Saturday, December 29, 2012

Shrimad BhAgavata in Kannada -Skandha-01 -Ch-01(12)


ಯಾನಿ ವೇದವಿದಾಂ ಶ್ರೇಷ್ಠೋ ಭಗವಾನ್ ಬಾದರಾಯಣಃ ।
ಅನ್ಯೇ ಚ ಮುನಯಃ ಸೂತ ಪರಾವರವಿದೋ ವಿದುಃ                ॥೭॥

ವೇತ್ಥ ತ್ವಂ ಸೌಮ್ಯ ತತ್ ಸರ್ವಂ ತತ್ತ್ವತಸ್ತದನುಗ್ರಹಾತ್ ।
ಬ್ರೂಯುಃ ಸ್ನಿಗ್ಧಸ್ಯ ಶಿಷ್ಯಸ್ಯ ಗುರವೋ ಗುಹ್ಯಮಪ್ಯುತ                ॥೮॥

ಇಲ್ಲಿ ಋಷಿಗಳು ಸೂತರನ್ನು ಕುರಿತು ಹೇಳುವ ಮಾತನ್ನು ಈ ಶ್ಲೋಕದ ಮೇಲ್ನೋಟದ ಅರ್ಥದಲ್ಲಿ ನೋಡಿದರೆ  ಸ್ವಲ್ಪ ಗಾಬರಿಯಾಗುತ್ತದೆ! ಮೇಲ್ನೋಟದಲ್ಲಿ ನೋಡಿದರೆ: “ವೇದವ್ಯಾಸರು ಮತ್ತು ಈ ಕಾಲದ ಎಲ್ಲಾ ಋಷಿಗಳು ಏನೇನು ತಿಳಿದಿದ್ದಾರೆ, ಅದೆಲ್ಲವೂ ತದ್ವತ್ತಾಗಿ, ಪೂರ್ಣಪ್ರಮಾಣದಲ್ಲಿ  ತಮಗೆ ತಿಳಿದಿದೆ” ಎಂದು ಹೇಳಿದಂತೆ ಕಾಣುತ್ತದೆ. ಈ ರೀತಿ ಹೊಗಳಿದರೆ ಅದು ಅತಿಶಯೋಕ್ತಿಯಾಗುತ್ತದೆ. ಏಕೆಂದರೆ ಸ್ವಯಂ ಭಗವಂತನ ಅವತಾರವಾದ ವೇದವ್ಯಾಸರಿಗೆ ತಿಳಿದ ಎಲ್ಲಾ ವಿಚಾರ ಇನ್ಯಾರಿಗೂ ತದ್ವತ್ತಾಗಿ ತಿಳಿದಿರಲು ಸಾಧ್ಯವೇ ಇಲ್ಲ. ಆದ್ದರಿಂದ ಇದು ಈ ಶ್ಲೋಕದಲ್ಲಿನ ವಸ್ತುಸ್ಥಿತಿ ಅಲ್ಲ. ಈ ಶ್ಲೋಕವನ್ನು ಎಚ್ಚರಿಕೆಯಿಂದ ನೋಡಿದಾಗ ಅಲ್ಲಿರುವ ನಿಜಾರ್ಥ ತಿಳಿಯುತ್ತದೆ. “ಯಾನಿ ವೇದ, ವಿದಾಂ ಶ್ರೇಷ್ಟಃ, ಭಗವಾನ್ ಬಾದರಾಯಣಃ”: ಜ್ಞಾನಿಗಳಲ್ಲಿ ಶ್ರೇಷ್ಟರು ಭಗವಾನ್ ವೇದವ್ಯಾಸರು[ಬಾದರಾಯಣರು].  ಅವರು ಏನನ್ನು ತಿಳಿದಿದ್ದಾರೋ-ಆ ಜ್ಞಾನದ ತುಣುಕನ್ನೇ  ಭಗವಂತನನ್ನು ಬಲ್ಲ ಹಾಗೂ ಸಮಸ್ತವಿಶ್ವವನ್ನು ಅದರ ತರತಮಭಾವದಿಂದ ತಿಳಿದ ಋಷಿಗಳು[ಪರಾವರವಿದೋ ವಿದುಃ] ತಿಳಿದಿದ್ದಾರೆ. ಅಂತಹ ಜ್ಞಾನವನ್ನು ವೇದವ್ಯಾಸರಿಂದ ನೇರ ಉಪದೇಶ ಪಡೆದ ತಾವು, ವೇದವ್ಯಾಸರ ಅನುಗ್ರಹದಿಂದ, ಅವರು ಕೊಟ್ಟ ಜ್ಞಾನವನ್ನು ಪೂರ್ಣವಾಗಿ ಅರಿತಿದ್ದೀರಿ. ನೀವು ವ್ಯಾಸರ ಪ್ರೀತಿಯ ಶಿಷ್ಯನಾಗಿರುವುದರಿಂದ ಅವರು ನಿಮ್ಮಲ್ಲಿ ಅನೇಕ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ತಮಗೆ ತಿಳಿದ ಪುರಾಣದ ರಹಸ್ಯ ನಮಗೆ ತಿಳಿಯದು. ಆದ್ದರಿಂದ ತಾವು ಆ ಜ್ಞಾನವನ್ನು ನಮಗೆ ಹೇಳಬೇಕು ಎಂದು ಋಷಿಗಳು ಉಗ್ರಶ್ರವಸ್ಸರಲ್ಲಿ ಕೇಳಿಕೊಳ್ಳುತ್ತಾರೆ.
ಇಲ್ಲಿ ‘ಸೌಮ್ಯ’ ಎನ್ನುವ ವಿಶೇಷಣ ಬಳಸಲಾಗಿದೆ. ಸೌಮ್ಯ ಎಂದರೆ ಸಾತ್ತ್ವಿಕಸ್ವಭಾವದವರು ಎನ್ನುವುದು ಒಂದರ್ಥವಾದರೆ ಈ ಪದವನ್ನು ಬಿಡಿಸಿ ನೋಡಿದರೆ: ಉಮಾ ಎಂದರೆ ಉತ್ಕೃಷ್ಟವಾದ ಜ್ಞಾನ ಅಥವಾ ಭಗವದ್ ವಿಷಯಿಕವಾದ ಅರಿವು. ಇಂತಹ ಅರಿವು ಉಳ್ಳವರು ಸೋಮರು. ವಾಯುದೇವರನ್ನು ಸೋಮ ಎಂದೂ ಕರೆಯುತ್ತಾರೆ. ಇಂತಹ ಗುಣ ಇರುವಿಕೆ ಸೌಮ್ಯ.

ತತ್ರ ತತ್ರಾಂಜಸಾSSಯುಷ್ಮನ್ ಭವತಾ ಯದ್ ವಿನಿಶ್ಚಿತಮ್ ।
ಪುಂಸಾಮೇಕಾಂತತಃ ಶ್ರೇಯಸ್ತನ್ನಃ ಶಂಸಿತುಮರ್ಹಸಿ                         ॥೯॥

ಪ್ರಾಯೇಣಾಲ್ಪಾಯುಷೋ ಮರ್ತ್ಯಾಃ ಕಲಾವಸ್ಮಿನ್ ಯುಗೇ ಜನಾಃ ।
ಮಂದಾಃ ಸುಮಂದಮತಯೋ ಮಂದಭಾಗ್ಯಾ ಹ್ಯುಪದ್ರುತಾಃ    ॥೧೦॥

ಈ ಶ್ಲೋಕದಲ್ಲಿ ಋಷಿಗಳು ತಮ್ಮ ಅಭಿಲಾಷೆಯನ್ನು ಸೂತರ ಮುಂದಿಡುತ್ತಾ ಹೇಳುತ್ತಾರೆ: “ತಾವು ಎಲ್ಲಾ ಪುರಾಣ, ಇತಿಹಾಸ ಹಾಗೂ ಧರ್ಮಶಾಸ್ತ್ರಗಳನ್ನು ಓದಿದವರು. ಅಂತಹ ಗ್ರಂಥಗಳಲ್ಲಿ ಮನುಷ್ಯನ ಬದುಕಿಗೆ ಅವಶ್ಯವಾಗಿ ಬೇಕಾಗಿರುವ, ಆಯಾ ಗ್ರಂಥಗಳ ಸಾರವನ್ನು ನಮಗೆ ತಿಳಿಸಿ” ಎಂದು. ಇಡೀ ಜೀವಮಾನದಲ್ಲಿ ಮಾನವನು ತಿಳಿಯಲೇ ಬೇಕಾದ ಅತ್ಯಂತ ಶ್ರೇಯಸ್ಕರ ವಿಷಯವನ್ನು, ಈ ಜಗತ್ತಿನ ಶ್ರೇಯಸ್ಸಿಗೋಸ್ಕರ ಹೇಳಿ ಎಂದು ಶೌನಕಾದಿಗಳು ಸೂತರಲ್ಲಿ ಕೇಳಿಕೊಳ್ಳುತ್ತಾರೆ. ಋಷಿಗಳ ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ: ಅವರು ತಮಗಾಗಿ ಈ ಪ್ರಶ್ನೆಯನ್ನು ಸೂತರ ಮುಂದಿಟ್ಟಿಲ್ಲ. ಬದಲಾಗಿ ಜಗತ್ತಿನಲ್ಲಿ ಗೊತ್ತಿಲ್ಲದವರಿಗೆ ಗೊತ್ತಾಗಲಿ ಎಂದು. ಈ ಪ್ರಶ್ನೋತ್ತರ ಸಂವಾದ ದಾಖಲೆಯಾಗಿ ಮುಂದಿನ ಜನಾಂಗಕ್ಕೆ ತಿಳಿಯಲಿ ಎನ್ನುವ ಉದ್ದೇಶದಿಂದ ಈ ಮೇಲಿನ ಬೇಡಿಕೆಯನ್ನು ಸೂತರ ಮುಂದಿಡುತ್ತಾರೆ.  ತಾವು ಏಕೆ ಈ ರೀತಿ ಕೇಳುತ್ತಿದ್ದೇವೆ ಎನ್ನುವುದನ್ನು ಹೇಳುತ್ತಾ ಋಷಿಗಳು ಹೇಳುತ್ತಾರೆ: ಇದು ಕಲಿಯುಗ. ಕಲಿಯುಗದ ಜನರು ಹೆಚ್ಚಾಗಿ ಅಲ್ಪಾಯುಷಿಗಳು. ಜನರ ಪ್ರವೃತ್ತಿ ಮತ್ತು ಬುದ್ಧಿ ಕಲಿಯುಗದಲ್ಲಿ ಮಂದ. ಒಂದು ವೇಳೆ ಬುದ್ಧಿ ಚುರುಕಾಗಿದ್ದರೂ ಕೂಡಾ, ಅಲ್ಲಿ ಯಾವುದೋ ಸಾಮಾಜಿಕ ತೊಂದರೆಯಿರುತ್ತದೆ. ಅದಕ್ಕಾಗಿ, ಜ್ಞಾನಸಾರವನ್ನು ತಾವು ಹೇಳಬೇಕು ಎಂದು ಋಷಿಗಳು ಉಗ್ರಶ್ರವಸ್ಸರಲ್ಲಿ ಕೇಳಿಕೊಂಡು ತಮ್ಮ ಆರು ಪ್ರಶ್ನೆಗಳನ್ನು ಅವರ ಮುಂದಿಡುತ್ತಾರೆ. 

No comments:

Post a Comment