Thursday, December 13, 2012

Shrimad BhAgavata in Kannada -ಪ್ರಸ್ತಾವನೆ-3

ಭಾಗವತವನ್ನು “ವೇದಾರ್ಥಪರಿಬೃಂಹಿತಃ”  ಎಂದಿದ್ದಾರೆ. ಇದು ಅರ್ಥವಾಗಬೇಕಾದರೆ ನಾವು ಭಾಗವತ ಶ್ಲೋಕಗಳನ್ನು ಗಮನಿಸಬೇಕು. ಅಲ್ಲಿ ವ್ಯಾಸರು ಪ್ರತಿಯೊಂದು ಪದ್ಯದಲ್ಲೂ ವೇದಾರ್ಥವನ್ನು ತುಂಬಿ, ಹೇಗೆ ವೇದದ ಚಿಂತನೆಗೆ ನಮ್ಮನ್ನು ಅಣಿಗೊಳಿಸುತ್ತಾರೆ ಎನ್ನುವುದು ತಿಳಿಯುತ್ತದೆ. ಇದಕ್ಕೆ ಒಂದು ಪ್ರಸಿದ್ಧ ದೃಷ್ಟಾಂತ ಈ ಕೆಳಗಿನ  ವೇದ ಮಂತ್ರ:
“ನಮೋ ಮಹಭ್ಯೋ ನಮೋ ಅರ್ಭಕೇಭ್ಯೋ ನಮೋ ಯುವಭ್ಯೋ ನಮಃ  ಆಶಿನೇಭ್ಯಃ”
ಇಲ್ಲಿ ‘ಆಶಿನೇಭ್ಯಃ’ ಎಂದರೆ ಏನು ಎನ್ನುವುದು ವೇದಾಧ್ಯಯನ ಮಾಡುವಾಗ ನಮಗೆ ಸ್ಪಷ್ಟವಾಗುವುದಿಲ್ಲ. ಆದ್ದರಿಂದ ಇದನ್ನು ಸ್ಪಷ್ಟಪಡಿಸುವುದಕ್ಕೋಸ್ಕರ ವೇದವ್ಯಾಸರು ಭಾಗವತದಲ್ಲಿ ಹೀಗೆ ಹೇಳಿದ್ದಾರೆ:
ನಮೋ ಮಹದ್ಭ್ಯೋಽಸ್ತು ನಮಃ ಶಿಶುಭ್ಯೋ ನಮೋ ಯುವಭ್ಯೋ ನಮಃ ಆವಟುಭ್ಯಃ [೧೫-೧೩-೨೩].
ಇಲ್ಲಿ ಎಲ್ಲಾ ಪದಗಳನ್ನು ವೇದಮಂತ್ರದಿಂದ ಆಯ್ಕೆ ಮಾಡಿದ ವೇದವ್ಯಾಸರು,  ‘ಆಶಿನೇಭ್ಯಃ’ ಎನ್ನುವಲ್ಲಿ “ವಟುಭ್ಯಃ” ಎನ್ನುವ ಪದ ಬಳಸಿ ಆಶಿನೇಭ್ಯಃ ಎನ್ನುವ ಪದದ ಅರ್ಥ ವಿವರಣೆ ನೀಡಿದರು. ಹೀಗೆ ವೇದದಲ್ಲಿ ಅಸ್ಪಷ್ಟವಾಗಿರುವ ಅನೇಕ ವಿಚಾರಗಳನ್ನು ಭಾಗವತ ಬಿಡಿಸಿ ಹೇಳುತ್ತದೆ. ಈ ರೀತಿಯ ವಿವರಣೆ ಬೇರೆ ಪುರಾಣಗಳಿಗಿಂತ ಹೆಚ್ಚಾಗಿ ಭಾಗವತದಲ್ಲಿ ಬಳಕೆಯಾಗಿದೆ. ಹೀಗಾಗಿ ವೇದದ ಅರ್ಥ ನಮಗಾಗಬೇಕಾದರೆ ನಾವು ಭಾಗವತವನ್ನು ಓದಬೇಕು. ವ್ಯಾಸರೇ ಹೇಳುವಂತೆ:
ಪುರಾಣಾನಾಂ ಸಾರರೂಪಃ ಸಾಕ್ಷಾದ್ ಭಗವತೋದಿತಃ |
ದ್ವಾದಶಸ್ಕಂದ ಸಂಯುಕ್ತಃ ಶತವಿಚ್ಛೇದ ಸಂಯುತಃ |
ಗ್ರಂಥೋSಷ್ಟಾದಶ ಸಾಹಸ್ರಃ ಶ್ರೀಮದ್ಭಾಗವತಾಭಿಧಃ |

ಹದಿನೆಂಟು ಪುರಾಣಗಳಲ್ಲಿ ಭಾಗವತ ಸಾರಭೂತವಾದ ಪುರಾಣ ಎಂದು ತೀರ್ಮಾನ ಮಾಡಿ ವ್ಯಾಸರು ಈ ಗ್ರಂಥವನ್ನು ರಚನೆ ಮಾಡಿದರು. ಇದು ಭಗವಂತನ ಕುರಿತಾದ ಗ್ರಂಥ ಮತ್ತು ಭಗವಂತನೇ ರಚಿಸಿದ ಗ್ರಂಥ. ಇದರಲ್ಲಿ ಹನ್ನೆರಡು ಸ್ಕಂದಗಳಿವೆ ಮತ್ತು ೧೮,೦೦೦ ಶ್ಲೋಕಗಳಿವೆ. ಇಲ್ಲಿ ಹೇಳುವಂತೆ ಭಾಗವತದಲ್ಲಿ ನೂರು ಪರಿಚ್ಛೇದಗಳಿವೆ. ಆ ನೂರು ಪರಿಚ್ಛೇದ ಯಾವುದು ಎನ್ನುವುದು ನಮಗೆ ಅಸ್ಪಷ್ಟವಾದರೂ ಕೂಡಾ, “ಶತವಿಚ್ಛೇದ” ಎಂದರೆ  ನೂರಾರು ಅಧ್ಯಾಯಗಳು ಎಂದು ನಾವು ತಿಳಿಯಬಹುದು.
ಪ್ರೀತಿಯ ಅಧ್ಯಾತ್ಮ ಬಂಧುಗಳೇ, ಭಗವಂತ ನಮಗೆ ದಯಪಾಲಿಸಿರುವ ಈ ಅಪೂರ್ವ ಗ್ರಂಥವನ್ನು ಓದುವ ಹಾಗೂ ಓದಿ ತಿಳಿದು ಧನ್ಯರಾಗುವ ಅಪೂರ್ವ ಅವಕಾಶವನ್ನು ಇಂದು ಆ ಭಗವಂತ ನಮಗೆ ಕರುಣಿಸಿದ್ದಾನೆ. ಇಂತಹ ಅದ್ಭುತ ಜ್ಞಾನಶಕ್ತಿಯನ್ನು ಅರಿಯುವ ಸಾಮರ್ಥ್ಯ ನಮಗಿದೆಯೋ ಇಲ್ಲವೋ ನಮಗೇ ತಿಳಿಯದು. ಆದರೆ ನಮಗೆ ಒಂದು ವಿಚಾರ ಮಾತ್ರ ಸ್ಪಷ್ಟವಾಗಿ ತಿಳಿದಿದೆ. ಅದೇನೆಂದರೆ: ಭಗವಂತ ಭಕ್ತ ಪರಾಧೀನ. ಆತ ತನ್ನ ಭಕ್ತ ಕೇಳಿದ್ದನ್ನು ಇಲ್ಲಾ ಎನ್ನಲಾರ. ಹಾಗಾಗಿ ಆ ಭಗವಂತನಲ್ಲಿ “ಈ ಅತ್ಯದ್ಭುತವಾದ ಜ್ಞಾನವನ್ನು ಅರಿಯುವ ಶಕ್ತಿ ಕೊಡು” ಎಂದು ಬೇಡಿ, ಭಾಗವತವನ್ನು ಪ್ರವೇಶಿಸೋಣ.  
*******

No comments:

Post a Comment