Tuesday, September 2, 2014

Shrimad BhAgavata in Kannada -Skandha-02-Ch-05(10)

ವರ್ಷಪೂಗಸಹಸ್ರಾಂತೇ ತದಂಡಮುದಕೇಶಯಮ್
ಕಾಲಕರ್ಮಸ್ವಭಾವಸ್ಥೋ(S)ಜೀವೋ(S)ಜೀವಮಜೀಜನತ್  ೩೪

ಸ ಏಷ ಪುರುಷಸ್ತಸ್ಮಾದಂಡಂ ನಿರ್ಭಿದ್ಯ ನಿರ್ಗತಃ
ಸಹಸ್ರೋರ್ವಂಘ್ರಿಬಾಹ್ವಕ್ಷಃ ಸಹಸ್ರಾನನಶೀರ್ಷವಾನ್  ೩೫

ಭಗವಂತನಿಗೆ ಕ್ಷಣಮಾತ್ರದಲ್ಲಿ ಎಲ್ಲವನ್ನೂ ಸೃಷ್ಟಿ ಮಾಡಬಲ್ಲ ಶಕ್ತಿ ಇದ್ದರೂ ಕೂಡಾ ಆತ ತನ್ನದೇ ಆದ ನಿಯಮಕ್ಕನುಗುಣವಾಗಿ ಎಲ್ಲವನ್ನೂ ಮಾಡುತ್ತಾನೆ. ಬ್ರಹ್ಮಾಂಡ ಸೃಷ್ಟಿಯ ನಂತರ ಜೀವಜಾತದ ಸೃಷ್ಟಿಯಾಗಲು ಮತ್ತೆ ಸಾವಿರಾರು ವರ್ಷಗಳು ಹಿಡಿದಿವೆ. ಬ್ರಹ್ಮಾಂಡ ಎಂದರೆ ಅದು ಮೊಟ್ಟೆ. ಆ ಮೊಟ್ಟೆ ಸಾವಿರಾರು ವರ್ಷಗಳ ಕಾಲ ಸೂಕ್ಷ್ಮ ಪ್ರಕೃತಿ ಎನ್ನುವ ಸೂಕ್ಷ್ಮಾಣುಗಳ ಕಡಲಲ್ಲಿ  ಮಲಗಿತ್ತು. ಎಲ್ಲಾ ಜೀವಗಳೂ ತಮ್ಮ ಅಸ್ತಿತ್ವವದ ಅರಿವೇ ಇಲ್ಲದೇ ಇರುವಾಗ,  ಸಕಲ ಜೀವ ನಿಯಾಮಕನಾದ ಭಗವಂತ(ಆಜೀವ) ತನ್ನನ್ನೇ ತಾನು ಸೃಷ್ಟಿ ಮಾಡಿಕೊಂಡ! ಅಂದರೆ ತನ್ನ ಒಂದು ರೂಪದಿಂದ ಅಭಿವ್ಯಕ್ತನಾದ. ಇದು ಬ್ರಹ್ಮಾಂಡದೊಳಗೆ ತುಂಬಿರುವ ಭಗವಂತನ ಪುರುಷ ರೂಪ. ಹೀಗೆ ಬ್ರಹ್ಮಾಂಡವೆನ್ನುವ ಮೊಟ್ಟೆಯಿಂದ ಭಗವಂತನ ರೂಪ ಆವಿರ್ಭಾವವಾಯಿತು. ಇಷ್ಟೇ ಅಲ್ಲದೆ ಮೊಟ್ಟೆಯೊಳಗೆ ಚತುರ್ಮುಖನೆನ್ನುವ ಜೀವವನ್ನು ಭಗವಂತ ಸೃಷ್ಟಿ ಮಾಡಿದ.[ನಾಭಿ ಕಮಲದಿಂದ ಚತುರ್ಮುಖನ ಸೃಷ್ಟಿ]. ಈ ರೀತಿ ಮೊಟ್ಟೆಯೊಳಗೆಲ್ಲಾ ತುಂಬಿದ ಭಗವಂತ ಮೊಟ್ಟೆ ಒಡೆದು ಹೊರ ಬಂದ.
ಮೊಟ್ಟೆಯೊಡೆದು ಹೊರಬಂದ ಭಗವಂತನ ರೂಪವನ್ನು ಕಂಡವನು ಕೇವಲ ಚತುರ್ಮುಖ ಮಾತ್ರ.  ಹೀಗೆ ಹೊರಬಂದ ಭಗವಂತನ ರೂಪವನ್ನು ವಿವರಿಸುತ್ತಾ ಚತುರ್ಮುಖ ಹೇಳುತ್ತಾನೆ “ ಸಹಸ್ರಾರು ಪಾದ, ಸಹಸ್ರಾರು ತೊಡೆ, ಸಹಸ್ರಾರು ಕೈ-ಕಣ್ಣುಗಳುಳ್ಳ, ಸಾವಿರಾರು ಮುಖದ ಭಗವಂತ ಬ್ರಹ್ಮಾಂಡದಲ್ಲೆಲ್ಲಾ ವ್ಯಾಪಿಸಿ ನಿಂತ” ಎಂದು. ಭಗವಂತನೊಂದಿಗೆ ಮೊಟ್ಟೆ ಒಡೆದು ಹೊರಬಂದ ಇನ್ನೊಂದು ಜೀವ ಚತುರ್ಮುಖ. ಹೀಗೆ ಬ್ರಹ್ಮಾಂಡ ವಿಕಸನವಾಯಿತು. ದಳದಳವಾಗಿ ಅರಳಿ, ಒಂದೊಂದು ದಳವೂ ಒಂದೊಂದು ಲೋಕವಾಗಿ, ಚತುರ್ದಶ ಭುವನ ಸೃಷ್ಟಿಯಾಯಿತು.

ಯಸ್ಯೇಹಾವಯವೈರ್ಲೋಕಾನ್ ಕಲ್ಪಯಂತಿ ಮನೀಷಿಣಃ
ಊರ್ವಾದಿಭಿರಧಃ ಸಪ್ತ ಸಪ್ತೋರ್ಧ್ವಂ ಜಘನಾದಿಭಿಃ ೩೬

ಮೊಟ್ಟೆಯೊಡೆದು ಬಂದ ಭಗವಂತನ ಪುರುಷರೂಪ ಇಡೀ ಬ್ರಹ್ಮಾಂಡದೊಳಗೆಲ್ಲಾ ತುಂಬಿತು.  ಹೀಗೆ ತುಂಬಿದ ಭಗವಂತನ ಒಂದೊಂದು ಅವಯವಗಳಿಂದ ಒಂದೊಂದು ಲೋಕ ಸೃಷ್ಟಿಯಾಯಿತು. ಇಲ್ಲಿ “ಕಲ್ಪಯಂತಿ ಮನೀಷಿಣಃ” ಎಂದಿದ್ದಾರೆ. ಅಂದರೆ ಮನನಮಾಡಿ ಸತ್ಯವನ್ನು ಅರಿತ ಜ್ಞಾನಿಗಳು ಇದನ್ನು ಕಲ್ಪಿಸುತ್ತಾರೆ ಎಂದರ್ಥ.  ಇಲ್ಲಿ ಬಂದಿರುವ  ‘ಕಲ್ಪನೆ’ ಎನ್ನುವ ಪದಕ್ಕೆ ಕನ್ನಡದಲ್ಲಿ ಕೇವಲ ಬುದ್ಧಿ ಬಲದಿಂದ ಕಂಡುಕೊಂಡಿದ್ದೇ ಹೊರತು ನಿಜವಲ್ಲ ಎನ್ನುವ ಅರ್ಥವಿದೆ. ಆದರೆ ಸಂಸ್ಕೃತದಲ್ಲಿ ‘ಕಲ್ಪನೆ’ ಎನ್ನುವುದಕ್ಕೆ ಎರಡು ಅರ್ಥಗಳಿವೆ. ೧. ಇದ್ದದ್ದನ್ನು ಭಾವಿಸುವುದು, ೨. ಇಲ್ಲದ್ದನ್ನು ಭಾವಿಸುವುದು.  ಹೀಗಾಗಿ ಮೇಲಿನ ಶ್ಲೋಕದಲ್ಲಿ ‘ಜ್ಞಾನಿಗಳು  ಕಲ್ಪಿಸುತ್ತಾರೆ’ ಎಂದರೆ: ಅಂತರಂಗದ ಸಾಧನೆಯಿಂದ ಸತ್ಯವನ್ನು ಕಂಡುಕೊಂಡ ಜ್ಞಾನಿಗಳು ಅದನ್ನು ಸಮರ್ಥನೆ ಮಾಡುತ್ತಾರೆ ಎಂದರ್ಥ. ಹೀಗೆ ಭಗವಂತನ ಅವಯವಗಳಿಂದ ಹದಿನಾಲ್ಕು ಲೋಕಗಳಾಗಿ ಈ ಬ್ರಹ್ಮಾಂಡ ನಿರ್ಮಾಣವಾಯಿತು.
ಈ ರೀತಿ ಸೃಷ್ಟಿಯಾದ ಪ್ರಪಂಚದಲ್ಲಿ ಇನ್ನೂ ಜೀವಜಾತಗಳ ಸೃಷ್ಟಿಯಾಗಬೇಕಷ್ಟೇ. ಆದರೆ ಭಾಗವತದ ಈ ಅಧ್ಯಾಯ ಜೀವಜಾತದ ಸೃಷ್ಟಿಯ ವಿವರವನ್ನು ಇಲ್ಲಿ ನೀಡುವುದಿಲ್ಲ. ಜೀವಜಾತದ ಸೃಷ್ಟಿಯ ವಿವರವನ್ನು ಮೂರನೇ ಸ್ಕಂಧದಲ್ಲಿ ಬಹಳ ವಿಸ್ತಾರವಾಗಿ ಹೇಳಿರುವುದನ್ನು ನಾವು ಮುಂದೆ ನೋಡಬಹುದು. ಜಲಚರಗಳು, ವನಸ್ಪತಿಗಳು, ಪಕ್ಷಿಗಳು, ಪ್ರಾಣಿಗಳು ಎಲ್ಲವೂ ಸೃಷ್ಟಿಯಾದ ಮೇಲೆ ಈ ಪ್ರಪಂಚದಲ್ಲಿ ಮನುಷ್ಯನ ಸೃಷ್ಟಿಯಾಯಿತು. ಹೀಗೆ ಸೃಷ್ಟಿಯಾದ ಪ್ರಪಂಚದಲ್ಲಿ ನಾಲ್ಕು ವರ್ಣಗಳ ಸೃಷ್ಟಿಯ ವಿವರಣೆಯನ್ನು ಮುಂದಿನ ಶ್ಲೋಕ ವಿವರಿಸುತ್ತದೆ.
ಭಗವಂತನ ಮುಖ-ತೋಳು-ತೊಡೆ ಮತ್ತು ಪಾದದಿಂದ ಚಾತುರ್ವರ್ಣ್ಯದ ಸೃಷ್ಟಿ

ಪುರುಷಸ್ಯ ಮುಖಂ ಬ್ರಹ್ಮ ಕ್ಷತ್ರಮೇತಸ್ಯ ಬಾಹವಃ
ಊರ್ವೋರ್ವೈಶ್ಯೋ ಭಗವತಃ ಪದ್ಭ್ಯಾಂ ಶೂದ್ರೋ ವ್ಯಜಾಯತ  ೩೭

ಪುರುಷಸೂಕ್ತದಲ್ಲಿ ಹೇಳಿರುವಂತೆ: ಬ್ರಾಹ್ಮಣೋsಸ್ಯ ಮುಖಮಾಸೀದ್ಬಾಹೂ ರಾಜನ್ಯಃ ಕೃತಃ|  ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ  ಇದೇ ಮಾತನ್ನು ಮೇಲಿನ ಶ್ಲೋಕ ವಿವರಿಸುತ್ತದೆ. ನಾಲ್ಕು ವರ್ಣಗಳು ಎಲ್ಲಾ ಮನುಷ್ಯರಿಗೆ ಅಥವಾ ಎಲ್ಲಾ ಜೀವಜಾತಗಳಿಗೆ ಸಂಬಂಧಿಸಿದ ವಿಚಾರವಲ್ಲ. ಇದು ಸಾಮಾಜಿಕವಾಗಿರುವ ಜಾತಿ ಪದ್ಧತಿಗೆ ಸಂಬಂಧಿಸಿದ ವಿಚಾರವೂ ಅಲ್ಲ. ಅದು ಕೇವಲ ಮೋಕ್ಷ ಯೋಗ್ಯ ಚೇತನಕ್ಕೆ  ಸಂಬಂಧಿಸಿರುವ ವಿಚಾರ.
ಭಗವಂತ ತನ್ನ ಮುಖದಿಂದ ಬ್ರಾಹ್ಮಣ್ಯ ಸ್ವಭಾವದ ಜೀವರನ್ನು ಸೃಷ್ಟಿ ಮಾಡಿದ. ತನ್ನ ತೋಳುಗಳಿಂದ ಕ್ಷತ್ರ ಸ್ವಭಾವದ ಜೀವರನ್ನು, ತೊಡೆಗಳಿಂದ ವೈಶ್ಯ ಸ್ವಭಾವ ಹಾಗೂ ಪಾದಗಳಿಂದ ಶೂದ್ರ ಸ್ವಭಾವದ ಜೀವರನ್ನು ಸೃಷ್ಟಿಸಿದ. ಇಲ್ಲಿ ಭಗವಂತ ಆಯಾ ಸ್ವಭಾವವನ್ನು ಅದಕ್ಕೆ ಸಂಬಂಧಿಸಿದ ಆಯಾ ಜಾಗದಿಂದ ಸೃಷ್ಟಿ ಮಾಡಿರುವುದನ್ನು ನಾವು ಗಮನಿಸಬೇಕು. ಬ್ರಾಹ್ಮಣ್ಯ ಎಂದರೆ ಜ್ಞಾನ. ಜ್ಞಾನಕ್ಕೆ ಸಂಬಂಧಿಸಿದ ಕಣ್ಣು-ಕಿವಿ-ಮನಸ್ಸು ಮತ್ತು ಮಾತು ಇರುವ ಜಾಗ ಶಿರಸ್ಸು. ಹಾಗಾಗಿ ಭಗವಂತನ ಶಿರಸ್ಸಿನಿಂದ ಬ್ರಾಹ್ಮಣ್ಯ ಸ್ವಭಾವದ ಸೃಷ್ಟಿಯಾಯಿತು. ಅದೇ ರೀತಿ ಕ್ಷತ್ರಿಯರ ಮೂಲಭೂತ ಗುಣ ರಕ್ಷಣೆ. ಅದಕ್ಕೆ ಪ್ರಧಾನವಾಗಿ ಬೇಕಾಗಿರುವುದು ತೋಳ್ಬಲ. ಹಾಗಾಗಿ ಕ್ಷತ್ರ ಸ್ವಭಾವದವರ ಸೃಷ್ಟಿ ಭಗವಂತನ ತೋಳಿನಿಂದಾಯಿತು. ಇನ್ನು ವೈಶ್ಯರ ಪ್ರಧಾನ ಸ್ವಭಾವ ಉತ್ಪಾದನೆ ಮತ್ತು ವ್ಯಾಪಾರ. ಇದಕ್ಕೆ ಪ್ರಧಾನವಾಗಿ ಬೇಕಾಗಿರುವುದು ಸೊಂಟ ಅಥವಾ ತೊಡೆ. ಹೀಗಾಗಿ ವೈಶ್ಯ ಸ್ವಭಾವದ ಸೃಷ್ಟಿ ಭಗವಂತನ ತೊಡೆಯಿಂದಾಯಿತು. ಕೊನೆಯದಾಗಿ ಎಲ್ಲವುದರ ಪಂಚಾಂಗ ಸೇವಾ ಮನೋವೃತ್ತಿ. ದೇಹದಲ್ಲಿ ಎಲ್ಲವನ್ನೂ ಹೊತ್ತುಕೊಂಡಿರುವ ಭಾಗ ಕಾಲು.  ಹೀಗಾಗಿ ಇನ್ನೊಬ್ಬರ ಕಷ್ಟಕ್ಕೆ ಕರಗುವ ಮತ್ತು ಸೇವಾ ಮನೋವೃತ್ತಿ ಇರುವ ಶೂದ್ರ ವರ್ಣದ ಸೃಷ್ಟಿ ಭಗವಂತನ ಪಾದದಿಂದಾಯಿತು.
[ಮೇಲಿನ ಶ್ಲೋಕದಲ್ಲಿ ಮುಖಬಾಹುಗಳಿಂದ ಹುಟ್ಟಿದ್ದನ್ನು ಮುಖವೇ ಬ್ರಾಹ್ಮಣ ಮತ್ತು ಬಾಹುವೇ ಕ್ಷತ್ರಿಯ ಎಂದು ಹೇಳಲಾಗಿದೆ. ಸಪ್ತಸು ಪ್ರಥಮಾ ಎನ್ನುವ ಸೂತ್ರದಂತೆ ಇದನ್ನು ಮುಖದಿಂದ ಬ್ರಾಹ್ಮಣ ಹಾಗೂ ಬಾಹುವಿನಿಂದ ಕ್ಷತ್ರಿಯ ಎಂದು ಅರ್ಥೈಸಬೇಕು. ಇದೇ ರೀತಿ ಜೀವನು ಬ್ರಹ್ಮ ಎಂದು ಹೇಳಿದಲ್ಲೆಲ್ಲಾ ಜೀವ ಬ್ರಹ್ಮನಿಂದ ಹುಟ್ಟಿದ್ದಾನೆ ಎಂದು ಅರ್ಥೈಸಬೇಕು. ಇದನ್ನು ಬ್ರಹ್ಮ ಪುರಾಣದಲ್ಲಿ ಹೀಗೆ ಹೇಳಿದ್ದಾರೆ: ಬ್ರಾಹ್ಮಣೋ ಮುಖಮಿತ್ಯೇವ ಮುಖಾಜ್ಜಾತತ್ವಹೇತುತಃ|  ಯಥಾsವದಚ್ಛ್ರುತೌ ತದ್ವಜ್ಜೀವೋ ಬ್ರಹ್ಮೇತಿ ವಾಗ್ ಭವೇತ್|  ಇತಿ ಬ್ರಾಹ್ಮೇ].
ಇಲ್ಲಿ ನಾಲ್ಕು ವರ್ಣದ ಸೃಷ್ಟಿ ಎಂದರೆ ನಾಲ್ಕು ವರ್ಣದ ಅಭಿಮಾನಿ ದೇವತೆಗಳ ಸೃಷ್ಟಿ ಕೂಡಾ ಹೌದು. ಮುಖದಿಂದ ಬ್ರಾಹ್ಮಣ ವರ್ಣದ ಸೃಷ್ಟಿಯಾಯಿತು ಎಂದರೆ ಬ್ರಾಹ್ಮಣ ವರ್ಣವನ್ನು ನಿಯಂತ್ರಿಸತಕ್ಕಂತಹ  ದೇವತಾ ಅಭಿವ್ಯಕ್ತಿಯಾಯಿತು ಎಂದರ್ಥ. ಚತುರ್ಮುಖ ಬ್ರಹ್ಮ ಬ್ರಾಹ್ಮಣವರ್ಣದ ಮುಖ್ಯ ದೇವತೆಯಾದರೆ ಬ್ರಹಸ್ಪತಿ ಮತ್ತು ಅಗ್ನಿ ಕೂಡಾ ಬ್ರಾಹ್ಮಣ ವರ್ಣದ ಅಭಿಮಾನಿ ದೇವತೆಯರು. ಇನ್ನು ಕ್ಷತ್ರಿಯ ವರ್ಣದ ಮುಖ್ಯ ಅಭಿಮಾನಿ ದೇವತೆ ಮುಖ್ಯಪ್ರಾಣ  ಅಥವಾ ವಾಯುದೇವರು. ಅವರ ಅನಂತರ ಅನೇಕ ದೇವತೆಗಳು ಕ್ಷತ್ರಿಯ ವರ್ಣದ ಅಭಿಮಾನಿ ದೇವತೆಗಳಾಗಿದ್ದಾರೆ. ಗರುಡ-ಶೇಷ-ರುದ್ರರು, ಇಂದ್ರ-ಕಾಮರು, ಅನಿರುದ್ಧ, ಸ್ವಾಯಂಭುವ ಮನು, ದಕ್ಷ ಪ್ರಜಾಪತಿ,  ವೈವಸ್ವತ ಮನು, ಯಮ, ಚಂದ್ರ, ಸೂರ್ಯ, ವರುಣ, ಇವರೆಲ್ಲರೂ ಕ್ಷತ್ರಿಯ ವರ್ಣದ ಅಭಿಮಾನಿ ದೇವತೆಗಳು. ಇದೇ ರೀತಿ ವೈಶ್ಯ ವರ್ಣದ ಮುಖ್ಯ ಅಭಿಮಾನಿ ದೇವತೆ ಅಹಂಪ್ರಾಣ. ನಂತರ ೪೯ ಮಂದಿ ಮರುತ್ತುಗಳು, ೭ ಮಂದಿ ವಸುಗಳು(ಅಷ್ಟ ವಸುಗಳಲ್ಲಿ ಅಗ್ನಿಯನ್ನು ಬಿಟ್ಟು ಇತರ ಏಳು ಮಂದಿ), ಹತ್ತು ಮಂದಿ ರುದ್ರರು(ಏಕಾದಶ ರುದ್ರರಲ್ಲಿ ಪ್ರಧಾನ ರುದ್ರನನ್ನು ಬಿಟ್ಟು ಇತರ ಹತ್ತು ಮಂದಿ), ಎಂಟು ಮಂದಿ ಆದಿತ್ಯರು(ದ್ವಾದಶಾದಿತ್ಯರಲ್ಲಿ ಇಂದ್ರ, ಸೂರ್ಯ, ವರುಣ ಮತ್ತು ವಿಷ್ಣುವನ್ನು ಬಿಟ್ಟು ಇತರ ಎಂಟು ಮಂದಿ), ಇವರೆಲ್ಲರೂ ವೈಶ್ಯ ವರ್ಣದ ಅಭಿಮಾನಿ ದೇವತೆಗಳು. ಇದೇ ರೀತಿ ಶೂದ್ರ ವರ್ಣದ ಅಭಿಮಾನಿ ದೇವತೆಗಳು: ನಿರ್ಋತಿ, ಅಶ್ವಿನಿಗಳು, ಪ್ರಥ್ವೀ, ಶನಿ, ಕಾಲಾಭಿಮಾನಿ ದೇವತೆಗಳು ಮತ್ತು ಮೃತ್ಯು ದೇವತೆಗಳು. ಹೀಗೆ ವರ್ಣ ಸೃಷ್ಟಿ ಎನ್ನುವುದರ ಮೂಲಭೂತ ಅರ್ಥ ಅಭಿಮಾನಿ ದೇವತೆಗಳ ಸೃಷ್ಟಿ ಎನ್ನುವುದು ಇನ್ನೊಂದು ಮುಖ. ಈ ಅರ್ಥ ವಿವರಣೆಯನ್ನು ನಾವು ಉಪನಿಷತ್ತುಗಳಲ್ಲಿ ಕಾಣಬಹುದು.

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ದ್ವಿತೀಯಸ್ಕಂಧೇ ಪಂಚಮೋSಧ್ಯಾಯಃ
ಭಾಗವತ ಮಹಾಪುರಾಣದ ಎರಡನೇ  ಸ್ಕಂಧದ ಐದನೇ ಅಧ್ಯಾಯ ಮುಗಿಯಿತು

*********

No comments:

Post a Comment