Wednesday, December 26, 2012

Shrimad BhAgavata in Kannada -Skandha-01 -Ch-01(9)


ಶ್ರೀಮದ್ಭಾಗವತೇ ಮಹಾಮುನಿಕೃತೇ ಕಿಂ ವಾSಪರೈರೀಶ್ವರಃ” ಇಲ್ಲಿ ಭಾಗವತವನ್ನು “ಶ್ರೀಮದ್ಭಾಗವತ” ಎಂದು ಕರೆದಿದ್ದಾರೆ. ಸಾಮಾನ್ಯವಾಗಿ ಗುರು-ಹಿರಿಯರನ್ನು, ದೇವತಾಸ್ಥಾನಗಳನ್ನು ‘ಶ್ರೀ’ ಸೇರಿಸಿ ಗೌರವ ಪೂರ್ವಕವಾಗಿ ಹೇಳಬೇಕು ಎನ್ನುವುದು ಸಂಪ್ರದಾಯ. ಇಲ್ಲಿ ಭಾಗವತ ಗ್ರಂಥವನ್ನು ‘ಶ್ರೀಮದ್ಭಾಗವತ’ ಎಂದು ‘ಶ್ರೀ’ ಸೇರಿಸಿ ಕರೆದಿದ್ದಾರೆ. ಇದಕ್ಕೆ ವಿಶೇಷ ಕಾರಣವಿದೆ. ವೇದವ್ಯಾಸರು ತಾನು ರಚಿಸಿದ ಮೊದಲ ಹದಿನೇಳು ಪುರಾಣಗಳ ಸಾರಸಂಗ್ರಹದ ಉಪಾಸನೆಯನ್ನು, ಜನರಿಗೆ ಕೊಡಬೇಕು ಎನ್ನುವ ಉದ್ದೇಶದಿಂದ ಭಾಗವತವನ್ನು ರಚಿಸಿದರು. ಇದು ಭಗವಂತನ ವಿಶೇಷ ಜ್ಞಾನಕ್ಕೋಸ್ಕರ, ತಾತ್ಪರ್ಯಪೂರ್ವಕವಾಗಿ  ಅವರು  ರಚಿಸಿಕೊಟ್ಟ ಗ್ರಂಥವಾದುದರಿಂದ, ಇದನ್ನು  “ಶ್ರೀಮದ್ಭಾಗವತ” ಎಂದು ಕರೆದಿದ್ದಾರೆ.
ಈ ಶ್ಲೋಕದಲ್ಲಿ ಭಾಗವತದ ಕರ್ತೃ: ‘ಮಹಾಮುನಿ’ ಎನ್ನಲಾಗಿದೆ. “ಮೌನಂ  ಮನನಂ ಮನನಯುಕ್ತೋ ಮುನಿಃ ಅಪರೋಕ್ಷಜ್ಞಾನಮ್ ಅಮೌನಮ್” [ಇದು ‘ಮುನಿ’ ಎನ್ನುವ ಪದಕ್ಕೆ ಹೃಶೀಕೇಶತೀರ್ಥರು ಆಚಾರ್ಯರಿಂದ ಕೇಳಿ ಬರೆದಿಟ್ಟಿರುವ ಶಬ್ದಾರ್ಥ]. ಮನನ ಮಾಡುವವನು ಮುನಿ. ಇಡೀ ವಿಶ್ವವನ್ನು, ತನ್ನ ಅಖಂಡ ಸ್ವರೂಪವನ್ನು ಮನನಮಾಡಬಲ್ಲ, ಓಂಕಾರದ ಪೂರ್ಣರಹಸ್ಯ ಬಲ್ಲ, ಭಗವಂತನ ಅವತಾರವಾದ ವೇದವ್ಯಾಸರೇ ಭಾಗವತದ ಕರ್ತೃ.  ಈ ರೀತಿ ಭಗವಂತನಿಂದ ನೇರವಾಗಿ ಬಂದಿರುವ ಈ ಮಹಾಪುರಾಣವನ್ನು ಕೇಳುವುದರಿಂದ, ಭಾಗವತ ಅಧ್ಯಯನ ಮಾಡುವುದರಿಂದ, ಸ್ವಯಂ ಭಗವಂತನೇ ನಿಮ್ಮ ಹೃದಯದಲ್ಲಿ ಬಂದು ನೆಲೆಸಿ, ನಿಮ್ಮ ಅರಿವಿಗೆ  ಗೋಚರನಾಗುತ್ತಾನೆ. ಈ ಮಹಾಫಲದ ಮುಂದೆ ಇತರ ಫಲವನ್ನು ಹೇಳಿ ಏನು ಪ್ರಯೋಜನ ಎಂದು ಕೇಳುತ್ತಾರೆ ವ್ಯಾಸರು. ಇಲ್ಲಿ ‘ಈಶ್ವರ’ ಎನ್ನುವ ಪದ ಬಳಕೆಯಾಗಿದೆ. ಬ್ರಹ್ಮಾದಿ ಸಕಲ ದೇವತೆಗಳು ಈಶರು. ಇಂತಹ ಈಶರಿಗೂ ಬಯಸಿದ ಫಲವನ್ನು(ವರ) ಕೊಡುವ ಭಗವಂತ ಈಶ್ವರ. ಭಾಗವತ ಇಂತಹ ಭಗವಂತನನ್ನು ನಮ್ಮ ಹೃದಯದಲ್ಲಿ ಸೆರೆಹಿಡಿಯತಕ್ಕಂತಹ ಪರಮಪವಿತ್ರ ಮಹಾಗ್ರಂಥ.
ಭಾಗವತ ಅಧ್ಯಯನ ಮಾಡುವವರ ಪ್ರಯತ್ನ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತಾ ಹೇಳುತ್ತಾರೆ: “ಸದ್ಯೋ ಹೃದ್ಯವರುಧ್ಯತೇSತ್ರ ಕೃತಿಭಿಃ ಶುಶ್ರೂಷುಭಿಸ್ತತ್ ಕ್ಷಣಾತ್”  ಎಂದು. ನಾವು ಶಾಸ್ತ್ರದ ನಿರಂತರ ಶ್ರವಣ-ಮನನ  ಮಾಡುವ ಪ್ರಯತ್ನಶೀಲರಾಗಿರಬೇಕು. ಜ್ಞಾನಕ್ಕೋಸ್ಕರ ನಿರಂತರ ಸಾಧನೆ ಮಾಡುತ್ತಾ,  “ಭಾಗವತ ಅಧ್ಯಯನ ಮಾಡಬೇಕು” ಎನ್ನುವ ಅದಮ್ಯ ಬಯಕೆಯನ್ನು ಬೆಳೆಸಿಕೊಂಡು, ಶ್ರದ್ಧಾ-ಭಕ್ತಿಯಿಂದ, ಹೃದಯದ ಬಾಗಲನ್ನು ತೆರೆದು, ಜ್ಞಾನ ಕೊಡುವವರ ಸೇವೆಯನ್ನು ಮಾಡುತ್ತಾ, ಭಾಗವತ ಅಧ್ಯಯನ ಮಾಡುವವರಿಗೆ ತತ್-ಕ್ಷಣದಲ್ಲಿ ಮಹಾಫಲ ದೊರೆಯುತ್ತದೆ, ಇಲ್ಲವೇ ಸಾಧನೆಗನುಗುಣವಾಗಿ  ಕಾಲಕ್ರಮದಲ್ಲಿ ಫಲಪ್ರಾಪ್ತಿಯಾಗುತ್ತದೆ.
ಹೀಗೆ ಎರಡನೇ ಶ್ಲೋಕ ಭಾಗವತವನ್ನು ವೇದವ್ಯಾಸರು ಏಕೆ ರಚಿಸಿದರು, ಇದರಲ್ಲಿರುವ ವಿಷಯವೇನು, ಇದರ ಅಧಿಕಾರಿ ಯಾರು ಮತ್ತು ಇದನ್ನು ಅಧ್ಯಯನ ಮಾಡುವುದರ ಫಲವೇನು ಎನ್ನುವುದನ್ನು ಸ್ಪಷ್ಟವಾಗಿ ನಮ್ಮ ಮುಂದೆ ತೆರೆದಿಟ್ಟಿದೆ. ಇಷ್ಟು ತಿಳಿಸಿದಮೇಲೆ ಸಂಬಂಧದ ಕುರಿತು ಇಲ್ಲಿ ವಿವರಿಸಿಲ್ಲ. ಅದನ್ನು ನಾವೇ  ಅರ್ಥ ಮಾಡಿಕೊಳ್ಳಬೇಕು. ನಮಗೆ ತಿಳಿದಂತೆ: ವಿಷಯ-ಭಗವಂತ, ಅಧಿಕಾರಿ-ಸಾಧಕ. ಆದ್ದರಿಂದ ವಿಷಯ-ಜ್ಞೇಯ ಮತ್ತು ಅಧಿಕಾರಿ ಜ್ಞಾತೃ. ಆದ್ದರಿಂದ ವಿಷಯಕ್ಕೂ ಅಧಿಕಾರಿಗೂ ಜ್ಞಾತೃ-ಜ್ಞೇಯ ಸಂಬಂಧ.  ಅದೇ ರೀತಿ ಪ್ರಯೋಜನ-ಧ್ಯೇಯ, ಭಗವಂತ-ದಾತೃ ಮತ್ತು ಅಧಿಕಾರಿಗಳು-ಪ್ರತಿಗ್ರಹಿತೃಗಳು. ಇದು ಇಲ್ಲಿರುವ ಸಂಬಂಧಗಳು.  ಹೀಗೆ ಪ್ರತಿಪಾಧ್ಯ, ವಿಷಯ, ಅಧಿಕಾರ, ಫಲವನ್ನು ತಿಳಿದುಕೊಂಡಾಗ ನಮಗೆ “ಕರೋತೀಶೋ ಮಹತ್ಫಲಮ್”-ಭಗವಂತನ ವಿಶೇಷ ಅನುಗ್ರಹವಾಗುತ್ತದೆ. ಇದನ್ನು ತಿಳಿದು ಮುಂದೆ ಗ್ರಂಥಾಧ್ಯಯನ ಮಾಡಿದರೆ ವಿಶೇಷ ಅನುಗ್ರಹದಿಂದ ವಿಶೇಷ ಅನುಸಂಧಾನ ನಮಗೆ ಸಾಧ್ಯ. 

No comments:

Post a Comment