Monday, February 4, 2013

Shrimad BhAgavata in Kannada -Skandha-01-Ch-04(03)


ಮಹಾಭಾರತ ರಚನೆ

ವೇದವಿಭಾಗ ಮಾಡಿ ತೃಪ್ತಿಯಾಗದೇ ವ್ಯಾಸರು ಭಾರತ ರಚನೆ ಮಾಡಿದರು ಎಂದಾಗ, ಸಾಮಾನ್ಯವಾಗಿ, “ಮಹಾಭಾರತದಲ್ಲಿ ವೇದದಲ್ಲಿ ಹೇಳದೇ ಇರುವ ವಿಚಾರ ಅಡಗಿದೆಯೋ” ಎನ್ನುವ  ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ವ್ಯಾಸರೇ ನೀಡಿರುವುದನ್ನು ಮುಂದಿನ ಶ್ಲೋಕದಲ್ಲಿ ಕಾಣಬಹುದು.

ಸ್ತ್ರೀ ಶೂದ್ರ ಬ್ರಹ್ಮ(/ದ್ವಿಜ)ಬಂಧೂನಾಂ ತ್ರಯೀ ನ ಶ್ರುತಿಗೋಚರಾ
ಕರ್ಮಶ್ರೇಯಸಿ ಮೂಢಾನಾಂ ಶ್ರೇಯ ಏವಂ ಭವೇದಿಹ
ಇತಿ ಭಾರತಮಾಖ್ಯಾನಂ ಕೃಪಯಾ ಮುನಿನಾ ಕೃತಮ್೨೪

ಈ ಶ್ಲೋಕವನ್ನು ಆಳವಾಗಿ ವಿಶ್ಲೇಷಿಸದೇ ಇದ್ದರೆ, ಇಲ್ಲಿ ಬರಿಯ ಗೊಂದಲ ಹಾಗೂ ವಿವಾದ  ಹುಟ್ಟುವ ಸಾಧ್ಯತೆ ಇದೆ. ಇಲ್ಲಿ:  “ಸ್ತ್ರೀಯರಿಗೆ, ಶೂದ್ರರಿಗೆ ಮತ್ತು ಬ್ರಹ್ಮಬಂಧುಗಳಿಗೆ ವೇದ ಮುಟ್ಟುವುದಿಲ್ಲ, ಅದಕ್ಕಾಗಿ ಅವರಿಗೆ ಮುಟ್ಟುವಂತೆ ಒಂದು ಅಧ್ಯಾತ್ಮ ಸಾಹಿತ್ಯ ಕೊಡಬೇಕು ಎಂದು ಬಯಸಿ, ವ್ಯಾಸರು ಮಹಾಭಾರತ ರಚನೆ ಮಾಡಿದರು” ಎನ್ನಲಾಗಿದೆ. ಇದನ್ನು ನಾವು ಆಳವಾಗಿ ಚಿಂತನೆ ಮಾಡಿ, ಶ್ಲೋಕದಲ್ಲಿ ಹೇಳಿರುವ ಸತ್ಯ ಸಂದೇಶವನ್ನು ತಿಳಿಯಬೇಕು.
ಅಧ್ಯಾತ್ಮ ಜ್ಞಾನ ಎಲ್ಲರಿಗೂ ಮುಟ್ಟಬೇಕು. ಆದರೆ ಇಲ್ಲಿ ಕೆಲವರಿಗೆ ಅಧಿಕಾರ ಇಲ್ಲಾ ಎಂದು ಏಕೆ ಹೇಳಿದರು ಎನ್ನುವುದನ್ನು ನಾವು ಮೊದಲು ಅರಿಯಬೇಕು. ಯಾವುದೇ ಒಂದು ಅಧ್ಯಯನಕ್ಕೆ ಲಿಂಗ-ಜಾತಿ ಮಾನದಂಡವಲ್ಲ. ಜ್ಞಾನಕ್ಕೆ ಮಾನದಂಡ ಅರ್ಹತೆ. ವಿದ್ಯೆಯನ್ನು ಅರ್ಹತೆ ಇಲ್ಲದವರಿಗೆ ಹೇಳಿದರೆ ಅದು ದುರುಪಯೋಗ ಅಥವಾ ನಿರುಪಯೋಗವಾಗುತ್ತದೆ. ಹೀಗಾಗಿ ಅರ್ಹತೆಯನ್ನು ಪರೀಕ್ಷಿಸದೇ ಯಾವುದೇ ವಿದ್ಯೆಯನ್ನು ಕೊಡುವ ಕ್ರಮವಿಲ್ಲ. ವೇದ ಕೂಡಾ ಅಷ್ಟೇ. ಗ್ರಹಣ ಮಾಡುವ ಸಾಮರ್ಥ್ಯ ಇದ್ದವರಷ್ಟೇ ವೇದದ ಅಧಿಕಾರಿಗಳು.
ಇಲ್ಲಿ “ಸ್ತ್ರೀಯರಿಗೆ ವೇದವನ್ನು ಗ್ರಹಣ ಮಾಡುವ ಸಾಮರ್ಥ್ಯ ಇಲ್ಲವೇ?” ಎನ್ನುವ  ಪ್ರಶ್ನೆ ಎಲ್ಲರಿಗೂ ಬರುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ನಾವು ಇತಿಹಾಸವನ್ನು ನೋಡಬೇಕಾಗುತ್ತದೆ. ಹಿಂದೆ ಸ್ತ್ರೀಯರಲ್ಲಿ ಎರಡು ವರ್ಗವಿತ್ತು. ೧. ವೇದಾಧ್ಯಯನಕ್ಕೋಸ್ಕರ ಮದುವೆಯಾಗದೇ ಇರುತ್ತಿದ್ದ ‘ಬ್ರಹ್ಮವಾದಿನಿ’ಯರು ಹಾಗೂ ೨. ಪ್ರಾರ್ಥಮಿಕ ಅಧ್ಯಯನದ ನಂತರ ಮದುವೆಯಾಗುತ್ತಿದ್ದ ‘ಸತ್ಯವಧು’ಗಳು.  ಬ್ರಹ್ಮವಾದಿನಿಯರು ಸಾಮಾಜಿಕವಾಗಿ ಅತಂತ್ರರಾಗಿರುತ್ತಿದ್ದರು. ರಕ್ಷಣೆ ಇಲ್ಲದ ಹೆಣ್ಣನ್ನು ಸಮಾಜ ಕೆಟ್ಟದೃಷ್ಟಿಯಿಂದ ಕಾಣುವ ಅಪಾಯ ಅಲ್ಲಿತ್ತು. ವೇದವ್ಯಾಸರೇ ಭಾರತದಲ್ಲಿ ಹೇಳುವಂತೆ: “ಹೇಗೆ ಮಾರ್ಗದಲ್ಲಿ ಬಿದ್ದಿರುವ ಮಾಂಸದ ತುಂಡನ್ನು ಹದ್ದು-ನಾಯಿಗಳು ನೋಡುತ್ತಾವೋ ಹಾಗೇ,  ರಕ್ಷಣೆ ಇಲ್ಲದ ಹೆಣ್ಣನ್ನು ಸಮಾಜ ಕಾಣುತ್ತದೆ” ಎಂದು. ಇದಕ್ಕಾಗಿ ಸ್ತ್ರೀಯರು ಮದುವೆಯಾಗುವುದೇ ಉತ್ತಮ ಎನ್ನುವ ಸಾಮಾಜಿಕ ಪದ್ಧತಿ ಜಾರಿಗೆ ಬಂತು.
ಇಲ್ಲಿ ನಮಗೆ ಮುಂದೆ ಕಾಡುವ ಪ್ರಶ್ನೆ ಏನೆಂದರೆ: “ಮದುವೆಯಾದ ಹೆಣ್ಣು ಏಕೆ ವೇದಾಧ್ಯಯನ ಮಾಡಬಾರದು” ಎನ್ನುವುದು. ಸೂಕ್ಷ್ಮವಾಗಿ ಈ ವಿಚಾರವನ್ನು ನಾವು ವಿಶ್ಲೇಷಿಸಿದರೆ ನಮಗೆ ತಿಳಿಯುವುದೇನೆಂದರೆ: “ಗರ್ಭಕೋಶ” ಎನ್ನುವ ವಿಶೇಷ ಭಾಗ ಪ್ರಕೃತಿ ಕೇವಲ ಹೆಣ್ಣಿಗೆ ನೀಡಿದೆ. ಆದ್ದರಿಂದ ಸಮಾಜಕ್ಕೆ ಒಂದು ಉತ್ತಮ ಸಂತಾನವನ್ನು ಹೆತ್ತು ಕೊಡುವ ಜವಾಬ್ಧಾರಿ ಹೆಣ್ಣಿನಲ್ಲಿದೆ. ಅತಿಯಾದ ಮಾನಸಿಕ ಒತ್ತಡಕ್ಕೊಳಗಾದ ಹೆಣ್ಣಿನ ಗರ್ಭಕೋಶ ದುರ್ಬಲವಾಗುವ ಅಪಾಯವಿದೆ ಎಂದು ಇಂದಿನ ವೈದ್ಯಶಾಸ್ತ್ರ ಹೇಳುತ್ತದೆ. ವೇದಾಧ್ಯಯನ ಹಾಗೂ ಮಗುವಿನ ಪಾಲನೆ ಹೆಣ್ಣಿಗೆ ಎರಡು ದೋಣಿಯಲ್ಲಿ ಕಾಲಿಟ್ಟ ಪಯಣ. ಇದು ಆಕೆಯಲ್ಲಿ ಜನಿಸುವ ಮಗುವಿನ ಮೇಲೆ ಪ್ರಭಾವಬೀರಬಹುದು. “ಸಮಾಜಕ್ಕೆ ಉತ್ತಮ ಸಂತಾನ ಕೊಡುವುದು ಹೆಣ್ಣಿನ ಕರ್ತವ್ಯ ಹಾಗೂ ಅದು ವೇದಾಧ್ಯಯನ ಮಾಡುವುದಕ್ಕಿಂತ ಹೆಚ್ಚಿನ ಪುಣ್ಯದಕೆಲಸ” ಎಂದು ಶಾಸ್ತಕಾರರು ಹೇಳುತ್ತಾರೆ. ಇದು ಪ್ರಕೃತಿಯ ಕೊಡುಗೆಯನ್ನು ನಾವು ಜೀವನದಲ್ಲಿ ಹೊಂದಾಣಿಕೆ ಮಾಡಿಕೊಂಡು ಬದುಕುವ ವಿಧಾನ. ಇದನ್ನು ಬಿಟ್ಟು ಇಲ್ಲಿ ಭೇದಭಾವ, ಮೇಲು-ಕೀಳು ಯಾವುದೂ ಇಲ್ಲ.
ಹೆಣ್ಣಿಗೆ ವೇದಾಧಿಕಾರ ಇಲ್ಲ ಎಂದಿಲ್ಲ. ಏಕೆಂದರೆ ಅವರು  “ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ” ಎಂದು ಪ್ರತಿಜ್ಞೆ ಮಾಡುವವರು. ಗಂಡ ಮಾಡುವ ಧರ್ಮ ಕಾರ್ಯದಲ್ಲಿ ಸ್ತ್ರೀಗೆ ಸಹಭಾಗವಿದೆ. ಇವೆಲ್ಲವೂ ವೈದಿಕವಾಗಿಯೇ ನಡೆಯುತ್ತದೆ ಮತ್ತು ಅಲ್ಲಿ ಸ್ತ್ರೀ ಕುಳಿತು ಸಂಕಲ್ಪ ಮಾಡುತ್ತಾಳೆ. ಆದರೆ “ವೇದಾಧ್ಯಯನಕ್ಕೆ ಬದುಕನ್ನು ಮೀಸಲಿಟ್ಟು ಸಾಂಸಾರಿಕ ಜೀವನವನ್ನು ನೀರಸ ಮಾಡಿಕೊಳ್ಳಬೇಡಿ” ಎನ್ನುವುದು ಹಿಂದಿನವರ ಕಿವಿಮಾತು. ಕೆಲವು ಅಸಾಧಾರಣ ವ್ಯಕ್ತಿತ್ವವುಳ್ಳ ಸ್ತ್ರೀಯರಿದ್ದಾರೆ. ವೇದ ಮಂತ್ರವನ್ನು ಕಂಡ ಋಷಿಕೆಯರೂ ಇದ್ದಾರೆ. ಆದರೆ ಸ್ತ್ರೀಯರ ಮೇಲೆ ವೇದಾಧ್ಯಯನದ ಒತ್ತಡ/ಹೇರಿಕೆ ನಿಷಿದ್ಧ.
ಭಗವಂತನ ಸೃಷ್ಟಿಕ್ರಿಯೆಯ ಮೂಲಸಾಧನ ಹೆಣ್ಣು. ಆತ ತನ್ನ ಸೃಷ್ಟಿಕ್ರಿಯೆಗೆ ನಮ್ಮನ್ನು ಮಾಧ್ಯಮವಾಗಿ ಬಳಸುತ್ತಾನೆ ಎನ್ನುವುದು ಹೆಣ್ಣಿಗೆ ಹೆಮ್ಮೆಪಡುವ ಸಂಗತಿ. ಅಂತಹ ಶ್ರೇಷ್ಠ ಕಾರ್ಯ ಮಾಡಲು ಇಂತಹ ಕೆಲವು ನಿಯಮಗಳನ್ನು ಶಾಸ್ತ್ರ ಹೇಳುತ್ತದೆ.  ದುರ್ಬಲವಾದ ಮಗುವನ್ನು ಕೊಡುವ ತಾಯಿಯಾಗಬಾರದು ಎನ್ನುವ ಉದ್ದೇಶದಿಂದ, ಸ್ತ್ರೀಯರಿಗೆ ಬಲವಂತದ ಉಚ್ಛಶಿಕ್ಷಣವನ್ನು ಶಾಸ್ತ್ರ ನಿಷೇಧಿಸುತ್ತದೆ. ಎರಡು ದೋಣಿಯಲ್ಲಿ ಕಾಲಿಟ್ಟು ಮಾಡುವ ಪಯಣ ಎಂದೂ ಶ್ರೇಯಸ್ಕರವಲ್ಲ. ಅಲ್ಲಿ ಒಂದೇ ನಮ್ಮ ಸಂತಾನಕ್ಕೆ ಅಥವಾ ನಮಗೇ ಅನ್ಯಾಯವಾಗುವ ಸಾಧ್ಯತೆ ಹೆಚ್ಚು. ಇವು ಜೀವನದ ಅನುಭವದ ಮಾತೇ ಹೊರತು, ಪಕ್ಷಪಾತದ ಹೇಳಿಕೆಗಳಲ್ಲ.
ವೇದಸಂಸ್ಕೃತ ಅತ್ಯಂತ ಭಿನ್ನ. ಸಂಸ್ಕೃತ ಭಾಷೆಯನ್ನು ಚನ್ನಾಗಿ ಬಲ್ಲ ಪಂಡಿತರಿಗೇ ವೇದ ಅರ್ಥವಾಗುವುದಿಲ್ಲ. ವೇದದ ಅಂತರಂಗ, ಅದರಲ್ಲಿರುವ ಅಧ್ಯಾತ್ಮ ರಹಸ್ಯ ಅತ್ಯಂತ ಗುಹ್ಯ. ಹೀಗಾಗಿ ವೇದದ ಮೇಲ್ನೋಟದ ಅರ್ಥ ತಿಳಿಯಲಿಕ್ಕೇ ಒಂದು ಜನ್ಮ ಸಾಲದು. ಆದ್ದರಿಂದ ಇಡೀ ಜೀವನವನ್ನು ವೇದಾಧ್ಯಯನಕ್ಕೆ ಮುಡಿಪಾಗಿಡಲು ಬದ್ಧರಾದವರು ಮಾತ್ರ ವೇದಾಧ್ಯಯನಕ್ಕೆ ಕೈಹಾಕಬೇಕು. ಹಾಗೆ ಅಧ್ಯಯನ ಮಾಡಲು ಬ್ರಾಹ್ಮಣ್ಯದ ಅರ್ಹತೆ ಬಹಳ ಮುಖ್ಯ. ಗೀತೆಯಲ್ಲಿ ಹೇಳುವಂತೆ: ಶಮಃ ದಮಃ ತಪಃ ಶೌಚಂ ಕ್ಷಾಂತಿ ಆರ್ಜವಮ್ ಏವ ಚ । ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ೧೮-೪೨ –– ಭಗವಂತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ  ಮತ್ತು ಆಸ್ತಿಕತೆ- ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು. ಈ ಎಲ್ಲಾ ಅರ್ಹತೆಗಳು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಎಲ್ಲರಿಗೂ ಬರಬೇಕೆಂದೇನೂ ಇಲ್ಲ. ಆ ರೀತಿ ಬ್ರಾಹ್ಮಣ್ಯದ ಅರ್ಹತೆ ಇಲ್ಲದ, ಆದರೆ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ‘ಬ್ರಹ್ಮಬಂಧು’ಗಳಿಗಾಗಿ, ಸದಾ ಸೇವಾ ಮಾರ್ಗದಲ್ಲಿ ನಿರತರಾಗಿರುವ ಶೂದ್ರವರ್ಣದವರಿಗಾಗಿ ಮತ್ತು ಸ್ತ್ರೀಯರಿಗಾಗಿ  ವ್ಯಾಸರು  ಮಹಾಭಾರತ ರಚನೆ ಮಾಡಿದರು. ಏನು ಮಾಡಬೇಕು-ಏನು ಮಾಡಬಾರದು ಎಂದು ಅರಿಯದೇ ತೊಳಲಾಡುತ್ತಿರುವ ಜನರಿಗೆ, ಒಂದು ಶ್ರೇಯಸ್ಸಿನ ಮಾರ್ಗ ತೋರಿಸುವುದು ವ್ಯಾಸರ ಭಾರತ ರಚನೆಯ ಮೂಲ ಉದ್ದೇಶವಾಗಿತ್ತು.
ಇಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ: ವೇದದಲ್ಲಿ ಹೇಳಿದ ಅಧ್ಯಾತ್ಮ ಸಾರವನ್ನು ಮನುಷ್ಯಮಾತ್ರರಿಗೆ ಮುಟ್ಟಿಸುವ ಉದ್ದೇಶದಿಂದ ವ್ಯಾಸರು ಮಹಾಭಾರತ ರಚನೆ ಮಾಡಿದರು. ಹಾಗಾಗಿ ಬ್ರಹ್ಮಜ್ಞಾನಿಗೆ ವೇದಾರ್ಥ ನಿರ್ಣಯಕ್ಕಾಗಿ ಭಾರತವಾದರೆ, ಉಳಿದವರಿಗೆ ಮಹಾಭಾರತವೇ ವೇದ. ಹೀಗಿರುವಾಗ ಮಹಾಭಾರತದ ಅಂಗವಾದ  ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮವನ್ನು ಸ್ತ್ರೀಯರು ಓದಬಾರದು  ಎಂದು ಹೇಳುವುದು ಅಸಂಗತ. ಭಾರತಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗಾಗಿ ಭಗವಂತ ನೀಡಿದ ಪಂಚಮ ವೇದ. 

ಏವಂ ಪ್ರವೃತ್ತಸ್ಯ ಸದಾ ಭೂತಾನಾಂ ಶ್ರೇಯಸಿ ದ್ವಿಜಾಃ
ಸರ್ವಾತ್ಮಕೇನಾಪಿ ಯದಾ ನಾತುಷ್ಯದ್ ಹೃದಯಂ ತತಃ೨೫

ನಾತಿಪ್ರಸನ್ನ ಹೃದಯಃ ಸರಸ್ವತ್ಯಾಸ್ತಟೇ ಶುಚೌ
ವಿತರ್ಕಯನ್ ವಿವಿಕ್ತಸ್ಥ ಇದಂ ಚೋವಾಚ ಧರ್ಮವಿತ್೨೬

ಪ್ರಾಣಿಮಾತ್ರದ ಶ್ರೇಯಸ್ಸಿಗಾಗಿ  ವೇದವಿಭಾಗ, ಹದಿನೇಳು ಪುರಾಣಗಳು ಮತ್ತು ಭಾರತ ರಚಿಸಿದ ವ್ಯಾಸರಿಗೆ ತೃಪ್ತಿಯಾಗಲಿಲ್ಲವಂತೆ. ತಾನು ಸಮಾಜಕ್ಕೆ ಕೊಟ್ಟಿದ್ದು ಸಾಲದು, ಇನ್ನೂ ಏನಾದರೂ ಕೊಡಬೇಕು ಎಂದು ಯೋಚಿಸುತ್ತಿರುವವರಂತೆ, ಧ್ಯಾನ ಮಾಡುತ್ತಾ ಸರಸ್ವತೀ ನದಿ ತೀರದಲ್ಲಿ ಏಕಾಂತದಲ್ಲಿ ಕುಳಿತರಂತೆ ವ್ಯಾಸರು.
ಧೃತವ್ರತೇನ ಹಿ ಮಯಾ ಛಂದಾಂಸಿ ಗುರವೋSಗ್ನಯಃ
ಮಾನಿತಾ ನಿರ್ವ್ಯಳೀಕೇನ ಗೃಹೀತಂ ಚಾನುಶಾಸನಮ್೨೭

“ತಾನು ವ್ರತನಿಷ್ಠನಾಗಿ ವೇದಗಳನ್ನೂ, ಗುರುಗಳನ್ನೂ ಹಾಗೂ ಅಗ್ನಿಯನ್ನೂ ಸತ್ಕರಿಸಿದೆ. ಗುರುಗಳ ಆಜ್ಞೆಗನುಗುಣವಾಗಿ ನಡೆದಿದ್ದೇನೆ. ನಾನಿನ್ನೂ ಮಾಡಬೇಕಾದ ಕೆಲಸ ಬಾಕಿ ಇದೆ; ಅದು ಪೂರ್ಣವಾಗಿಲ್ಲ ಎಂದು ನನಗನಿಸುತ್ತಿದೆ”  ಎಂದುಕೊಳ್ಳುತ್ತಾರೆ ವ್ಯಾಸರು. ಭಗವಂತನ ಅವತಾರವಾದ ವ್ಯಾಸರು ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ನಿಮಗನಿಸಬಹುದು. ಇದಕ್ಕೆ ಕಾರಣ-ಭಗವಂತ ತನ್ನ ಅವತಾರದಲ್ಲಿ ತಾನು ಯಾವ ರೂಪದಲ್ಲಿ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೋ, ಆ ರೂಪದ ಧರ್ಮಕ್ಕನುಗುಣವಾಗಿ ನಡೆದುಕೊಳ್ಳುತ್ತಾನೆ. ಆ ಪಾತ್ರಕ್ಕನುಗುಣವಾದ ಕರ್ಮವನ್ನು ಮಾಡಿ ಜನರಿಗೆ ಮಾರ್ಗದರ್ಶನ ಮಾಡುತ್ತಾನೆ. ಶ್ರೀಕೃಷ್ಣ ಪ್ರತಿನಿತ್ಯ ಸಂಧ್ಯಾವಂದನೆ ಮಾಡುತ್ತಿದ್ದುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಇಲ್ಲಿ ವ್ಯಾಸರು ತಾವು ಅತೃಪ್ತರಾದವರಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಭಗವಂತನ ಲೀಲೆ.

ಭಾರತವ್ಯಪದೇಶೇನ ಹ್ಯಾಮ್ನಾಯಾರ್ಥಃ ಪ್ರದರ್ಶಿತಃ
ದೃಶ್ಯತೇ ಯತ್ರ ಧರ್ಮೋ ಹಿ ಸ್ತ್ರೀಶೂದ್ರಾದಿಭಿರಪ್ಯುತ೨೮

ಭಾರತ ಎನ್ನುವ ಗ್ರಂಥ ರಚನೆಯಿಂದ ಇಡೀ ವೇದ ಸಾರವನ್ನು ಜಗತ್ತಿಗೆ ಕೊಟ್ಟಂತಾಗಿದೆ. ಆದರೂ ಕೂಡಾ ಇನ್ನೂ ಏನನ್ನೋ ಕೊಡಬೇಕು ಅನಿಸುತ್ತಿದೆ ವ್ಯಾಸರಿಗೆ.

ಅಥಾಪಿ ಬತ ಮೇ ದೈಹ್ಯೋ ಹ್ಯಾತ್ಮಾ ಚೈವಾತ್ಮನಾ ವಿಭುಃ
ಅಸಂಪನ್ನ ಇವಾಭಾತಿ ಬ್ರಹ್ಮವರ್ಚಸ್ವಿಸತ್ತಮಃ೨೯

ಸ್ವಸಾಮರ್ಥ್ಯದಿಂದಲೇ ಎಲ್ಲವನ್ನೂ ತಿಳಿಯಬಲ್ಲ ಶಕ್ತಿಯುಳ್ಳ ವ್ಯಾಸರಿಗೆ ಬ್ರಹ್ಮವರ್ಚಸ್ವಿಗಳಲ್ಲಿ ಉತ್ತಮವಾದ, ಸ್ವತಃ ಪೂರ್ಣವಾದ ದೇಹರೂಪವಾದ ತನ್ನ ಆತ್ಮ ಕೃತಕೃತ್ಯವಾಗಿಲ್ಲದಂತೆ ಕಾಣುತ್ತದೆ!

ಕಿಂ ವಾ ಭಾಗವತಾ ಧರ್ಮಾ ನ ಪ್ರಾಯೇಣ ನಿರೂಪಿತಾಃ
ಪ್ರಿಯಾಃ ಪರಮಹಂಸಾನಾಂ ತ ಏವ ಹ್ಯಚ್ಯುತಪ್ರಿಯಾಃ೩೦

ಎಲ್ಲವನ್ನೂ ಕೊಟ್ಟ ಮೇಲೆ ಏಕೀ ಕೊರತೆ? ಪ್ರಾಯಃ ಹೀಗಿರಬಹುದು: ಭಗವಂತನ ಮಹಿಮೆಯ ಬಿತ್ತರಕ್ಕೋಸ್ಕರ ಅನೇಕ ಗ್ರಂಥ ರಚನೆ ನನ್ನಿಂದಾಯಿತು. ಆದರೆ ಕೇವಲ ಭಗವಂತನ ಮಹಿಮೆಯನ್ನು ನೇರವಾಗಿ ಎತ್ತಿ ತೋರುವ ಒಂದು ಗ್ರಂಥವನ್ನು ನಾನು ಕೊಟ್ಟಿಲ್ಲ. ಭಗವಂತನ ಮಹಾಮಹಿಮೆಯನ್ನು ಬಿತ್ತರಿಸುವ ಒಂದು ವಿಶಿಷ್ಠ ಗ್ರಂಥವನ್ನು ನಾನು ಜನರಿಗೆ ಕೊಡಬೇಕು. “ಸರ್ವಸ್ವವನ್ನೂ ತ್ಯಾಗಮಾಡಿದ ಪರಮಹಂಸರಿಗೂ ಪ್ರಿಯವಾಗುವ ಒಂದು ಗ್ರಂಥ ರಚನೆ ನನ್ನಿಂದಾಗಿಲ್ಲ” ಎನ್ನುವ ಅತೃಪ್ತಿಯನ್ನು ವ್ಯಾಸರು ವ್ಯಕ್ತಪಡಿಸಿದರು ಎನ್ನುತ್ತಾರೆ ಉಗ್ರಶ್ರವಸ್.

ತಸ್ಯೈವಂ ಖಿಲಮಾತ್ಮಾನಂ ಮನ್ಯಮಾನಸ್ಯ ಖಿದ್ಯತಃ
ಕೃಷ್ಣಸ್ಯ ನಾರದೋSಭ್ಯಾಗಾದಾಶ್ರಮಂ ಪ್ರಾಗುದಾಹೃತಮ್೩೧

ತಮಭಿಜ್ಞಾಯ ಸಹಸಾ ಪ್ರತ್ಯುತ್ಥಾಯಾಗತಂ ಮುನಿಮ್
ಪೂಜಯಾಮಾಸ ವಿಧಿವನ್ನಾರದಂ ಸುರಪೂಜಿತಮ್೩೨


ಈ ರೀತಿ ವ್ಯಾಸರು ಅತೃಪ್ತರಾಗಿ ಯೋಚಿಸುತ್ತಾ ಕುಳಿತಿರುವಂತೆ  ತೋರಿಕೊಂಡಾಗ, ಅಲ್ಲಿಗೆ ಬ್ರಹ್ಮಪುತ್ರ ನಾರದರ ಆಗಮನವಾಗುತ್ತದೆ ಮತ್ತು ವ್ಯಾಸರು ನಾರದರನ್ನು ಸತ್ಕರಿಸುತ್ತಾರೆ  ಎನ್ನುವಲ್ಲಿಗೆ ಈ ಅಧ್ಯಾಯ ಕೊನೆಗೊಳ್ಳುತ್ತದೆ.


ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಚತುರ್ಥೋSಧ್ಯಾಯಃ

ಭಾಗವತ ಮಹಾಪುರಾಣದ ಮೊದಲ ಸ್ಕಂಧದ ನಾಲ್ಕನೇ ಅಧ್ಯಾಯ ಮುಗಿಯಿತು.


********

No comments:

Post a Comment