Monday, August 10, 2015

Shrimad BhAgavata in Kannada -Skandha-02-Ch-07(20)

೧೭. ಚಕ್ರವರ್ತಿಗಳೊಳಗೆ ಚಕ್ರವರ್ತಿಯಾಗಿ ನಿಂತ ರಾಜರಾಜೇಶ್ವರ ರೂಪ

ಚಕ್ರಂ ಚ ದಿಕ್ಷ್ವವಿಹತಂ ದಶಸು ಸ್ವತೇಜೋ ಮನ್ವಂತರೇಷು ಮನುವಂಶಧರೋ ಬಿಭರ್ತಿ
ದುಷ್ಟೇಷು ರಾಜಸು ದಮಂ ವಿದಧತ್ ಸ್ವಕೀರ್ತಿಂ ಸತ್ಯೇ ನಿವಿಷ್ಟ ಉಶತೀಂ ಪ್ರಥಯಂಶ್ಚರಿತ್ರೈಃ ೨೦

ಭಗವಂತನ ಇನ್ನೊಂದು ವಿಶಿಷ್ಟ ಅವತಾರದ ವಿವರಣೆಯನ್ನು ನಾವು ಈ ಶ್ಲೋಕದಲ್ಲಿ ಕಾಣುತ್ತೇವೆ. ಇಲ್ಲಿಯೂ ಕೂಡಾ ಚತುರ್ಮುಖ ಈ ರೂಪದ ಹೆಸರನ್ನು ಹೇಳಿಲ್ಲವಾದುದರಿಂದ ಮೇಲ್ನೋಟಕ್ಕೆ ಇದು ಯಾವ ರೂಪ ಎನ್ನುವುದು ತಿಳಿಯುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುತ್ತಾ  ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಪ್ರಮಾಣ ಸಹಿತ ಇದು ಭಗವಂತನ ರಾಜರಾಜೇಶ್ವರ ರೂಪ ಎಂದು ವಿವರಿಸುವುದನ್ನು ನಾವು ಕಾಣುತ್ತೇವೆ.  ಮನ್ವನ್ತರೇಷು ಭಗವಾನ್ ಚಕ್ರವರ್ತಿಷು ಸಂಸ್ಥಿತಃ ಚತುರ್ಭುಜೋ ಜುಗೋಪೈತದ್ದುಷ್ಟರಾಜನ್ಯನಾಶಕಃ ರಾಜರಾಜೇಶ್ವರೇತ್ಯಾಹುರ್ಮುನಯಶ್ಚಕ್ರವರ್ತಿನಾಮ್ ವೀರ್ಯದಂ ಪರಮಾತ್ಮಾನಂ ಶಂಖಚಕ್ರಗಧಾಧರಮ್   ‘ಇತಿ ಸತ್ಯಸಂಹಿತಾಯಾಮ್’  

ನಾವು ಮನ್ವಂತರ ಪರಂಪರೆಯಲ್ಲಿ  ಇಕ್ಷ್ವಾಕು, ಪ್ರಿಯವ್ರತ, ಉತ್ತಾನಪಾದ ಇತ್ಯಾದಿ  ಅನೇಕ ಚಕ್ರವರ್ತಿಗಳನ್ನು ಕಾಣುತ್ತೇವೆ. ಇವರು ಇಡೀ ಭೂಮಂಡಲದ ನಿಯಂತ್ರಣ ಸಾಧಿಸಿ, ತಡೆಯಿಲ್ಲದ ಆದೇಶ ಹಾಗೂ ಸತ್ಯ-ಧರ್ಮದಿಂದ ದೇಶವನ್ನಾಳಿದರು.  ಇಲ್ಲಿ ಚತುರ್ಮುಖ ಹೇಳುತ್ತಾನೆ: “ಶಂಖ-ಚಕ್ರ-ಗದಾಧಾರಿಯಾದ ಅಭಯಪ್ರದ ಶ್ರೀಹರಿ  ಈ ಎಲ್ಲಾ ರಾಜರುಗಳ ತೇಜಸ್ಸಿಗೆ ಕಾರಣನಾಗಿ ಅವರೊಳಗೆ ರಾಜರಾಜೇಶ್ವರ ರೂಪದಲ್ಲಿ ನಿಂತ” ಎಂದು. ಈ ರೀತಿ ನೆಲೆನಿಂತ ಭಗವಂತ ದುಷ್ಟ ಸಮಾಜಕಂಟಕರನ್ನು ಧಮನ  ಮಾಡಿ, ನ್ಯಾಯ-ನೀತಿ-ಧರ್ಮ ಸ್ಥಾಪನೆ ಮಾಡಿದ. ಹೀಗೆ ಚಕ್ರವರ್ತಿಗಳ ಒಳಗಿದ್ದು ಎಲ್ಲರೂ ಬಯಸುವ ತನ್ನ ಅನಂತ ಮಹಿಮೆಯನ್ನು ತನ್ನ ರಾಜರಾಜೇಶ್ವರ ರೂಪದಿಂದ ತೋರಿದ ಭಗವಂತ.  

No comments:

Post a Comment