Sunday, December 22, 2013

Shrimad BhAgavata in Kannada -Skandha-02-Ch-02(11)

ಯದಿ ಪ್ರಯಾಸ್ಯತ್ಯಥ ಪಾರಮೇಷ್ಠ್ಯಂ ವೈಹಾಯಸಾನಾಮುತ ಯದ್ ವಿಹಾರಮ್
ಅಷ್ಟಾಧಿಪತ್ಯಂ ಗುಣಸನ್ನಿವಾಯೇ ಸಹೈವ ಗಚ್ಛೇನ್ಮನಸೇಂದ್ರಿಯೈಶ್ಚ ೨೩

ದೇಹತ್ಯಾಗ ಮಾಡಿದ ಅಪರೋಕ್ಷ ಜ್ಞಾನಿ ನೇರವಾಗಿ ಮೋಕ್ಷಕ್ಕೆ ಹೋಗುವುದಿಲ್ಲ. ಮೋಕ್ಷಕ್ಕೆ ಹೋಗಲು ಒಂದು ಅವಧಿ ಇದೆ.   ದೇಹತ್ಯಾಗ ಮಾಡಿದ ಮೇಲೆ  ಮೋಕ್ಷಕ್ಕೆ ಹೋಗುವ ತನಕ ಜೀವ ಬೇರೆ-ಬೇರೆ ಸ್ಥಾನದಲ್ಲಿರುತ್ತಾನೆ. ಆ ಸ್ಥಾನಗಳೆಂದರೆ ಸ್ವರ್ಗಲೋಕದ ಆನಂತರ ಇರುವ, ದೇವತೆಗಳ ವಿಹಾರತಾಣವಾಗಿರುವ-  ಮಹರ್ಲೋಕ, ಜನರ್ಲೋಕ, ತಪರ್ಲೋಕ ಮತ್ತು ಸತ್ಯಲೋಕ. ತಮ್ಮ ಯೋಗ್ಯತೆಗನುಗುಣವಾಗಿ ಬೇರೆಬೇರೆ  ಲೋಕಗಳಲ್ಲಿ ಬ್ರಹ್ಮಕಲ್ಪದ ಅವಸಾನದ ತನಕ ಇದ್ದು, ಕೊನೆಗೆ ಚತುರ್ಮುಖ ಬ್ರಹ್ಮನೊಂದಿಗೆ  ಜೀವ ಮೋಕ್ಷವನ್ನು ಸೇರುತ್ತಾನೆ. ಈ ಲೋಕವನ್ನು ಸೇರಿದ ಜೀವನಿಗೆ ಮತ್ತೆ ಮರುಹುಟ್ಟಿಲ್ಲ.  ಈ ಲೋಕಗಳಲ್ಲದೆ ಪುಣ್ಯಫಲದಿಂದ ಸ್ವರ್ಗಲೋಕವನ್ನು ಸೇರಿದ ಜೀವನಿಗೆ ಪುನರ್ಜನ್ಮವಿರುತ್ತದೆ. ಆತ ಮತ್ತೆ ಮೋಕ್ಷ ಸಾಧನೆ ಮಾಡಬೇಕಾಗುತ್ತದೆ.
ಮೇಲಿನ  ಶ್ಲೋಕದಲ್ಲಿ ‘ಅಷ್ಟಾಧಿಪತ್ಯಂ’ ಎಂದರೆ  ಅಷ್ಟದಿಕ್ಪಾಲಕರ ಆಡಳಿತಕ್ಕೊಳಪಟ್ಟ ಸ್ವರ್ಗಲೋಕ ಎನ್ನುವುದು ಒಂದು ಅರ್ಥವಾದರೆ, ಅಷ್ಟಸಿದ್ಧಿ ಪಡೆದವರ ಸ್ಥಾನವಾದ ಮೋಕ್ಷ ಎನ್ನುವುದು ಇನ್ನೊಂದು ಅರ್ಥ. [ಅಷ್ಟಸಿದ್ಧಿಯ ಬಗ್ಗೆ ಮುಂದೆ ಭಾಗವತದಲ್ಲೇ ವಿವರಣೆ ಬರುತ್ತದೆ. ಸಂಕ್ಷಿಪ್ತವಾಗಿ ಅಷ್ಟಸಿದ್ಧಿಯ ಬಗ್ಗೆ ಹೇಳಬೇಕೆಂದರೆ: ಅಣಿಮಾ - ದೇಹವನ್ನು ಅತಿ ಚಿಕ್ಕ (ಅಣುವಿಗಿಂತ ಅಣು) ಗಾತ್ರಕ್ಕೆ ಇಳಿಸುವದು; ಲಘಿಮಾ - ಹತ್ತಿಯಂತೆ ಹಗುರಾಗುವದು; ಮಹಿಮಾ - ದೇಹವನ್ನು ಅತಿ ದೊಡ್ಡ ಗಾತ್ರಕ್ಕೆ ಹೆಚ್ಚಿಸುವದು; ಗರಿಮಾ - ಬೆಟ್ಟದಷ್ಟು ಭಾರವಾಗಿರುವದು; ಪ್ರಾಪ್ತಿ – ಎಲ್ಲಿಗೆ ಹೋಗಬೇಕೆಂದು ಇಚ್ಛೆಯಾಯಿತೋ ಆ ಕ್ಷಣ ಅಲ್ಲಿಗೆ ಹೋಗುವುದು; ಪ್ರಾಕಾಮ್ಯ – ನಾವು ಇಷ್ಟಪಟ್ಟ ವಸ್ತು ನಾವಿದ್ದಲ್ಲಿಗೆ ಬರುವುದು; ಈಶಿತ್ವ – ಏನನ್ನೂ ಮಾಡುವ ತಾಕತ್ತು;  ವಶಿತ್ವ – ಯಾರನ್ನು ಬೇಕಾದರೂ ತನ್ನ ಅಧೀನಕ್ಕೆ ತೆಗೆದುಕೊಳ್ಳುವುದು].

ಸಾವಿನ ಆನಂತರ ಮತ್ತು ಮೋಕ್ಷ ಸಿದ್ಧಿಯ ಮೊದಲು ಜೀವ ಯಾವ ಇಂದ್ರಿಯವನ್ನು ಹೊಂದಿರುತ್ತಾನೆ ? ಸ್ವರೂಪಭೂತವಾದ ಇಂದ್ರಿಯವೋ ಅಥವಾ ಪಾಂಚಭೌತಿಕ ಇಂದ್ರಿಯವೋ? ಈ ಪ್ರಶ್ನೆಗೆ ಉತ್ತರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: ಜೀವ ತನ್ನ ಇಂದ್ರಿಯ ಮತ್ತು ಮನಸ್ಸಿನೊಂದಿಗೇ ದೇಹದಿಂದ ಹೊರ ಹೋಗುತ್ತದೆ ಹೊರತು ಇಂದ್ರಿಯವನ್ನು ಬಿಟ್ಟು ಹೋಗುವುದಿಲ್ಲ. ಮೋಕ್ಷಕ್ಕೆ ಹೋಗುವ ತನಕವೂ ಈ ಇಂದ್ರಿಯಗಳು ಆತನ ಜೊತೆಗಿರುತ್ತವೆ. ಮೋಕ್ಷಸ್ಥಿತಿಯಲ್ಲಿ ಹೋಗಿ ನಿಂತಾಗಲೇ ಸ್ವರೂಪಭೂತವಾದ ಇಂದ್ರಿಯ ಮತ್ತು ಮನಸ್ಸು. ಅಲ್ಲಿಯ ತನಕ ಚರಮಶರೀರ ನಾಶವಾದರೂ ಕೂಡಾ ಆತನ ಲಿಂಗಶರೀರ ಮತ್ತು ಇಂದ್ರಿಯ ಆತನ ಜೊತೆಗೇ ಇರುತ್ತವೆ.  

No comments:

Post a Comment