Thursday, October 22, 2015

Shrimad BhAgavata in Kannada -Skandha-02-Ch-09(03)

ನ ವರ್ತತೇ ಯತ್ರ ರಜಸ್ತಮಸ್ತಯೋಃ ಸತ್ತ್ವಂ ಚ ಮಿಶ್ರಂ ನ ಚ ಕಾಲವಿಕ್ರಮಃ
ನ ಯತ್ರ ಮಾಯಾ ಕಿಮುತಾಪರೇ ಹರೇರನುವ್ರತಾ ಯತ್ರ ಸುರಾಸುರಾರ್ಚಿತಾಃ ೧೦

“ಭಗವಂತ ಚತುರ್ಮುಖನಿಗೆ ನಿತ್ಯಲೋಕದ ದರ್ಶನ ನೀಡಿದ” ಎನ್ನುವ ಮಾತನ್ನು ಕೇಳಿದಾಗ  ನಮಗೆ ಆ ಲೋಕದ ಕುರಿತು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಮೂಡುತ್ತದೆ. ಇದಕ್ಕಾಗಿ ಶುಕಾಚಾರ್ಯರು ಇಲ್ಲಿ ನಮಗೆ ನಾವಿರುವ ಪ್ರಪಂಚಕ್ಕೂ ಭಗವಂತನ ಲೋಕಕ್ಕೂ ಇರುವ ವ್ಯತ್ಯಾಸವೇನು ಎನ್ನುವುದನ್ನು ವಿವರಿಸಿದ್ದಾರೆ.
ನಾವು ಕಾಣುವ ಈ ನಮ್ಮ ಪ್ರಪಂಚ ಮಣ್ಣು-ನೀರು-ಬೆಂಕಿಯ ಮಿಶ್ರಣ. ಇಲ್ಲಿರುವ ಪ್ರತಿಯೊಂದು ವಸ್ತುಗಳೂ ಕೂಡಾ ಸತ್ವ-ರಜಸ್ಸು-ತಮೋಗುಣಗಳಿಂದಾಗಿದೆ. ಇಲ್ಲಿ ಶುದ್ಧ ಸತ್ವ, ಶುದ್ಧ ರಜಸ್ಸು ಅಥವಾ ಶುದ್ಧ ತಮಸ್ಸು ಎನ್ನುವುದಿಲ್ಲ. ಎಲ್ಲವೂ ಮೂರರ ಮಿಶ್ರಣ. ಆದರೆ ಶುಕಾಚಾರ್ಯರು ಹೇಳುತ್ತಾರೆ: “ವೈಕುಂಠಲೋಕ ತ್ರೈಗುಣ್ಯಮುಕ್ತ” ಎಂದು. ಸತ್ವ-ರಜಸ್ಸು-ತಮೋಗುಣಗಳ ಪ್ರಭಾವ ಅಲಿಲ್ಲ. ಹೀಗಾಗಿ ಅದು ಸಂಪೂರ್ಣ ಅಪ್ರಾಕೃತ.  ಅದು ಕಾಲದ ಪ್ರಭಾವಕ್ಕೊಳಪಟ್ಟು ಬದಲಾವಣೆ ಹೊಂದುವ ಲೋಕವಲ್ಲ. ಮಾಯೆಯ ಪರದೆ ಅಲಿಲ್ಲ. “ಅಲ್ಲಿರುವವರು ಸುರರಿಂದ ಮತ್ತು ಅಸುರರಿಂದ ಅರ್ಚಿತರಾಗುತ್ತಿದ್ದಾರೆ” ಎನ್ನುತ್ತಾರೆ ಶುಕಾಚಾರ್ಯರು. ಇಲ್ಲಿ ಶುಕಾಚಾರ್ಯರು ‘ಅಸುರ’ ಎನ್ನುವ ಪದವನ್ನು ಬಳಸಿರುವುದು ನಮಗೆ ಗೊಂದಲವನ್ನುಂಟುಮಾಡುತ್ತದೆ. ಇದರಿಂದಾಗಿ “ಅಸುರರಿಗೂ ಮೋಕ್ಷ ಸಿಗುವುದೇ?” ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಇಲ್ಲಿ ಬಳಸಿರುವ ಅಸುರ ಎನ್ನುವ ಪದಕ್ಕೆ ಬೇರೆ ಅರ್ಥವಿದೆ. “ಮಹದ್ದೇವಾನಾಂ ಅಸುರತ್ವಮೇತುಂ” ಎನ್ನುವ ಮಾತಿದೆ. ವೇದದಲ್ಲೂ ಕೂಡಾ ಅಸುರ ಎನ್ನುವ ಪದ ಬೇರೆ ಅರ್ಥದಲ್ಲಿ ಬಳಕೆಯಾಗಿರುವುದನ್ನು ನಾವು ಕಾಣುತ್ತೇವೆ. ಅಸು=ಪ್ರೇರಣೆ. ಹೀಗಾಗಿ ಎಲ್ಲವನ್ನೂ ಪ್ರೇರಣೆ ಮಾಡುವ ಭಗವಂತ ‘ಅಸು’. ಪ್ರಾಣದೇವರಿಗೂ ‘ಅಸು’ ಎನ್ನುತ್ತಾರೆ. ಹೀಗಾಗಿ ಪ್ರಾಣತತ್ತ್ವದಲ್ಲಿ, ಭಗವಂತನಲ್ಲಿ ಸುಖವನ್ನು ಕಾಣುವವರು ‘ಅಸುರರು’. ‘ನಾಹಂಕರ್ತಾ ಹರಿಃ ಕರ್ತಾ’ ಎಂದು ಭಗವಂತನ ಕರ್ತೃತ್ವಶಕ್ತಿಯ ಅರಿವಿನಿಂದ ಅರ್ಚಿಸುವ ದೇವತೆಗಳನ್ನು,  ಅಂಥಹ ದೇವತೆಗಳಿಂದ ಅರ್ಚಿತರಾಗುವ ಬ್ರಹ್ಮಾದಿಗಳನ್ನು  ಶ್ವೇತದ್ವೀಪದಲ್ಲಿ ಚತುರ್ಮುಖ ಕಾಣುತ್ತಾನೆ. [ಈಗಾಗಲೇ ಕಳೆದುಹೋಗಿರುವ ಅನಂತ ಬ್ರಹ್ಮಕಲ್ಪದಲ್ಲಿ ಮುಕ್ತಿಯನ್ನು ಪಡೆದ ಬ್ರಹ್ಮಾದಿಗಳು ಆತನಿಗೆ ವೈಕುಂಠಲೋಕದಲ್ಲಿ ಕಾಣಿಸುತ್ತಾರೆ].

ಮೋಕ್ಷದಲ್ಲೂ ಕೂಡಾ ತಾರತಮ್ಯವಿದೆ ಎನ್ನುವ ಅಪೂರ್ವವಾದ ವಿಷಯ ಇಲ್ಲಿ ನಮಗೆ ತಿಳಿಯುತ್ತದೆ.  ಅಂದರೆ ಅವರವರ ಸಾಧನೆಗೆ ತಕ್ಕಂತೆ ಸಿದ್ದಿ ಹೊರತು  ಎಲ್ಲರಿಗೂ ಸಮಾನವಾದ ಸಿದ್ದಿ ಎನ್ನುವುದಿಲ್ಲ. ಒಂದು ಕಲ್ಪ ಸಾಧನೆ ಮಾಡುವ ಮನುಷ್ಯನಿಗೂ, ನೂರು ಕಲ್ಪ ಸಾಧನೆ ಮಾಡುವ ಚತುರ್ಮುಖನಿಗೂ ಒಂದೇ ಸಿದ್ದಿ ಅಲ್ಲ. ಯೋಗ್ಯತೆಗನುಗುಣವಾದ  ಸಿದ್ದಿ. ಅಷ್ಟೇ ಅಲ್ಲಾ, ಶುಕಾಚಾರ್ಯರ ಮಾತಿನಿಂದ ತಿಳಿಯುವ ಇನ್ನೊಂದು ವಿಷಯ ಏನೆಂದರೆ: ಮೋಕ್ಷಕ್ಕೆ ಹೋದ ಜೀವ ಭಗವಂತನ ಜೊತೆ ಸೇರಿ ಭಗವಂತನೇ ಆಗಿ ಬಿಡುವುದಿಲ್ಲ, ಬದಲಿಗೆ ಆತ ಸದಾ ಭಗವಂತನೊಂದಿಗಿರುತ್ತಾನೆ. ಮೋಕ್ಷದಲ್ಲಿ ಹಿರಿಯ-ಕಿರಿಯ ಎನ್ನುವ ತಾರತಮ್ಯ ಇದ್ದರೂ ಕೂಡಾ ಅಲ್ಲಿ ಪೈಪೋಟಿ ಜಗಳವಿಲ್ಲ. ಕಿರಿಯರು ಹಿರಿಯರನ್ನು ಸದಾ ಗೌರವದಿಂದ ಕಾಣುತ್ತಾರೆ. ಏಕೆಂದರೆ ತ್ರೈಗುಣ್ಯದ ಮಾಯಪರದೆ ಅಲ್ಲಿಲ್ಲ. ಮೋಕ್ಷದಲ್ಲಿ  ಜ್ಞಾನಾನಂದಪೂರ್ಣನಾದ ಜೀವನಿಗೆ  ತನ್ನ ಸಿದ್ದಿಯ ಎತ್ತರ ಏನು ಎನ್ನುವ ಅರಿವಿರುತ್ತದೆ ಮತ್ತು  ಅದಕ್ಕನುಗುಣವಾಗಿ, ಭಗವಂತನ ಸೇವಕನಾಗಿ(ಹರೇರನುವ್ರತಾ) ಆತನಿರುತ್ತಾನೆ. ಭಗವಂತನ ಅಧೀನತ್ವ ಮೋಕ್ಷದಲ್ಲೂ ಇರುತ್ತದೆ ಎನ್ನುವ ಸತ್ಯ ಈ ಮಾತಿನಿಂದ ಸ್ಪಷ್ಟವಾಗಿ ತಿಳಿಯುತ್ತದೆ.
http://bhagavatainkannada.blogspot.in/

No comments:

Post a Comment