Monday, April 29, 2013

Shrimad BhAgavata in Kannada -Skandha-01-Ch-12(5)


ಕಾಡಿಗೆ ಹೋದ ಸುಮಾರು ಆರು ತಿಂಗಳಲ್ಲಿ  ವಿದುರ ದೇಹತ್ಯಾಗ ಮಾಡಿ ಧರ್ಮರಾಯನಲ್ಲಿ ಐಕ್ಯನಾಗುತ್ತಾನೆ. ಇತರರು ತಮ್ಮ ತಪಸ್ಸನ್ನು ಮುಂದುವರಿಸುತ್ತಾರೆ. ಹೀಗೆ ಸುಮಾರು ಮೂರು ವರ್ಷ ಕಳೆಯುತ್ತದೆ. ಧೃತರಾಷ್ಟ್ರನಿಗೆ ಸುಮಾರು ೧೨೦ವರ್ಷ, ಧರ್ಮರಾಯನಿಗೆ ಸುಮಾರು ೯೦  ಮತ್ತು ಪರೀಕ್ಷಿತನಿಗೆ ಸುಮಾರು ಹದಿನೆಂಟರ ಪ್ರಾಯ. ಈ  ಸಂದರ್ಭದಲ್ಲಿನ ಒಂದು ಘಟನೆ ಘಟಿಸುತ್ತದೆ.

ಅಜಾತಶತ್ರುಃ ಕೃತಮೈತ್ರೋ ಹುತಾಗ್ನಿರ್ವಿಪ್ರಾನ್ ನತ್ವಾ ತಿಲಗೋವಸ್ತ್ರರುಗ್ಮೈಃ
ಗೃಹಾನ್ ಪ್ರವಿಷ್ಟೋ ಗುರುವಂದನಾಯ ನ ಚಾಪಶ್ಯತ್ ಪಿತರೌ ಸೌಬಲೀಂ ಚ ೩೧

ಎಂದೂ ಯಾರನ್ನೂ ಹಗೆಯೆಂದು ಕಾಣದ ಅಜಾತಶತ್ರು ಧರ್ಮರಾಯ ಒಂದು ದಿನ ಎಂದಿನಂತೆ  ಸೂರ್ಯನಲ್ಲಿರುವ ಸೂರ್ಯನಾರಾಯಣನನ್ನು ಗಾಯತ್ತ್ರಿ ಮಂತ್ರದಿಂದ ಉಪಾಸನೆ ಮಾಡಿ, ಅಗ್ನಿಮುಖೇನ ಭಗವಂತನನ್ನು ಆರಾಧಿಸಿ, ವಿಪ್ರರಿಗೆ(ವಿಷ್ಣುವಿನ ಪರಮಪದವನ್ನು ತಿಳಿದವರು) ನಮಸ್ಕರಿಸಿ, ಅಲ್ಲಿ ಸೇರಿದ್ದ ವಿದ್ವಾಂಸರಿಗೆ ತಿಲ/ವಸು(ಸಂಪತ್ತು), ಗೋವು, ಭೂಮಿ/ವಸ್ತ್ರ, ರುಗ್ಮೈ(ಚಿನ್ನ) ದಾನ ಮಾಡಿ, ತನ್ನ ಹಿರಿಯರನ್ನು ಅವರ ಆಸನ ಪ್ರತೀಕದಲ್ಲಿ ನಮಸ್ಕರಿಸಲು ಧೃತರಾಷ್ಟ್ರನಿದ್ದ ಕೋಣೆಗೆ ಹೋಗುತ್ತಾನೆ. ಆಗ ಎಂದಿನಂತೆ ಆತನ ಅಂತರಂಗಕ್ಕೆ ಕುಂತಿ-ಧೃತರಾಷ್ಟ್ರ(ಪಿತರೌ) ಮತ್ತು  ಗಾಂಧಾರಿಯ ದರ್ಶನವಾಗುವುದಿಲ್ಲ. ಇದರಿಂದಾಗಿ ಆತ ಗಾಭರಿಯಿಂದ ಹೊರಬರುತ್ತಾನೆ. ಹೊರಬಂದು ನೋಡಿದರೆ ಅಲ್ಲಿ ಕುರುಡ ಧೃತರಾಷ್ಟ್ರನಿಗೆ ಕಾಡಿನಲ್ಲಿ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದ ಗಾವದ್ಗಣನ ಪುತ್ರ ಸಂಜಯ ಕಾಣಿಸುತ್ತಾನೆ.   

ತತ್ರ ಸಂಜಯಮಾಸೀನಂ ಪಪ್ರಚ್ಛೋದ್ವಿಗ್ನಮಾನಸಃ
ಗಾವದ್ಗಣೇ ಕ್ವ ನಸ್ತಾತೋ ವೃದ್ಧೋ ಹೀನಶ್ಚ ನೇತ್ರಯೋಃ
ಅಂಬಾ ವಾ ಹತಪುತ್ರಾರ್ತಾ ಪಿತೃವ್ಯಃ ಕ್ವ ಗತಃ ಸುಹೃತ್ ೩೨

ಯಾವುದೋ ಕೆಟ್ಟ ವಿಷಯದ ಮುನ್ಸೂಚನೆಯಿಂದ ಹೊರಬಂದ ಧರ್ಮರಾಯನಿಗೆ ಸಂಜಯನನ್ನು ನೋಡಿ ಮತ್ತಷ್ಟು ಗಾಭರಿಯಾಗುತ್ತದೆ. ಆತ ಉದ್ವಿಗ್ನತೆಯಿಂದ ಕೇಳುತ್ತಾನೆ: ಎಲ್ಲಿ ನಮ್ಮ ಅಪ್ಪ? ನೀನು ಅಪ್ಪನ ಜೊತೆಗಿದ್ದವನು ಒಬ್ಬನೇ ಏಕೆ ಬಂದೆ? ಕಣ್ಣಿಲ್ಲದ ನಮ್ಮ ಅಪ್ಪ, ಮಕ್ಕಳನ್ನು ಕಳೆದುಕೊಂಡ ದುರ್ದೈವಿ ದೊಡ್ಡಮ್ಮ ಎಲ್ಲಿ? ಸಾಮ್ರಾಜ್ಯಕಟ್ಟಿಯೂ ತಾಯಿಯನ್ನು ಸುಖವಾಗಿಡದ ನಮ್ಮಂತಹ ದುರ್ದೈವಿ ಮಕ್ಕಳನ್ನು ಪಡೆದ ನಮ್ಮ ತಾಯಿ ಎಲ್ಲಿ?” ಎಂದು. [ಇಲ್ಲಿ ಪಿತೃವ್ಯಃ  ಎಂದರೆ ಗಾಂಧಾರಿ ಮತ್ತು ಧೃತರಾಷ್ಟ್ರ, ದೊಡ್ಡಪ್ಪನನ್ನು ಧರ್ಮರಾಯ ಅಪ್ಪ ಎಂದು ಸಂಬೋಧಿಸಿದ್ದಾನೆ]

ಪಿತರ್ಯುಪರತೇ ಪಾಂಡೌ ಸರ್ವಾನ್ ನಃ ಸುಹೃದಃ ಶಿಶೂನ್
ಅರಕ್ಷತಾಂ ವ್ಯಸನತಃ ಪಿತೃವ್ಯೌ ಕ್ವ ಗತಾವಿತಃ ೩೪

ನಮ್ಮನ್ನು ತಂದೆ-ತಾಯಿರಂತೆ ಸಾಕಿ, ಎಲ್ಲಾ ಕಷ್ಟ ಕಾಲದಲ್ಲಿ ನಮ್ಮ ರಕ್ಷಣೆಗೆ ನಿಂತ ಹಿರಿಯರಾದ ನಮ್ಮ ದೊಡ್ಡಪ್ಪ ದೊಡ್ಡಮ್ಮ ಎಲ್ಲಿದ್ದಾರೆ? ಹೇಗಿದ್ದಾರೆ ಹೇಳು  ಎಂದು ಧರ್ಮರಾಯ ಉದ್ವಿಗ್ನತೆಯಿಂದ ಸಂಜಯನಲ್ಲಿ ಕೇಳುತ್ತಾನೆ.

No comments:

Post a Comment