Thursday, December 27, 2012

Shrimad BhAgavata in Kannada -Skandha-01 -Ch-01(10)


ಪ್ರಶಂಸೆ ಮತ್ತು ವಿಧಿ

ಮುಂದಿನ ಶ್ಲೋಕ ಗ್ರಂಥದ ಮಹತ್ವವನ್ನು ಹೇಳುವ ಶ್ಲೋಕ. ಇಲ್ಲಿ ಭಾಗವತವನ್ನು ಹಿಂದಿನವರು ಆಚರಿಸಿದ ವಿಧಾನವನ್ನು ಹೇಳಿ, ಅವರು ಪಡೆದ ಮಹಾಫಲವನ್ನು ಹೇಳಿ,  ಅದರ ಪ್ರಶಂಸೆಯ ಮೂಲಕ “ನೀವೂ ಕೂಡಾ ಅಂತಹ ಮಹಾಫಲವನ್ನು ಪಡೆಯಿರಿ” ಎಂದು ಒತ್ತುಕೊಟ್ಟು ಹೇಳುವ ಶ್ಲೋಕ.

ನಿಗಮಕಲ್ಪತರೋರ್ಗಳಿತಂ ಫಲಂ ಶುಕಮುಖಾದಮೃತದ್ರವಸಂಯುತಮ್ ।
ಪಿಬತ ಭಾಗವತಂ ರಸಮಾಲಯಂ ಮುಹುರಹೋ ರಸಿಕಾ ಭುವಿ ಭಾವುಕಾಃ          ॥೩॥  

ಭಾಗವತ ವೇದವೆಂಬ ಕಲ್ಪವೃಕ್ಷದಲ್ಲಿ ಅರಳಿದ ರಸಪೂರಿತವಾದ ಹಣ್ಣು. ಬ್ರಹ್ಮಾಂಡಪುರಾಣದಲ್ಲಿ ಹೇಳಿರುವಂತೆ: “ಧರ್ಮ ಪುಷ್ಪಸ್ತ್ವರ್ಥಪತ್ರಃ ಕಾಮಪಲ್ಲವ ಸಂಯುತಃ ।  ಮಹಾಮೋಕ್ಷ ಫಲೋ ವೃಕ್ಷೋ ವೇದೋSಯಂ ಸಮುದೀರಿತಃ”  ವೇದವೆಂಬ ಕಲ್ಪವೃಕ್ಷ  ಧರ್ಮವೆಂಬ ಪುಷ್ಪ, ಅರ್ಥವೆಂಬ ಎಲೆ ಮತ್ತು ಕಾಮ ಎನ್ನುವ ಚಿಗುರೆಲೆಯಿಂದ ಯುಕ್ತವಾಗಿದೆ. ಆದರೆ ಆ ವೃಕ್ಷದಲ್ಲಿ ಮಹಾಫಲವಾದ ಮೋಕ್ಷವನ್ನು ಕೊಡುವ ಹಣ್ಣುಗಳೂ ತುಂಬಿವೆ. ಇಂತಹ ಅಮೂಲ್ಯವಾದ ಹಣ್ಣುಗಳನ್ನು ಮರಹತ್ತಿ ಪಡೆಯಲು ಯೋಗ್ಯರಾದವರಿಗಾಗಿ ವೇದವ್ಯಾಸರು ವೇದವಿಭಾಗ ಮಾಡಿ ಕೊಟ್ಟರೆ, ಮರ ಹತ್ತಲು ಸಾಧ್ಯವಾಗದೇ ಇದ್ದವರಿಗಾಗಿ ಭಾಗವತ ಮತ್ತು ಮಹಾಭಾರತ ಎನ್ನುವ ಎರಡು ರಸಪೂರಿತ ಹಣ್ಣನ್ನು ಕಳಚಿ ಕೊಟ್ಟಿದ್ದಾರೆ.
ಯಾವಾಗಲೂ ಮರದಲ್ಲಿ ಅತ್ಯಂತ ರಸಪೂರಿತ ಮತ್ತು ಸಿಹಿಯಾಗಿರುವ ಹಣ್ಣನ್ನು ಗಿಳಿ ಮೊದಲು ಕುಕ್ಕಿ ತಿನ್ನುತ್ತದೆ. ಭಾಗವತವೆಂಬ ರಸಪೂರಿತ ಸಿಹಿ ಹಣ್ಣು ಶುಕಮುನಿಯೆಂಬ ಗಿಳಿ ಮುಟ್ಟಿದ, ವೇದವೆಂಬ ಕಲ್ಪವೃಕ್ಷದಲ್ಲಿ ಗಳಿತ, ಅತ್ಯಂತ ರಸಪೂರಿತ ಹಣ್ಣು. ವೇದವ್ಯಾಸರು ತಮ್ಮ ಹದಿನೇಳು ಪುರಾಣಗಳನ್ನು ‘ರೋಮಹರ್ಷಣ’ನಿಗೆ ಉಪದೇಶ ಮಾಡಿದರೆ, ಹದಿನೆಂಟನೇ ಪುರಾಣ ಭಾಗವತವನ್ನು ತನ್ನ ಮಗನಾದ ಶುಕಮುನಿಗೆ ಉಪದೇಶ ಮಾಡಿದರು. ಶುಕಮುನಿಯಂತಹ ಅಪರೋಕ್ಷ ಜ್ಞಾನಿಗಳು ಸವಿದ ಈ ಹಣ್ಣು ಅಮೃತದ್ರವ.
ಭಾಗವತ ಎನ್ನುವ ಗ್ರಂಥದಲ್ಲಿ ಭಗವದ್ ಭಕ್ತಿ ಎನ್ನುವ ರಸವನ್ನು ಕುಡಿಯಿರಿ ಎನ್ನುತ್ತಾರೆ ವ್ಯಾಸರು. ನಾವು ಭಾಗವತ ಗ್ರಂಥದಲ್ಲಿ ಪ್ರತಿಪಾಧ್ಯನಾದ ಭಗವಂತನ ಗುಣಗಳ ಆಸ್ವಾದರೂಪವಾದ ರಸವನ್ನು ನಿರಂತರ ಕುಡಿಯುತ್ತಿರಬೇಕು. ಕೆಲವರು ಎಷ್ಟು ದಿನ ಭಾಗವತ ಕೇಳಬೇಕು ಎನ್ನುವ ಪ್ರಶ್ನೆಯನ್ನು ಕೇಳುತ್ತಾರೆ. ಪರೀಕ್ಷಿತ ರಾಜ ಏಳು ದಿನ ಕೇಳಿರುವುದರಿಂದ ನಾವೂ ಕೂಡಾ ಏಳು ದಿನ ಕೇಳಬೇಕು ಎನ್ನುವವರಿದ್ದಾರೆ. ಆದರೆ ಭಾಗವತವನ್ನು ನಾವು ನಮ್ಮ ದೇಹದಲ್ಲಿ ಉಸಿರಿರುವಷ್ಟು ಕಾಲ ಕೇಳಬೇಕು.[ಪರೀಕ್ಷಿತ ಕೂಡಾ ತನ್ನ ಸಾವಿನ ತನಕ ಭಾಗವತ ಶ್ರವಣ ಮಾಡಿದ. ಆದರೆ ಆಗ ಅವನಲ್ಲಿದ್ದದ್ದು ಕೇವಲ ಏಳೇ ದಿನವಾದ್ದರಿಂದ ಆತ ಏಳು ದಿನ ಶ್ರವಣ ಮಾಡಿದ] ಸಂಸಾರ ಲಯವಾಗಿ ಮೋಕ್ಷಪ್ರಾಪ್ತಿಯಾಗುವ ತನಕವೂ(ಆ-ಲಯಂ) ನಾವು ಭಾಗವತವನ್ನು ನಿರಂತರ ಕೇಳಬೇಕು. ಒಮ್ಮೆ ಕೇಳಿದರೆ ಸಾಲದು, ಮತ್ತೆಮತ್ತೆ (ಮುಹುಃ)ಕೇಳಬೇಕು. ಆನಂದ-ಆಶ್ಚರ್ಯಪಟ್ಟು  ಈ ರಸಪಾನಮಾಡಬೇಕು. ಇದು ಅತಿಯಾಗಿ ಅಜೀರ್ಣವಾಗುವ ರಸವಲ್ಲ. ಇದರ ಅರ್ಥವ್ಯಾಪ್ತಿ ಅಪರಂಪಾರ. ಇದರಲ್ಲಿ ಭಗವತನನ್ನು ಕಂಡು-ಕೇಳಿ- ತಿಳಿದು ಅಚ್ಚರಿಪಡಿ(ಅಹೋ) ಎಂದಿದ್ದಾರೆ ವ್ಯಾಸರು.
ಭಾಗವತ ಶ್ರವಣ ಮಾಡುವವನು ಭಕ್ತಿರಸಗ್ರಹಣಶಕ್ತಿಯುಳ್ಳ ರಸಿಕನಾಗಿರಬೇಕು. ಭಗವಂತನ ಬಗೆಗೆ ಅನನ್ಯಭಕ್ತಿ ಬೆಳೆಸಿಕೊಂಡು ಪ್ರೀತಿಯಿಂದ ಅಧ್ಯಯನ ಮಾಡಬೇಕು. ನಿರಂತರ ಭಕ್ತಿರಸ ಬೆಳೆಸಿಕೊಳ್ಳಲು ನಮ್ಮಲ್ಲಿ “ನಾನು ಜ್ಞಾನ ಶಿಖೆಯನ್ನು ಏರಬೇಕು(ಎತ್ತರಕ್ಕೇರಬೇಕು)” ಎನ್ನುವ ಬಯಕೆ(ಭಾವುಕಾಃ) ಇರಬೇಕು. ಹೀಗೆ ಈ ಸಂಸಾರದಿಂದ ಲಯಹೊಂದಿ ಮೋಕ್ಷಗಳಿಸುವ ತನಕವೂ ಭಾಗವತದ ರಸಪಾನ ಮಾಡಿ ಎಂದಿದ್ದಾರೆ ಆಚಾರ್ಯರು.  

No comments:

Post a Comment