Sunday, October 11, 2015

Shrimad BhAgavata in Kannada -Skandha-02-Ch-08(01)

http://bhagavatainkannada.blogspot.in/

ಅಷ್ಟಮೋSಧ್ಯಾಯಃ


ನಾಲ್ಕನೇ ಅಧ್ಯಾಯದಲ್ಲಿ ಈಗಾಗಲೇ ನೋಡಿದಂತೆ ಪರೀಕ್ಷಿತರಾಜ ಶುಕಾಚಾರ್ಯರಲ್ಲಿ “ಸೃಷ್ಟಿ ವಿನ್ಯಾಸದ ಬಗೆ  ಮತ್ತು ಸೃಷ್ಟಿಯ ಉದ್ದೇಶ ಏನು” ಎನ್ನುವ ಪ್ರಶ್ನೆ ಮಾಡಿದ್ದ. ಪರೀಕ್ಷಿತನ  ಪ್ರಶ್ನೆಗೆ ಚತುರ್ಮುಖ-ನಾರದ ಸಂವಾದ ರೂಪದಲ್ಲಿ ಉತ್ತರಿಸಿದ ಶುಕಾಚಾರ್ಯರು, ಸೃಷ್ಟಿಯ ಸಂಕ್ಷಿಪ್ತ ವಿವರಣೆಯ ಜೊತೆಗೆ ಭಗವಂತನ ಅವತಾರಗಳ ಸಂಕ್ಷಿಪ್ತ ಚಿತ್ರಣವನ್ನೂ  ನೀಡಿದರು. ಇಲ್ಲಿ ಈ ಅಧ್ಯಾಯ ಮತ್ತೆ ಪರೀಕ್ಷಿತನ  ಪ್ರಶ್ನೆಯೊಂದಿಗೆ ಪ್ರಾರಂಭವಾಗುತ್ತದೆ.
ಪರೀಕ್ಷಿತ ಕೇಳಿ ತಿಳಿಯಬೇಕಾಗಿದ್ದ ವಿಷಯಗಳು ಅನೇಕವಾಗಿದ್ದರೂ ಕೂಡಾ, ಆತನಲ್ಲಿದ್ದ ಸಮಯ ಕೇವಲ ಏಳು ದಿನಗಳು ಮಾತ್ರ. ಹೀಗಾಗಿ ಭಗವಂತನ ಅವತಾರಗಳ ಸಂಕ್ಷಿಪ್ತ ವಿವರಣೆಯ ನಂತರ ಆತ ಮತ್ತೆ ಪ್ರಶ್ನೆ ಮಾಡುತ್ತಾನೆ.  ಆತನ ಈ ಪ್ರಶ್ನೆಗೆ ಉತ್ತರ ರೂಪವಾಗಿ ಶುಕಾಚಾರ್ಯರು ಭಾಗವತ ಪುರಾಣವನ್ನು ಬಿತ್ತರ ಮಾಡುತ್ತಾರೆ. ಹೀಗಾಗಿ ಈವರೆಗೆ ನಾವು ನೋಡಿರುವ ವಿಷಯ ಕೇವಲ ಹಿನ್ನೆಲೆಯಾಗಿದ್ದು, ನಿಜವಾದ ಭಾಗವತ ಪರೀಕ್ಷಿತ ರಾಜನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಮುಂದಿನ ಅಧ್ಯಾಯದಿಂದ ಆರಂಭವಾಗಲಿದೆ. ಬನ್ನಿ, ಇಂಥಹ ಅಪೂರ್ವವಾದ ಭಗವಂತನ ಕಥೆಯ ಬಿತ್ತರಕ್ಕೆ ಕಾರಣವಾದ ಪರೀಕ್ಷಿತನ ಪ್ರಶ್ನೆಗಳೇನು ಎನ್ನುವುದನ್ನು  ಈ ಅಧ್ಯಾಯದಲ್ಲಿ ನೋಡೋಣ. 

ಭಾಗವತ ಬಿತ್ತರಕ್ಕಾಗಿ ಪರೀಕ್ಷಿತನ ಪ್ರಶ್ನೆಗಳು

ರಾಜೋವಾಚ--
ಬ್ರಹ್ಮಣಾ ಚೋದಿತೋ ಬ್ರಹ್ಮನ್ ಗುಣಾಖ್ಯಾನೇಽಗುಣಸ್ಯ ಚ
ಯಸ್ಮೈಯಸ್ಮೈ ಯಥಾ ಪ್ರಾಹ ನಾರದೋ ದೇವದರ್ಶನಃ ೦೧

ಪರೀಕ್ಷಿತ ಕೇಳುತ್ತಾನೆ: “ಚತುರ್ಮುಖನಿಂದ ನಾರದರಿಗೆ  ಉಪದೇಶಿಸಲ್ಪಟ್ಟ ಜ್ಞಾನ ಮುಂದೆ ಹೇಗೆ ಇತರರಿಗೆ ಉಪದೇಶಿಸಲ್ಪಟ್ಟಿತು?” ಎಂದು. ಲೋಕದಲ್ಲಿ ಈ ಜ್ಞಾನ ಪರಂಪರೆ ಹೇಗೆ ಮುಂದುವರಿಯಿತು ಎನ್ನುವುದನ್ನು ತಿಳಿಸಿ ಎಂಬುದಾಗಿ ಪರೀಕ್ಷಿತ ಶುಕಾಚಾರ್ಯರನ್ನು ಕೇಳುವುದರೊಂದಿಗೆ ಎಂಟನೇ ಅಧ್ಯಾಯ ಆರಂಭವಾಗುತ್ತದೆ.

ಏತದ್ ವೇದಿತುಮಿಚ್ಛಾಮಿ ತತ್ತ್ವಂ ವೇದವಿದಾಂ ವರ
ಹರೇರದ್ಭುತವೀರ್ಯಸ್ಯ ಕಥಾ ಲೋಕಸುಮಂಗಳಾಃ ೦೨

ಕಥಯಸ್ವ ಮಹಾಭಾಗ ಯಥಾSಹಮಖಿಲಾತ್ಮನಿ
ಕೃಷ್ಣೇ ನಿವೇಶ್ಯ ನಿಃಸಂಗಂ ಮನಸ್ತ್ಯಕ್ಷ್ಯೇ ಕಳೇಬರಮ್ ೦೩


ಪರೀಕ್ಷಿತ ಹೇಳುತ್ತಾನೆ: “ಇಡೀ ಜಗತ್ತಿಗೆ ಮಾಂಗಲಿಕವಾಗಿರುವ ಭಗವಂತನ ಕಥೆಯನ್ನು ವಿಸ್ತಾರವಾಗಿ ನಾನು ಕೇಳಬೇಕು” ಎಂದು.  ನಮಗೆ ತಿಳಿದಂತೆ ಪರೀಕ್ಷಿತ ತಾಯಿಯ ಉದರದಲ್ಲಿದ್ದಾಗಲೇ ಭಗವಂತನ ದರ್ಶನ ಪಡೆದು, ಭಗವಂತನನಿಂದ ರಕ್ಷಿಸಲ್ಪಟ್ಟು ಹುಟ್ಟಿದವ. ನಂತರ ಸುಮಾರು ೩೫ ವರ್ಷಗಳ ಕಾಲ ಶ್ರೀಕೃಷ್ಣನ ಒಡನಾಡಿಯಾಗಿ ಪರೀಕ್ಷಿತ ಬೆಳೆದಿದ್ದ. ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಿದ ಮೇಲೆ ಸುಮಾರು ೩೦ ವರ್ಷಗಳ ಕಾಲ ಪರೀಕ್ಷಿತ ಧರ್ಮದಿಂದ ರಾಜ್ಯ ಪಾಲನೆ ಮಾಡಿದ್ದ. ಪರೀಕ್ಷಿತನ ತಂದೆ ಅಭಿಮನ್ಯುವಿನ ತಾಯಿ ಸುಭದ್ರೆ ಶ್ರೀಕೃಷ್ಣನ ತಂಗಿ. ಹೀಗಾಗಿ ಆತ ಸಂಬಂಧದಿಂದ ಮತ್ತು ಕಾಲತಃ ಶ್ರೀಕೃಷ್ಣನಿಗೆ ಹತ್ತಿರದವನಾಗಿದ್ದ. ಆದ್ದರಿಂದ ಆತನಿಗೆ ಶ್ರೀಕೃಷ್ಣ ಎಂದರೆ ಎಲ್ಲರ ಅಂತರ್ಯಾಮಿಯಾದ ಭಗವಂತ ಎನ್ನುವ ಸತ್ಯ ತಿಳಿದಿತ್ತು. ಆತ ಹೇಳುತ್ತಾನೆ: “ಈ ಏಳು ದಿನಗಳಲ್ಲಿ ನನ್ನ ಮನಸ್ಸು ಹೊರಪ್ರಪಂಚದ ಸೆಳೆತಕ್ಕೊಳಗಾಗದೇ ಸಂಪೂರ್ಣವಾಗಿ ಶ್ರೀಕೃಷ್ಣನಲ್ಲಿ ನೆಲೆಗೊಳ್ಳಬೇಕು. ಅಂಥಹ ಚಿಂತನೆಯನ್ನು ಕೊಡಬಲ್ಲ ಶ್ರೀಕೃಷ್ಣನ ಕಥೆಯನ್ನು ಬಿತ್ತರಿಸಿ ಹೇಳಿ. ನಾನು ಆ ಭಗವಂತನ ಚಿಂತನಾ ಸ್ಥಿತಿಯಲ್ಲೇ ದೇಹತ್ಯಾಗ ಮಾಡಬೇಕು” ಎಂದು. ಈ ಹಿಂದೆ ವಿಶ್ಲೇಶಿಸಿದಂತೆ ಪ್ರಾಣೋತ್ಕ್ರಮಣ ಕಾಲದಲ್ಲಿ ನಮ್ಮ ಮನಸ್ಸು ಏನನ್ನು ಚಿಂತಿಸುತ್ತದೋ ಅದನ್ನೇ ಜೀವ ಮುಂದೆ ಪಡೆಯುತ್ತದೆ. ಗೀತೆಯಲ್ಲೂ ಕೂಡಾ ಶ್ರೀಕೃಷ್ಣ ಇದೇ ಮಾತನ್ನು ಹೇಳಿದ್ದಾನೆ: ಯಂ ಯಂ ವಾSಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ । ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ           ॥೮-೬॥ ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತಾ ದೇಹವನ್ನು ತೊರೆಯುತ್ತಾನೋ ಅದರಲ್ಲೇ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದನ್ನೆ ಪಡೆಯುತ್ತಾನೆ”. ಈ ವಿಷಯವನ್ನು ಅರಿತಿದ್ದ ಪರೀಕ್ಷಿತ ತಾನು ಕೊನೆಗಾಲದಲ್ಲಿ ಕೇವಲ ಭಗವಂತನ ಚಿಂತನೆಯಲ್ಲೇ ನಿಲ್ಲಬಲ್ಲ ಭಗವಂತನ ಕಥೆಯನ್ನು ವಿಸ್ತಾರವಾಗಿ ಕೇಳಬೇಕು ಎನ್ನುವ ಅಭಿಲಾಷೆಯನ್ನು ಶುಕಾಚಾರ್ಯರ ಮುಂದಿಡುತ್ತಾನೆ. ಈ ಕಾರಣದಿಂದಲೇ ಭಾಗವತದಲ್ಲಿ ಭಗವಂತನ ಅವತಾರಗಳ, ವಿಶೇಷವಾಗಿ ದಶಾವತಾರಗಳ ವಿಸ್ತಾರವಾದ ವಿವರಣೆಯನ್ನು ಶುಕಾಚಾರ್ಯರು ನೀಡುವುದನ್ನು ನಾವು ಕಾಣುತ್ತೇವೆ.    

No comments:

Post a Comment