದಾಃ ಸರ್ವಾಃ ರಚಃ ಎಕೈವ ವ್ಯಾಹೃತಿಃ”  ಕೇವಲ ಶಬ್ದಗಳಿಗೆ ಮಾತ್ರ ಅರ್ಥವಿರುವುದಲ್ಲ, ನಾದಗಳಿಗೂ ಅರ್ಥವಿದೆ. ನಾದದಿಂದ ಒಂದು ಮಾತಿಗೆ ಹೊಸ ಅರ್ಥ ಬರುತ್ತದೆ. ಪ್ರತಿ ಮಾತಿನಲ್ಲೂ ಒಂದು ಸಂಗೀತವಿದೆ. ನಾದ ಸಂಯೋಜನೆ ಇಲ್ಲದೇ ಭಾವಾಭಿವ್ಯಕ್ತಿ ಆಗುವುದೇ ಇಲ್ಲ.  ವಾಸ್ತವವಾಗಿ ಶಬ್ದಗಳಿಗೆ ಅರ್ಥ ಹುಟ್ಟುವುದೇ ನಾದದಿಂದ. ಆದ್ದರಿಂದ ನಾದವೂ ಕೂಡಾ ಒಂದು ಪ್ರತ್ಯೇಕ ಭಾಷೆ. ಹೀಗಾಗಿ ಋಗ್ವೇದ-ಯಜುರ್ವೇದದ ಮಂತ್ರಗಳೇ ಇರುವ ಸಾಮವೇದ ಅಲ್ಲಿರುವ ನಾದದಿಂದಾಗಿ  ಪ್ರತ್ಯೇಕ ವೇದ ಶಾಖೆಯಾಯಿತು. ಅದು ಸಂಗೀತದ ಭಾಷೆಯಲ್ಲಿ ಭಗವಂತನನ್ನು ಸ್ತೋತ್ರ ಮಾಡುವ ವೇದಶಾಖೆ. 
ಸಂಗೀತದಲ್ಲಿ ಇಂದು ಅನೇಕ ಸಂಗತಿಗಳು ಮರೆತು ಹೋಗಿವೆ. ಹಿಂದೂಸ್ತಾನಿ ಸಂಗೀತದಲ್ಲಿ  ಆಲಾಪ ಮಾಡುವಾಗ ‘ನೋಂ-ನೋಂ’ ಎನ್ನುತ್ತಾರೆ. ಇದು ‘ನಮೋ ನಾರಾಯಣಾಯ’ ಎನ್ನುವುದರ ಸಂಕ್ಷೇಪಪದ(abbreviation). ಇದೇ ರೀತಿ ತಬಲಾ/ಮೃದಂಗ ಬಾರಿಸುವಾಗ ಅದಕ್ಕೆ ಅನುಕರಣೆ ಮಾಡುವ ಅನೇಕ ಧ್ವನಿಗಳಿವೆ. ಉದಾಹರಣೆಗೆ: ಧಿಮಿತ ಧಿಮಿತ ಧಿಮಿ, ಧಿಮಿಕಿಟ ಕಿಟತೊಂ, ತೋಂ ತೋಂ ತರಿಕಿಟ, ತರಿಕಿಟ ಕಿಟತೊಂ..ಇತ್ಯಾದಿ. ಆದರೆ ಈ ಧ್ವನಿಯ ಹಿಂದಿನ ಅರ್ಥ ಏನು ಎನ್ನುವುದು ಇಂದು ಖಚಿತವಾಗಿ ನಮಗೆ ಗೊತ್ತಿಲ್ಲ. ಇಲ್ಲಿ ತರಿಕಿಟ ಎನ್ನುವಲ್ಲಿ ಕರಿಕಿಟ ಅಥವಾ ಇನ್ನೇನೋ ಹೇಳುವಂತಿಲ್ಲ. ಏಕೆಂದರೆ ಈ ಎಲ್ಲಾ ಧ್ವನಿಯ ಹಿಂದೆ ಒಂದು ಅಪೂರ್ವವಾದ ಆಧ್ಯಾತ್ಮಿಕ ಅರ್ಥ ಚಿಂತನೆ ಅಡಗಿದೆ.  
ವಿಶ್ವದಲ್ಲಿ ವಿರಾಟ್ ಪುರುಷನಾಗಿ ತುಂಬಿರುವ ಭಗವಂತನೇ ಎಲ್ಲಾ ಶಬ್ದಗಳಿಗೂ ಕೊನೇಯ ಆಸರೆ. ಯಾವ ಶಬ್ದವೇ ಇರಲಿ, ಅದು ಅಂತತಃ ಭಗವಂತನ ನಾಮವೇ ಆಗಿರುತ್ತದೆ. ಪ್ರತಿಯೊಂದು ಶಬ್ದದ ಮೂಲತತ್ತ್ವ/ಸಾರ(essence) ಆ ಭಗವಂತ. ಉದಾಹರಣೆಗೆ ಆತ್ಮ. ಆತ್ಮ ಎನ್ನುವುದರ ಸ್ಥೂಲ ಅರ್ಥ ದೇಹ. ಆದರೆ ಇನ್ನೂ ಆಳಕ್ಕೆ ಹೋದರೆ ಆತ್ಮ ಎಂದರೆ ಮನಸ್ಸು, ಚಿತ್ತ, ಚೇತನ, ಇತ್ಯಾದಿ. ಆದರೆ ಎಲ್ಲಕ್ಕಿಂತ ಸೂಕ್ಷ್ಮವಾಗಿ ನೋಡಿದರೆ ಆತ್ಮ ಎಂದರೆ ಪರಮಾತ್ಮ. ಇದೇ ರೀತಿ ನಾವು ‘ಇವರು ಇಂತವರು’ ಎಂದು ಒಬ್ಬ ವ್ಯಕ್ತಿಯ ಶರೀರವನ್ನು ತೋರಿಸುತ್ತೇವೆ. ಆದರೆ ನಾವು ತೋರಿಸುವುದು ಕೇವಲ ಆ ವ್ಯಕ್ತಿಯ ಶರೀರವನ್ನಲ್ಲ; ಶರೀರದೊಳಗಿರುವ ಚೇತನ ಹಾಗೂ ಅಂತತಃ  ಚೇತನದೊಳಗಿರುವ ಬಿಂಬ ರೂಪಿ ಭಗವಂತನನ್ನು.  ಹೀಗೆ ಪ್ರತಿಯೊಂದು ಶಬ್ದ ಅಂತತಃ ಭಗವಂತನನ್ನೇ ಹೇಳುತ್ತದೆ. ಆದರೆ ಅದನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ನಮಗೆ ಬೇಕು. ಹೇಗೆ ಪ್ರಹ್ಲಾದನಿಗೆ ಕಂಬದೊಳಗೆ ಭಗವಂತನನ್ನು ಕಂಡನೋ ಹಾಗೇ ನಾವೂ ಕೂಡಾ ಪ್ರತೀ ಶಬ್ದ-ನಾದದಲ್ಲಿ ಭಗವಂತನನ್ನು ಕಾಣಬೇಕು.
ಎಲ್ಲಾ ನಾದಗಳೂ ಭಗವಂತನನ್ನು ಹೇಳುತ್ತವೆ ಎನ್ನುವುದು ಒಂದು ರೋಚಕವಾದ ಸಂಗತಿ. ವೇದದಲ್ಲಿ ಉದಾತ್ತ, ಅನುದಾತ್ತ, ಸ್ವರಿತ ಹಾಗೂ ಪ್ರಚಯ ಎನ್ನುವ ನಾಲ್ಕು  ಸ್ವರಗಳನ್ನು ಕಾಣುತ್ತೇವೆ(ಸಾಮವೇದದಲ್ಲಿ ಸಪ್ತ ಸ್ವರಗಳಿವೆ). ಈ ನಾಲ್ಕು ಸ್ವರಗಳಿಗೆ ಅದರದ್ದೇ ಆದ ವಿಶೇಷ ಅರ್ಥವಿದೆ. ಅನುದಾತ್ತ ಎಂದರೆ ಸ್ವರವನ್ನು ಕೆಳಕ್ಕೆ ಒತ್ತುಕೊಟ್ಟು ಹೇಳುವುದು. ಹಾಗಾಗಿ ಇದು ದಾರ್ಢ್ಯ(confirmation)ವನ್ನು ಹೇಳುತ್ತದೆ.[ ಉದಾಹರಣೆಗೆ ‘ಖಂಡಿತ’ ಎನ್ನುವ ಪದ. ಈ ಪದದಲ್ಲಿ  ‘ಖ’ ಅನುದಾತ್ತ ಮತ್ತು ಇದು ನಿಶ್ಚಿತತೆಯನ್ನು ಹೇಳುತ್ತದೆ]. ಉದಾತ್ತದಲ್ಲಿ ಮೇಲಕ್ಕೆ ಒತ್ತುಕೊಡಲಾಗುತ್ತದೆ. ಹಾಗಾಗಿ ಇದು ‘ಉಚ್ಚತೆ’ಯನ್ನು ಹೇಳುತ್ತದೆ. ಹೀಗೇ  ಸ್ವರಿತ ನೀಚತ್ವವನ್ನೂ ಹಾಗೂ ಪ್ರಚಯ ಯಥಾಸ್ಥಿತಿಯನ್ನೂ ಹೇಳುತ್ತದೆ.  ಇಂತಹ ಸ್ವರ ಪ್ರಕ್ರಿಯೆ ಎಲ್ಲಾ ಭಾಷೆಗಳಿಗೂ ಅನ್ವಯ. ಆದರೆ ಇದನ್ನು  ವೇದದಲ್ಲಿ  ಕಡ್ಡಾಯವಾಗಿ ಉಳಿಸಿಕೊಂಡಿದ್ದಾರೆ. ಉದಾಹರಣೆಗೆ ಋಗ್ವೇದದ ಮೊದಲ ಮಂತ್ರ  “ಅಗ್ನಿಮೀಳೇ ಪುರೋಹಿತಂ” ಎನ್ನುವಲ್ಲಿ ಅಗ+ನಿ=ಅಗ್ನಿ. ಅಂದರೆ ಸ್ವತಃ ಚಲಿಸಲಾಗದ ವಸ್ತುವಿಗೆ ಚಾಲನೆ ಕೊಡುವ ಶಕ್ತಿ.  ಇಲ್ಲಿ ‘ಅಗ’ ಎನ್ನುವಲ್ಲಿ ‘ಅ’ ಅನುದಾತ್ತವಾಗಿದ್ದು  ಅದು ‘ಸ್ವತಃ ಚಲಿಸಲಾಗದ್ದು’ ಎನ್ನುವುದನ್ನು ಧೃಡೀಕರಿಸುತ್ತದೆ. ಅಂದರೆ ‘ನಿಶ್ಚಿತವಾಗಿ ಎಂದೆಂದೂ ಸ್ವತಃ ಚಲಿಸಲಾಗದ್ದು’ ಎಂದರ್ಥ. ಇನ್ನು ಚಲನೆ ಕೊಡುವ ಶಕ್ತಿಯನ್ನು ಹೇಳುವ ‘ನಿ’ಯಲ್ಲಿ ಬರುವ ‘ಇ’ ಉದಾತ್ತ. ಇದು ಸ್ವತಃ ಚಲನೆ ಇಲ್ಲದ ವಸ್ತುವಿಗೆ ಚಾಲನೆ ಕೊಡುವ ಶಕ್ತಿಯ(ಭಗವಂತನ) ಉಚ್ಛತೆಯನ್ನು ಹೇಳುತ್ತದೆ. ಅಂದರೆ-“ಅದು(ಭಗವಂತ) ಬಹಳ ದೂಡ್ಡ(ಉಚ್ಛ) ಸಂಗತಿ ಹಾಗಾಗಿ ಅದು ಚಲಿಸಲಾಗದ ವಸ್ತುವಿಗೂ ಚಲನೆ ಕೊಟ್ಟಿತು” ಎನ್ನುವುದನ್ನು ಹೇಳುತ್ತದೆ. ಇನ್ನು  ಮೀಳೇ ಎನ್ನುವಲ್ಲಿ ಬಂದಿರುವ ಸ್ವರಿತ(‘ಈ’) ಹಾಗೂ ಪ್ರಚಯ(‘ಎ’) ಕ್ರಮವಾಗಿ ನೀಚತ್ವ ಮತ್ತು ಯಥಾಸ್ಥಿತಿಯನ್ನು ಹೇಳುತ್ತದೆ. “ಚಲನಶೀಲವಲ್ಲದ ಸಮಸ್ತ ಪ್ರಪಂಚಕ್ಕೆ ಉಚ್ಛನಾದ ನೀನು, ಈ ಪ್ರಪಂಚಕ್ಕೆ ಚಲನೆ ಕೊಟ್ಟೆ.  ನಿನ್ನನ್ನು ನಾನು ಸ್ತೋತ್ರ ಮಾಡುತ್ತಿದ್ದೇನೆ. ಏಕೆಂದರೆ ನಿನ್ನ ಮುಂದೆ ನಾನು ಅತ್ಯಂತ ಸಣ್ಣವ(ನೀಚ). ನೀನು ಉಚ್ಛ ಹಾಗೂ ನಿನ್ನ ಮುಂದೆ ನಾನು ಸಣ್ಣವಸ್ತು. ಇದು ಯಥಾಸ್ಥಿತಿ ಮತ್ತು ಇದೆಂದೂ ಬದಲಾಗುವುದಿಲ್ಲ”. ಇದು ನಾಲ್ಕು ಅಕ್ಷರಗಳಲ್ಲಿ ನಮಗೆ ವೇದ ಸ್ವರದ ಮೂಲಕ ತಿಳಿಸುವ ಅರ್ಥ. ನಾದದಿಂದಲೇ ಮಂತ್ರಕ್ಕೆ ವಿಶೇಷ ಅರ್ಥ ಬರುವುದರಿಂದ ಸರಿಯಾದ ಸ್ವರವನ್ನು ಬಳಸದೇ ವೇದ ಮಂತ್ರ ಪಠಿಸುವಂತಿಲ್ಲ. ಹೀಗೆ ಇಡೀ ವೇದ ಒಂದು ವಿಶೇಷ ಅರ್ಥವನ್ನು ನಾದದ ಮುಖೇನ ನಮಗೆ ನೀಡುತ್ತದೆ.
ಸಂಗೀತಮಯವಾಗಿರುವ ಸಾಮವೇದವನ್ನು ಪಠಿಸುವವರು ನಡುವೆ ಅನೇಕ ಸ್ತೋಭಾಕ್ಷರಗಳನ್ನು ಬಳಸುವುದನ್ನು ಕಾಣುತ್ತೇವೆ. (ಉದಾಹರಣೆಗೆ ಹಾ..ವು...ಹಾ..ವು.) ಈ ಸ್ತೋಭಾಕ್ಷರದಲ್ಲಿ ಬರುವ ‘ಹ’ಕಾರ ವಿಸ್ಮಯ-ಆನಂದ-ವಿಭ್ರಮವನ್ನು ಹೇಳುತ್ತದೆ. ಭಗವಂತ ಅದೆಷ್ಟು ಅಚ್ಚರಿ, ಅದೆಂತಹ ಆನಂದ, ಎಂಥಾ ವಿಸ್ಮಯ.. ಇತ್ಯಾದಿ ಉದ್ಗಾರ ನಾದದಲ್ಲೇ ಬಂದು ಬಿಡುತ್ತದೆ.
ಪ್ರಕೃತಿಯಲ್ಲಿನ ಎಲ್ಲಾ ನಾದದಲ್ಲಿ ಭಗವಂತನನ್ನು ಕಾಣುವುದು ಹೇಗೆ ಎನ್ನುವುದನ್ನು ಎನ್ನುವುದನ್ನು ವಿವರಿಸಲು  ಆಚಾರ್ಯ ಮಧ್ವರು ಕೊಟ್ಟ ಒಂದು ಉದಾಹರಣೆಯನ್ನು ನೋಡಿದರೆ,   ನಮಗೆ ನಾದದಲ್ಲಿ ಭಗವಂತನನ್ನು ಹೇಗೆ ಕಾಣಬಹುದು ಎನ್ನುವುದು ಕಿಂಚಿತ್ ಅರ್ಥವಾಗಬಹುದು. ನಮಗೆ ತಿಳಿದಂತೆ ಆಗಾಗ ನಮ್ಮ ಮನೆಗಳಲ್ಲಿ ಹಲ್ಲಿ ಲೊಚಗುಟ್ಟುತ್ತಿರುತ್ತದೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ನಾವೂ ಕೂಡಾ ನಮಗೆ ಬಹಳ ಆಶ್ಚರ್ಯವಾದಾಗ ‘ಅದ್ಭುತ’ ಎನ್ನುವುದನ್ನು ವ್ಯಕ್ತಪಡಿಸಲು ನಮ್ಮ ಬಾಯಿಯಿಂದ  ಹಲ್ಲಿಯಂತೆ ಶಬ್ದ ಮಾಡುತ್ತೇವೆ. ಈ ರೀತಿ ಸಂಬಂಧಕಲ್ಪಿಸಿ ಯೋಚಿಸಿದರೆ:  “ಭಗವಂತ ಅದ್ಭುತ” ಎನ್ನುವುದು ಹಲ್ಲಿಯ ನಾದದ ಅರ್ಥ! ಹೀಗೆ ಭಗವಂತನನ್ನು ಹೇಳದೇ ಇರುವ ಒಂದು ಶಬ್ದ, ಒಂದು ನಾದ ಈ ಪ್ರಪಂಚದಲ್ಲಿಲ್ಲ.

No comments:

Post a Comment