Saturday, December 22, 2012

Shrimad BhAgavata in Kannada -Skandha-01 CH-01 (4)

ಸೃಷ್ಟಿಯ ಆದಿಯಲ್ಲಿ ಭಗವಂತ ಜೀವರಲ್ಲಿ ಎಲ್ಲರಿಗಿಂತ ಶ್ರೇಷ್ಠ ಜೀವ ಚತುರ್ಮುಖಬ್ರಹ್ಮನಿಗೆ ವೇದವನ್ನು ಉಪದೇಶಿಸಿದ. ತನ್ನ ಪ್ರಥಮ ಪುತ್ರ ಚತುರ್ಮುಖನಿಗೆ ಹೃದಯಪೂರ್ವಕವಾಗಿ, ಪೂರ್ಣ ಅರ್ಥವಾಗುವಂತೆ ಭಗವಂತ ವೇದವನ್ನು ಉಪದೇಶಿಸಿದ ಎನ್ನುವುದನ್ನು ಇಲ್ಲಿ ‘ಹೃದಾ’ ಎನ್ನುವ ವಿಶೇಷಣ ಎತ್ತಿ ಹೇಳುತ್ತದೆ. ಋಗ್ವೇದದಲ್ಲಿ ಹೇಳುವಂತೆ: “ಕಶ್ಛಂದಸಾಂ ಯೋಗಮಾ ವೇದ ಧೀರಃ” ೧೦.೧೧೪.೦೯   ಅಂದರೆ ಇಲ್ಲಿ  “ವೇದಗಳ ಅರ್ಥವನ್ನು ಪೂರ್ಣ ಬಲ್ಲೆ ಎಂದು ಹೇಳುವ ಧೀರ ಯಾರಿದ್ದಾರೆ” ಎಂದು ವೇದವೇ ಪ್ರಶ್ನಿಸುತ್ತಿದೆ ಮತ್ತು ಹೇಳುತ್ತದೆ: “ವೇದಾರ್ಥವನ್ನು ಬ್ರಹ್ಮ-ವಾಯು(ಕಃ) ತಿಳಿದಾರು” ಎಂದು.
ಸರ್ವ ಶ್ರುತಿಗಳು, ತರ್ಕಗಳು, ಎಲ್ಲವೂ ಭಗವಂತನನ್ನೇ ಹೇಳುತ್ತವೆ, ಆದರೆ ಅವನನ್ನು ತಿಳಿಯಲು ಸಾಧ್ಯವಾಗುವುದಿಲ್ಲವಲ್ಲಾ  ಎಂದರೆ ಇಲ್ಲಿ ಹೇಳುತ್ತಾರೆ:  “ಮುಹ್ಯಂತಿ ಯಂ ಸೂರಯಃ” ಎಂದು. ಭಗವಂತನ ಬಗ್ಗೆ ಜ್ಞಾನಿ(ಸೂರಿ)ಗಳೂ ಕೂಡಾ ಗೊಂದಲಕ್ಕೊಳಗಾಗುತ್ತಾರೆ. ಅಷ್ಟೇ ಅಲ್ಲ, ಜ್ಞಾನಿಗಳೊಂದಿಗೆ ದೇವತೆಗಳೂ ಕೂಡಾ ಒಮ್ಮೊಮ್ಮೆ ವಿಸ್ಮರಣಕ್ಕೊಳಗಾಗಿ ಭಗವಂತನನ್ನು ಮರೆತುಬಿಡುತ್ತಾರೆ! ಹೀಗಾಗಿ ಭಗವಂತನನ್ನು ತಿಳಿಯಲು ಹಾಗೂ ಎಂದೂ ಆತನನ್ನು ಮರೆಯದೇ ಇರಲು ನಾವು ಆತನಲ್ಲೇ ಶರಣಾಗಬೇಕು. ಶಾಸ್ತ್ರವೇದ್ಯ ಭಗವಂತನ ಕರುಣೆ ಇಲ್ಲದೇ ಆತನನ್ನು ಅರಿಯಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ಹೇಳಬೇಕೆಂದರೆ: ಭಗವಂತ ಆದಿಜೀವನಾದ ಚತುರ್ಮುಖನಿಗೆ ಸಮಸ್ತ ವೇದವಾಙ್ಮಯವನ್ನು ಕೊಟ್ಟ. ನಾವು ಈ ರೀತಿ ಭಗವಂತನಿಂದ ಇಳಿದುಬಂದ ವೇದದಿಂದ,  ವೇದವೇದ್ಯನಾದ ಭಗವಂತನನ್ನು ವೇದದ ಒಂದೊಂದು ಪದದಿಂದಲೂ ಸಮನ್ವಯಮಾಡಿ ಅರಿತುಕೊಳ್ಳಬೇಕು. ತರ್ಕದಿಂದಲೂ ಆತನ ಅಸ್ತಿತ್ವವನ್ನು ತಿಳಿದುಕೊಳ್ಳಬೇಕು. ಭಗವಂತ ಈ ಜಗತ್ತಿನ ಸರ್ವಕಾರಣ, ಸರ್ವಜ್ಞ, ಸರ್ವಶಕ್ತ, ಸರ್ವತಂತ್ರ-ಸ್ವತಂತ್ರ ಆತ. ಇಂತಹ ಭಗವಂತನನ್ನು ಆತನ ಕರುಣೆಯಿಂದ ಅರಿಯಬೇಕು ಎನ್ನುವುದು ಭಾಗವತದ ಪ್ರಥಮ ಶ್ಲೋಕದ ಮೊದಲ ಎರಡು ಪಾದದ ಸಾರ.  

No comments:

Post a Comment